"ಎಣ್ಣೆ" ಅಂಗಡಿ ಚಿಲ್ಲರೆಗೆ ಹೋಗಿ ಎರಡು ಲಕ್ಷ ಕಳೆದುಕೊಂಡ್ರು
ದಾವಣಗೆರೆ, ಸೆಪ್ಟೆಂಬರ್ 20: ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಬೈಕ್ ನಲ್ಲಿಟ್ಟು ವೈನ್ ಶಾಪ್ ಗೆ ಹೋಗಿ ಚಿಲ್ಲರೆ ತೆಗೆದುಕೊಂಡು ಬರುವಷ್ಟರಲ್ಲಿ ಎರಡು ಲಕ್ಷ ಮಂಗಮಾಯವಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಸಮೀಪವಿರುವ ಹಳೇ ಕುಂದುವಾಡದ ಗ್ರಾಮದ ವಿರೂಪಾಕ್ಷಪ್ಪ ಆಕ್ಸಿಸ್ ಬ್ಯಾಂಕ್ ನಿಂದ ಎರಡು ಲಕ್ಷ ಹಣ ಬಿಡಿಸಿಕೊಂಡು ಬೈಕ್ ನಲ್ಲಿ ಇಟ್ಟಿದ್ದಾರೆ. ಅದನ್ನು ಗಮನಿಸಿದ ಕಳ್ಳರು ವಿರೂಪಾಕ್ಷಪ್ಪ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಪಿ.ಬಿ. ರಸ್ತೆಯಲ್ಲಿರುವ 180 ಎಂಆರ್ ಪಿಬಾರ್ ನಲ್ಲಿ ಚಿಲ್ಲರೆ ತರಲೆಂದು ಅವರು ಒಳಗೋಗಿದ್ದೇ ತಡ ಕಳ್ಳರು ಬೈಕ್ ನಲ್ಲಿ ಇಟ್ಟಿದ್ದ 2 ಲಕ್ಷ ಹಣವನ್ನು ಎಗರಿಸಿಕೊಂಡು ಹೋಗಿದ್ದಾರೆ.

ಬಾರ್ ಬಳಿ ನಿಲ್ಲಿಸಿರುವ ಬೈಕ್ ನಿಂದ ಕಳ್ಳರು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ನಿರ್ಲಕ್ಷ್ಯದಿಂದ ಬೈಕ್ ನಲ್ಲಿಯೇ ಹಣವಿಟ್ಟು ಬಾರ್ ಗೆ ಚಿಲ್ಲರೆ ತೆಗೆದುಕೊಂಡು ಬರಲು ಹೋಗಿದ್ದ ವಿರೂಪಾಕ್ಷಪ್ಪನ ಮುಖಕ್ಕೆ ಕಳ್ಳರು ಮಂಕುಬೂದಿಯನ್ನು ಎರಚಿದ್ದು, ಕಳ್ಳರನ್ನು ಬಂಧಿಸಿ ಹಣವನ್ನು ವಾಪಸ್ಸು ಕೊಡಿಸುವಂತೆ ವಿರುಪಾಕ್ಷಪ್ಪ ಪೊಲೀಸರ ಮೊರೆ ಹೋಗಿದ್ದಾರೆ.
ಸದ್ಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮರಾ ಸಹಾಯದಿಂದ ಪೋಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.












Click it and Unblock the Notifications