ಬರ, ಹಿಂಗಾರು ಬೆಳೆ ನಷ್ಟ : ಧಾರವಾಡದಲ್ಲಿ ಕೇಂದ್ರ ತಂಡ ಪರಿಶೀಲನೆ
ಧಾರವಾಡ, ಫೆಬ್ರವರಿ 27 : ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಧಾರವಾಡ ಜಿಲ್ಲೆಯ ವಿವಿಧ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ವಿವಿಧ ಸೌಲಭ್ಯಗಳ ಕುರಿತು ರೈತರೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು.
ಹಿಂಗಾರು ಬೆಳೆ ನಷ್ಟ ಹಾಗೂ ಕುಡಿಯುವ ನೀರು, ದನಕರುಗಳಿಗೆ ಮೇವು, ನರೇಗಾ ಉದ್ಯೋಗ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಅಧ್ಯಯನ ಮಾಡಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲು ತಂಡ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ.
ಕೇಂದ್ರ ಸರ್ಕಾರದ ಜಲಸಂಪನ್ಮೂಲ ಮಂತ್ರಾಲಯದ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೊಜಿ ಅವರ ನೇತೃತ್ವದ ತಂಡದಲ್ಲಿ ಕೇಂದ್ರ ಪಶುಸಂಗೋಪನಾ ಮಂತ್ರಾಲಯದ ಹಿರಿಯ ಅಧಿಕಾರಿ ಡಾ.ತರುಣಕುಮಾರ್ ಸಿಂಗ್, ಭಾರತ ಆಹಾರ ನಿಗಮದ ಉಪಪ್ರಧಾನ ವ್ಯವಸ್ಥಾಪಕರು ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಮಂತ್ರಾಲಯದ ಸತ್ಯಕುಮಾರ ಮತ್ತು ದೇವರಾಜ ಅವರಿದ್ದಾರೆ.
ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ಸಭಾಭವನದಲ್ಲಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆ, ಬಿತ್ತನೆ ಮತ್ತು ಉಂಟಾಗಿರುವ ಬೆಳೆ ನಷ್ಟ ಹಾಗೂ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ತಂಡಕ್ಕೆ ವಿವರಣೆ ನೀಡಿದರು.

ರೈತರಿಂದ ಮಾಹಿತಿ ಸಂಗ್ರಹ
ಧಾರವಾಡ ಜಿಲ್ಲಾಧಿಕಾರಿಗಳಿಂದ ಜಿಲ್ಲೆಯ ಸಮಗ್ರ ಮಾಹಿತಿ ಪಡೆದ ಅಧಿಕಾರಿಗಳ ತಂಡ ಧಾರವಾಡ ತಾಲೂಕಿನ ಮನಸೂರ ಗ್ರಾಮದ ಕರೆವ್ವ ಕರೆಪ್ಪಗೌಡ ಪಾಟೀಲ ಮತ್ತು ಶಿವಾನಂದ ಸಿದ್ದಪ್ಪ ಕುರಬರ ಅವರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದುಕೊಂಡಿತು.

ಅಮ್ಮಿನಭಾವಿಗೆ ಭೇಟಿ
ಅಮ್ಮಿನಭಾವಿ ಹೋಬಳಿಯ ಈರಪ್ಪ ಬಾಳಪ್ಪ ಧಾರವಾಡ ಅವರ ಜಮೀನಿಗೆ ಭೇಟಿ ನೀಡಿದ ತಂಡವು ಅಲ್ಲಿನ ಕುಸುಬಿ ಮತ್ತು ಕಡಲೆ ಮಿಶ್ರಬೆಳೆ ಹಾನಿ, ಗೋಧಿ ಬೆಳೆ ಹಾನಿ, ಜೋಳದ ಬೆಳೆಹಾನಿ ಮತ್ತು ಮೆಣಸಿನಕಾಯಿ ಹಾಗೂ ಈರುಳ್ಳಿ ಮಿಶ್ರ ಬೆಳೆಹಾನಿ ಕುರಿತು ಪರಿಶೀಲಿಸಿದರು. ಜಮೀನಿನಲ್ಲಿ ಕೃಷಿ ಇಲಾಖೆ ಸಹಾಯಧನದಲ್ಲಿ ನಿರ್ಮಿಸಿರುವ ಕೃಷಿಹೊಂಡ ವೀಕ್ಷಿಸಿದರು.

ಜೋಳದ ಬೆಳೆ ಹಾನಿ
ಹಾರೋಬೆಳವಡಿ ಗ್ರಾಮದ ರೈತ ಬಸನಗೌಡ ಮಲ್ಲನಗೌಡ ಕೋಟೂರ ಅವರ ಜಮೀನಿಗೆ ತಂಡವು ಭೇಟಿ ನೀಡಿ, ನರೇಗಾ ಯೋಜನೆಯಡಿ ಉದ್ಯೋಗ ನೀಡಿ ನಿರ್ಮಿಸುತ್ತಿರುವ ಬದು ನಿರ್ಮಾಣ ಕಾರ್ಯ ಹಾಗೂ ಜೋಳದ ಬೆಳೆ ಹಾನಿ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿತು. ಕಾರ್ಮಿಕರ ಜೊತೆ ಮಾತುಕತೆ ನಡೆಸಿತು.

ವರದಿ ಸಲ್ಲಿಸಿದೆ
ತಂಡದ ನೇತೃತ್ವವಹಿಸಿದ್ದ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೊಜಿ ಅವರು ಮಾತನಾಡಿ, 'ಜಿಲ್ಲಾಡಳಿತ ಹಿಂಗಾರು ಬೆಳೆಹಾನಿ ಹಾಗೂ ಬರ ಪರಿಹಾರಗಳ ಕುರಿತು ಪ್ರಸ್ತಾವನೆ, ವರದಿ ಸಲ್ಲಿಸಿದೆ. ತಂಡವು ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ರೈತರೊಂದಿಗೆ ಚರ್ಚೆ ಮಾಡಿ ಮಾಹಿತಿ ಪಡೆಯುತ್ತಿದೆ. ನಮ್ಮ ತಂಡವು ಧಾರವಾಡ, ಬೆಳಗಾವಿ, ಬಾಗಲಕೋಟ, ವಿಜಯಪುರ ಮತ್ತು ಗದಗ ಜಿಲ್ಲೆಗಳಲ್ಲಿ ಅಧ್ಯಯನ ಮಾಡಲಿದೆ. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ' ಎಂದರು.












Click it and Unblock the Notifications