ದಾವಣಗೆರೆ: ಗಣಿತ 100ಕ್ಕೆ 100: ಸಂಭ್ರಮಿಸಲು ಅವಳೇ ಇಲ್ಲ!
ದಾವಣಗೆರೆ, ಜುಲೈ 17: ಪ್ರತಿಭಾವಂತ ವಿದ್ಯಾರ್ಥಿನಿ ಅನುಷ. ಬಿ ಪಿಯುಸಿ ಪರೀಕ್ಷೆಯ ಐದು ವಿಷಯಗಳಲ್ಲಿಯೇ ಶೇ.93 ರಷ್ಟು ಅಂಕ ಪಡೆದಿದ್ದಳು, ಆದರೆ ಈ ಫಲಿತಾಂಶವನ್ನು ನೋಡಿ ಸಂಭ್ರಮಿಸಲು ಅವಳೇ ಇಲ್ಲದಂತಾಗಿದೆ.
Recommended Video
ದಾವಣಗೆರೆಯ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಷ. ಬಿ. ಈಕೆ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತಿದ್ದಳು. ಇವಳಿಗೆ ಜೀವನದಲ್ಲಿ ಏನಾದರೂ ಸಾಧಿಸುವ ಅದಮ್ಯ ಬಯಕೆಯಿತ್ತು. ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಐದು ವಿಷಯಗಳನ್ನು ಬರೆದಿದ್ದಳು.
ಆ ಸಂದರ್ಭದಲ್ಲಿ ಕೊರೊನಾ ಲಾಕ್ಡೌನ್ ಮಾಡಿದ್ದರಿಂದ ಇಂಗ್ಲೀಷ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದ ಕಾರಣ ತನ್ನೂರು ಚನ್ನಗಿರಿಯ ತಾಳಿಕಟ್ಟೆಗೆ ತೆರಳಿದ್ದಳು.

ಇಂಗ್ಲೀಷ್ ವಿಷಯದಲ್ಲೂ ಚೆನ್ನಾಗಿ ಅಂಕಗಳಿಸುವ ಗುರಿ ಹೊಂದಿದ್ದ ಅನುಷಾಳ ವಿಧಿಯಾಟವೆ ಬೇರೆಯಾಗಿತ್ತು. ಈಕೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿನ ವೈದ್ಯರು ಉಡುಪಿಯ ಕಸ್ತೂರ ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಸಿದ್ದರು.
ನಂತರ ಕಸ್ತೂರ ಬಾ ಆಸ್ಪತ್ರೆಗೆ ಸೇರಿಸಲಾಯಿತು. ಆಗ ಈ ವಿದ್ಯಾರ್ಥಿನಿಗೆ ಬ್ಲಡ್ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಚಿಕಿತ್ಸೆಯ ನಡುವೆಯೂ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಕಾಲೇಜಿನ ಆಡಳಿತ ಮಂಡಳಿಯವರೂ ಸಾಕಷ್ಟು ಧೈರ್ಯ ತುಂಬಿದ್ದರು. ಇಂಗ್ಲೀಷ್ ಪರೀಕ್ಷೆಯ ಜೊತೆಗೆ ನೀಟ್ ಪರೀಕ್ಷೆಗೂ ಸಿದ್ಧವಾಗುತ್ತಿದ್ದಳು.

ಈ ನಡುವೆ ಇಂಗ್ಲೀಷ್ ಪರೀಕ್ಷೆ ಜೂನ್ 18 ಕ್ಕೆ ನಿಗದಿಯಾಯಿತಾದರೂ ಪರೀಕ್ಷೆಯ ಮುನ್ನಾದಿನ ಅನುಷ ಅಸುನೀಗಿದಳು. ಇದು ಕುಟುಂಬ ವರ್ಗ ಮತ್ತು ಆಪ್ತ ವಲಯದವರ ದುಃಖ ಮಡುಗಟ್ಟುವಂತೆ ಮಾಡಿತ್ತು.
ಇತ್ತೀಚಿಗೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕನ್ನಡ 92, ಭೌತಶಾಸ್ತ್ರ 91, ರಸಾಯನಶಾಸ್ತ್ರ 89, ಗಣಿತ 100, ಜೀವಶಾಸ್ತ್ರ 95 ಅಂಕ ಪಡೆದಿದ್ದಾಳೆ.
ಭವಿಷ್ಯದಲ್ಲಿ ವೈದ್ಯಳಾಗುವ ಕನಸು ಕಾಣುತ್ತಿದ್ದ ಅನುಷಾಳ ಕನಸು ಅರ್ಧದಲ್ಲೇ ಮುರುಟಿ ಹೋಗಿದೆ. ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದರೂ ಸಂಭ್ರಮಿಸಲು ಅವಳೇ ಇಲ್ಲದಂತಾಗಿದೆ.












Click it and Unblock the Notifications