370ನೇ ವಿಧಿ ರದ್ದು ಮಾಡಿದ ಮೋದಿ ನಿರ್ಧಾರವನ್ನು ಹಾಡಿ ಹೊಗಳಿದ ಭಗವಾನ್
ಹರಿಹರ (ದಾವಣಗೆರೆ), ಆಗಸ್ಟ್ 18: "ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿ ರದ್ದು ಮಾಡಿರುವುದನ್ನು ನಾನು ಈಗಲೂ ಸ್ವಾಗತಿಸುತ್ತೇನೆ. ಅದು ಮೋದಿಯವರ ಒಳ್ಳೆ ಕೆಲಸ. ಅದರಿಂದ ಇಡೀ ಭಾರತದಲ್ಲಿ ಎಲ್ಲ ರಾಜ್ಯಗಳು ಸಮಾನ ಎಂದು ಸಾರಿದೆ" ಎಂದು ಚಿಂತಕ ಪ್ರೊ ಭಗವಾನ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭಾನುವಾರ ಮತ್ತೊಮ್ಮೆ ಹೊಗಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುರುಭವನದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತತ್ವ- ಸಿದ್ಧಾಂತಗಳು ಏನೇ ಇದ್ದರೂ ಒಳ್ಳೆಯದನ್ನು ಮಾಡಿದಾಗ ಮೆಚ್ಚಬೇಕು, ಸ್ವಾಗತಿಸಬೇಕು. ಈ ಹಿಂದೆಯೂ ಮೋದಿಯವರು ಸಂವಿಧಾನವನ್ನು ರಾಷ್ಟ್ರದ ಧರ್ಮ ಗ್ರಂಥ ಎಂದು ಹೇಳಿದ್ದರು. ಅದನ್ನು ಮೆಚ್ಚಿ ಲೇಖನ ಬರೆದಿದ್ದೇನೆ ಎಂದು ಹೇಳಿದರು.
ವಿರೋಧ ಮಾಡುತ್ತೇವೆಂದು ಎಂದು ಎಲ್ಲವನ್ನೂ ವಿರೋಧಿಸಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ದಿ. ಪ್ರೊ ಬಿ ಕೃಷ್ಣಪ್ಪನವರ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರನ್ನು ಬೆಳಸಿದವರು ಅವರು. ಬಾಬಾ ಸಾಹೇಬ್ ಅಂಬೇಡ್ಕರ್ ರ ಚಿಂತನೆಗಳನ್ನು ಪಾಲನೆ ಮಾಡಿದವರು ಕೃಷ್ಣಪ್ಪ ಎಂದರು.

ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಮೇಲು- ಕೀಳು ಎಂಬುದು ಹೋಗಿಲ್ಲ. ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳಲಾಗುತ್ತದೆ. ಸಂವಿಧಾನದಲ್ಲಿ ಇದ್ದರೂ ಯಾರು ಕೂಡ ಪಾಲನೆ ಮಾಡುತ್ತಿಲ್ಲ. ಯಾರು ಅಂತರ್ಜಾತಿ ವಿವಾಹ ಆಗುತ್ತಾರೋ ಅವರಿಗೆ ಸರಕಾರಿ ನೌಕರಿ ಸಿಗಬೇಕು, ಅಂತಹವರಿಗೆ ಚುನಾವಣೆಗೆ ನಿಲ್ಲುವಂಥ ಕಾನೂನು ಬರಬೇಕು ಎಂದು ಅಭಿಪ್ರಾಯಪಟ್ಟರು.
ಈಗಿನ ಭಾರತದಲ್ಲಿ ಜಾತಿಯೇ ಮುಖ್ಯ ಹೊರತು ಜ್ಞಾನಕ್ಕೆ ಬೆಲೆ ಇಲ್ಲ. ಎಲ್ಲರೂ ಮೊದಲು ಒಂದೇ ಜಾತಿಯವರು. ಕಾಲದ ನಂತರ ಜಾತಿಗಳಾಗಿವೆ. ಪುಸ್ತಕಗಳನ್ನು ಓದುವುದರಿಂದ ತಿಳಿವಳಿಕೆ ಬರುತ್ತದೆ. ಅದನ್ನು ಬಿಟ್ಟು ದೇವಸ್ಥಾನ, ಮಸೀಧಿಗಳಿಗೆ ಹೋಗುವುದರಿಂದ ಬುದ್ಧಿವಂತರಾಗುವುದಿಲ್ಲ. ಓದಿ, ಬುದ್ಧಿಶಕ್ತಿ ಬೆಳೆಸಿಕೊಂಡಾಗ ಮಾತ್ರ ಬುದ್ಧಿವಂತರಾಗುತ್ತಾರೆ ಎಂದರು.
ಸಂಶೋಧಕ ಎಂ. ಎಂ. ಕಲ್ಬುರ್ಗಿ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಭಗವಾನ್, ಈಗಾಗಲೇ ಎರಡು- ಮೂರು ಕೇಸ್ ಆಗಿದೆ. ನಾನೇನಾದರೂ ಮಾತನಾಡಿದರೆ ಮತ್ತೊಂದು ಕೇಸ್ ಬಿದ್ದು, ಓಡಾಡುವ ಕೆಲಸ ಆಗುತ್ತದೆ. ಬೇಕಾದರೆ ಮೈಸೂರಲ್ಲಿ ಮಾತನಾಡುತ್ತೇನೆ ಎಂದರು.












Click it and Unblock the Notifications