ಭಿಕ್ಷೆ ಬೇಡದ ಮಗಳನ್ನು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ತಾಯಿ
ಹುಬ್ಬಳ್ಳಿ, ಜುಲೈ 13 : 'ತಮ್ಮ ತಾಯಿ ಶಾಲೆಗೆ ಕಳಿಸಲ್ಲ, ಸರಿಯಾಗಿ ಊಟ ನೀಡುವುದಿಲ್ಲ. ಭಿಕ್ಷೆ ಬೇಡಿಕೊಂಡು ಬಾ ಎಂದು ಒತ್ತಾಯ ಮಾಡುತ್ತಾಳೆ' ಎಂಬ ಬಾಲಕಿಯ ಮಾತು ಕೇಳಿ ಪೊಲೀಸರ ಕಣ್ಣಂಚುಗಳು ಒದ್ದೆಯಾಗಿದ್ದವು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ತಾಯಿ ಬರುತ್ತಾಳೆ ಎಂದು ಕಾದು ಕುಳಿತಿದ್ದ ಮಗು ಆಡಿದ ಮಾತುಗಳಿವು.
ಭಿಕ್ಷೆ ಬೇಡಲು ಒಪ್ಪದ ಮಗಳನ್ನು ತಾಯಿ ರೈಲ್ವೆ ನಿಲ್ದಾಣದಲ್ಲಿಯೇ ಬಿಟ್ಟು ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರೈಲ್ವೆ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದು, ಬಾಲಮಂದಿರದಲ್ಲಿ ಆಕೆಗೆ ವಾಸ್ತವ್ಯ ಕಲ್ಪಿಸಿದ್ದಾರೆ. [ಮುಸ್ಲಿಂ ಬಾಲಕನ ಪ್ರಾಣ ಉಳಿಸಿದ ಹಿಂದೂ ಯುವಕರು!]
ಅಮ್ಮನ ಬರುವಿಕೆಗಾಗಿ ರೈಲು ನಿಲ್ದಾಣದಲ್ಲಿ ದಿನವಿಡೀ ಕಾದ ಬಾಲಕಿ ಹೂವಕ್ಕ. ಮಂಗಳವಾರ ಬೆಳಗ್ಗೆಯಿಂದ ಸಂಜೆ ತನಕ ಆಕೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿದ್ದಳು. ಅಲ್ಲಿ ಓಡಾಡಿದ ನೂರಾರು ಜನರು ಹೂವಕ್ಕನ ಕಷ್ಟ ಕೇಳಲಿಲ್ಲ. ಸಂಜೆ ಪೊಲೀಸರು ವಿಚಾರಣೆ ನಡೆಸಿದಾಗಲೇ ತಾಯಿಯೇ ಆಕೆಯನ್ನು ಬಿಟ್ಟು ಹೋಗಿರುವ ಕಥೆ ಬೆಳಕಿಗೆ ಬಂದಿದೆ. [ಮಾನವೀಯತೆ ಮರೆತ ಜನರಿಗೆ ಏನು ಹೇಳಬೇಕು?]
ಮೂಲತಃ ರಾಣೆಬೆನ್ನೂರಿನವಳಾದ ಹೂವಕ್ಕ ತಾಯಿ ಹಾಗೂ ಸಹೋದರಿಯೊಂದಿಗೆ ಹುಬ್ಬಳ್ಳಿಗೆ ಬಂದಿದ್ದಳು. ಆದರೆ, ರೈಲು ನಿಲ್ದಾಣದಲ್ಲಿ ಹೂವಕ್ಕನನ್ನು ಕೂರಿಸಿ, ಊಟ ತರುತ್ತೇವೆ ಎಂದು ಹೋದ ತಾಯಿ ಮತ್ತು ಸಹೋದರಿ ಸಂಜೆಯಾದರೂ ವಾಪಸ್ ಬಂದಿರಲಿಲ್ಲ. ಹೂವಕ್ಕನ ಕಣ್ಣುಗಳು ಮಾತ್ರ ತಾಯಿಯ ಬರುವಿಕೆಗಾಗಿ ಕಾಯುತ್ತಿತ್ತು. [ಹೆತ್ತ ಮಗುವನ್ನೇ ಚರಂಡಿಗೆ ಎಸೆದ ನಿರ್ದಯಿ ತಾಯಿ!]
ರೈಲು ನಿಲ್ದಾಣದಲ್ಲಿ ಕುಳಿತಿದ್ದ ಬಾಲಕಿಯನ್ನು ಗಮನಿಸಿದ ರೈಲ್ವೆ ಪೊಲೀಸರು ಹೂವಕ್ಕ ಬಳಿ ಹೋಗಿ ಯಾವ ಊರಿಗೆ ಹೋಗಬೇಕು? ಎಂದು ಪ್ರಶ್ನಿಸಿದ್ದಾರೆ. ಆಗ ಆಕೆಯ ದುಃಖದ ಕಟ್ಟೆ ಒಡೆದಿದೆ. ಜೋರಾಗಿ ಅಳುತ್ತಿದ್ದ ಬಾಲಕಿಯನ್ನು ಸಮಾಧಾನಪಡಿಸಿ ಪೊಲೀಸರು ವಿವರ ಸಂಗ್ರಹಿಸಿದಾಗ ತಾಯಿ ತನ್ನನ್ನು ಇಲ್ಲಿ ಬಿಟ್ಟು ಹೋಗಿದ್ದಾಳೆ ಎಂದು ಹೂವಕ್ಕ ಕಣ್ಣೀರಿಟ್ಟಿದ್ದಾಳೆ. [ತಾಯಿಯೇ ಹೆತ್ತ ಮಗುವನ್ನು ಕೊಂದಿದ್ದು ಯಾಕೆ?]
'ತಮ್ಮ ತಾಯಿ ಶಾಲೆಗೆ ಕಳಿಸಲ್ಲ, ಸರಿಯಾಗಿ ಊಟ ನೀಡುವುದಿಲ್ಲ. ಭಿಕ್ಷೆ ಬೇಡಿಕೊಂಡು ಬಾ ಎಂದು ಒತ್ತಾಯ ಮಾಡುತ್ತಾಳೆ' ಎಂದು ಪೊಲೀಸರಿಗೆ ವಿವರಣೆ ನೀಡಿದ್ದಾಳೆ. ಬಾಲಕಿಯಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರು ಆಕೆ ನೀಡಿದ ಸಹೋದರನ ಮೊಬೈಲ್ ನಂಬರ್ಗೆ ಕರೆ ಮಾಡಿದ್ದಾರೆ.
ಆದರೆ, ಸಹೋದರನ ಫೋನ್ ಸ್ವಿಚ್ ಆಫ್ ಆಗಿತ್ತು. ಆದ್ದರಿಂದ, ಬಾಲಕಿಯನ್ನು ಬಾಲ ಮಂದಿರಕ್ಕೆ ಒಪ್ಪಿಸುವ ನಿರ್ಧಾರವನ್ನು ಅವರು ತೆಗೆದುಕೊಂಡರು. ಬಾಲಕಿಗೆ ಸದ್ಯ, ಘಂಟಿಕೇರಿಯ ಬಾಲ ಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಹೆತ್ತ ತಾಯಿ ಮಗಳನ್ನು ಹುಡುಕಿಕೊಂಡು ಬರುವಳೇ?.