ಟಿಕೆಟ್ 'ಕೈ' ತಪ್ಪಿದ ಬೇಸರವಿದೆ, ಆದರೆ ಪಕ್ಷಕ್ಕೆ ದ್ರೋಹ ಮಾಡಲ್ಲ
ದಾವಣಗೆರೆ, ಏಪ್ರಿಲ್ 23; ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಮಾರ್ಚ್ 29ಕ್ಕೆ. ಆದರೆ ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯನ್ನು ಮಾರ್ಚ್ 25ಕ್ಕೆ ಬಿಡುಗಡೆ ಮಾಡಿ 124 ಅಭ್ಯರ್ಥಿಗಳನ್ನು ಹೆಸರಿಸಿತ್ತು. ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸಿತ್ತು. ಆದರೆ ದಾವಣಗೆರೆ ಜಿಲ್ಲೆಯ ಹರಿಹರದ ಲೆಕ್ಕಾಚಾರವೇ ಬದಲಾಗಿತ್ತು.
ಹರಿಹರ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರು ಇದ್ದರೂ ಅಭ್ಯರ್ಥಿ ಘೋಷಣೆಯಾಗಿದ್ದು ಕೊನೆಯ ಪಟ್ಟಿಯಲ್ಲಿ. ಎಸ್. ರಾಮಪ್ಪ ಕ್ಷೇತ್ರದ ಹಾಲಿ ಶಾಸಕರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಶ್ರೀನಿವಾಸ್ ನಂದಿಗಾವಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ.

ಟಿಕೆಟ್ ಕೈತಪ್ಪಿದ ಕುರಿತು ಶಾಸಕ ಎಸ್. ರಾಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. "ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ ಆಗಿದೆ. ಆಪರೇಷನ್ ಕಮಲದ ವೇಳೆ ನೋಟಿನ ಕಂತೆಗಳನ್ನು ತಂದಿದ್ದರು. ಆಗ ನಾನು ದುಡ್ಡು, ಅಧಿಕಾರಕ್ಕೆ ಆಸೆ ಪಡಲಿಲ್ಲ. ನಾನು ಪಕ್ಷಕ್ಕೆ ನಿಷ್ಠೆಯಿಂದ ಇದ್ದ ವ್ಯಕ್ತಿ" ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ಕುರಿತು ಮಾತನಾಡಿದ ಅವರು, "ವರಿಷ್ಠರು ಚಿಂತಿಸಬೇಕಿತ್ತು, ನಾನು ಪಕ್ಷಕ್ಕೆ ಅನ್ಯಾಯ ಮಾಡಲ್ಲ. ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ, ಪ್ರಚಾರವನ್ನು ಮಾಡುತ್ತೇನೆ" ಎಂದು ಎಸ್. ರಾಮಪ್ಪ ಸ್ಪಷ್ಟಪಡಿಸಿದರು.
ಟಿಕೆಟ್ ಯಾರಿಗೆ ಎಂಬ ಗೊಂದಲ; ಕಾಂಗ್ರೆಸ್ ಅಭ್ಯರ್ಥಿಗಳ ಮೂರು ಪಟ್ಟಿ ಬಿಡುಗಡೆಗೊಂಡರೂ ಹರಿಹರ ಕ್ಷೇತ್ರಕ್ಕೆ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಯಾರಿಗೆ ಟಿಕೆಟ್ ಎಂಬುದು ಖಚಿತವಾಗಿರಲಿಲ್ಲ. ಹಾಲಿ ಶಾಸಕ ಎಸ್. ರಾಮಪ್ಪ ಬದಲು ಯುವಕ ನಂದಿಗಾವಿ ಶ್ರೀನಿವಾಸ್ಗೆ ಪಕ್ಷ ಅವಕಾಶ ನೀಡಿದೆ.

ಹರಿಹರ ಕ್ಷೇತ್ರದ ಟಿಕೆಟ್ಗಾಗಿ ಹಾಲಿ ಶಾಸಕ ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್, ಎಂ. ನಾಗೇಂದ್ರಪ್ಪ ಸೇರಿದಂತೆ 10 ಆಕಾಂಕ್ಷಿಗಳು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಎಸ್. ರಾಮಪ್ಪ ಈ ಬಾರಿಯೂ ಟಿಕೆಟ್ ಪಡೆಯಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಟಿಕೆಟ್ ನಂದಿಗಾವಿ ಶ್ರೀನಿವಾಸ್ ಪಾಲಾಗಿದೆ.
ಬಾದಾಮಿಯಿಂದ ಹೊರಬರುವ ಸಿದ್ದರಾಮಯ್ಯ ವರುಣ ಮತ್ತು ಹರಿಹರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳಿತ್ತು. ಈ ಹಿನ್ನಲೆಯಲ್ಲಿ ಹರಿಹರಕ್ಕೆ ಪಕ್ಷ ಅಭ್ಯರ್ಥಿ ಘೋಷಣೆ ಮಾಡಿಲ್ಲ ಎಂಬ ಮಾತುಗಳು ಕೇಳಿಬಂದವು. ಅಂತಿಮ ಪಟ್ಟಿಯಲ್ಲಿ ಪಕ್ಷ ನಂದಿಗಾವಿ ಶ್ರೀನಿವಾಸ್ ಹೆಸರು ಘೋಷಣೆ ಮಾಡುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆಬಿತ್ತು.
ಯಾರು ಕಾಂಗ್ರೆಸ್ ಅಭ್ಯರ್ಥಿ?; ಹರಿಹರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಯುವ ನಾಯಕ. ಭದ್ರಾವತಿಯ ವಿಐಎಸ್ಎಲ್ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿ ನಿವೃತ್ತರಾದ ರಾಮಚಂದ್ರಪ್ಪ ಅವರು ಪುತ್ರ. ಯುವ ನಾಯಕ, ನಂದಿಗಾವಿ ಯುವ ಬ್ರಿಗೇಡ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕೋವಿಡ್ ಸಮಯದಲ್ಲಿ ಕಿಟ್ ಹಂಚಿಕೆ, ಸ್ಮರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಹರಿಹರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಎಸ್. ರಾಮಪ್ಪ 64801 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಬಿಜೆಪಿಯ ಬಿ. ಪಿ. ಹರೀಶ್ 57541 ಮತಗಳನ್ನು ಪಡೆದು ಸೋಲು ಕಂಡಿದ್ದರು. 2013ರಲ್ಲಿ ಜೆಡಿಎಸ್ನ ಎಚ್. ಎಸ್. ಶಿವಶಂಕರ್ 59666 ಮತಗಳನ್ನು ಪಡೆದು ಕಾಂಗ್ರೆಸ್ನ ಎಸ್. ರಾಮಪ್ಪ ಸೋಲಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿಯಿಂದ ಬಿ. ಪಿ. ಹರೀಶ್ ಅಭ್ಯರ್ಥಿ, ಕಾಂಗ್ರೆಸ್ನಿಂದ ನಂದಿಗಾವಿ ಶ್ರೀನಿವಾಸ್ ಮತ್ತು ಜೆಡಿಎಸ್ನಿಂದ ಎಚ್. ಎಸ್. ಶಿವಶಂಕರ್ ಅಭ್ಯರ್ಥಿಗಳು. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications