ಕಳಸಾ ಬಂಡೂರಿ, ಪ್ರಹ್ಲಾದ್ ಜೋಶಿ ಮೇಲೆ ರೈತರ ಕೆಂಗಣ್ಣು
ಹುಬ್ಬಳ್ಳಿ,ಮಾರ್ಚ್,16: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ರೈತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಕೈಗೊಂಡ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ್ ಜೋಶಿಯೇ ಕಾರಣ ಎಂದು ರೈತ ಸೇನಾ ಒಕ್ಕೂಟದ ಅಧ್ಯಕ್ಷ ವೀರೇಶ ಸೊರಬದಮಠ ಆರೋಪಿಸಿದ್ದಾರೆ.
ರೈತರು ಶಾಂತ ರೀತಿಯಿಂದ ಪ್ರತಿಭಟನೆಯಲ್ಲಿ ಶಾಂತ ರೀತಿಯಿಂದ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಭೇಟಿಯ ಬಳಿಕ ಮನೆಗೆ ಮರಳುವಾಗ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕೇಂದ್ರ ಸರಕಾರಕ್ಕೆ ಕಳಸಾ-ಬಂಡೂರಿ ಯೋಜನೆಯನ್ನು ಜಾರಿಗೆ ತರಲು ಮನಸ್ಸಿಲ್ಲ. ಹಾಗಾಗಿ ರೈತರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.[ತೀವ್ರಗೊಂಡ ಕಳಸಾ ಹೋರಾಟ : ಹುಬ್ಬಳ್ಳಿಯಲ್ಲಿ ರೈಲು ಬಂದ್]
ಪ್ರತಿಭಟನೆಯಲ್ಲಿ ಬಿಜಾಪುರ ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ ಹೀಗೆ ನಾನಾ ಜಿಲ್ಲೆಗಳ ರೈತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಪೊಲೀಸರು ನಡೆಸಿದ ಲಾಠಿ ಪ್ರಹಾರದ ವೇಳೆ ಮಹಿಳೆಯರು, ವೃದ್ಧರು, ರೈತರು ಹೀಗೆ ಹಲವಾರು ಜನ ಗಾಯಗೊಂಡಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ?]
ಪ್ರತಿಭಟನೆ ವೇಳೆ ರೈತರು ಕಲ್ಲುತೂರಾಟ ನಡೆಸಿದ್ದು, ಆ ವೇಳೆ 35ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ. ರೈತರ ಕಲ್ಲು ತೂರಾಟದಲ್ಲಿ ರೈಲ್ವೆ ಇಲಾಖೆಯ ಪೊಲೀಸರು ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ 5 ಕ್ಕೂ ಹೆಚ್ಚು ಸರಕಾರಿ ಬಸ್ ಗಳ ಗಾಜುಗಳು ಪುಡಿಗೊಂಡಿವೆ.