ದಾವಣಗೆರೆ ಪಾಲಿಕೆಯಲ್ಲಿ ಪರ್ಸೆಂಟೇಜ್ ಆಡಳಿತ: ವಿಪಕ್ಷ ಟೀಕೆ
ದಾವಣಗೆರೆ, ಮೇ 25: ಕೊರೊನಾ ವೈರಸ್ ಸಂಕಷ್ಟದ ನಡುವೆಯೇ ದಾವಣಗೆರೆ ಮಹಾನಗರ ಪಾಲಿಕೆ ಸಾರ್ವಜನಿಕರ ಮೇಲೆ ಕಂದಾಯದ ಬರೆ ಹಾಕಿದೆ. ಪಾಲಿಕೆಯಲ್ಲಿ ಸರ್ವಸದಸ್ಯರ ಸಭೆ ಕರೆಯದೇ ಅಧಿಕಾರಿಗಳು ಏಕಾಏಕಿ ಮನೆ ಕಂದಾಯ ಏರಿಕೆ ಮಾಡಿರುವುದು ಖಂಡನೀಯ ಎಂದು ಮಾಜಿ ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಆರೋಪಿಸಿದ್ದಾರೆ.
Recommended Video
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2019-20 ನೇ ಸಾಲಿನ ಕಂದಾಯ ಪಾವತಿಸಲು ಖಾತೆದಾರರು ಪಾಲಿಕೆಯಲ್ಲಿ ಕಂಪ್ಯೂಟರ್ ಮೂಲಕ ರಸೀದಿ ಪಡೆದು ಕಂದಾಯ ಕಟ್ಟಲು ಮುಂದಾದ ವೇಳೆ ಹೆಚ್ಚಿನ ಮೊತ್ತ ಏರಿಕೆಯಾಗಿರುವುದು ತಿಳಿದುಬಂದಿದೆ. ಈ ಹಿಂದೆ 1,799 ರೂ. ಬರುತ್ತಿದ್ದ ಕಂದಾಯ ದುಪ್ಪಟ್ಟಾಗಿ 3,518 ರೂ. ಹೆಚ್ಚಳವಾಗಿದೆ ಎಂದರು.

ಮೇಯರ್, ಕಮಿಷನರ್ ಪರ್ಸೆಂಟೇಜ್ ಪಡೆಯುತ್ತಾರೆ
ತೆರಿಗೆ ಹೆಚ್ಚಳದಿಂದ ಸಾರ್ವಜನಿಕರಿಗೆ ಸಾಕಷ್ಟು ಹೊರೆಯಾಗಲಿದೆ. ಅನನುಭವಿಗಳಿಂದಾಗಿ ಪಾಲಿಕೆಯ ಎಲ್ಲಾ ಆಡಳಿತ ದಿಕ್ಕೆಟ್ಟು ಹೋಗುತ್ತಿದೆ ಎಂದು ಟೀಕಿಸಿದರು. ಪಾಲಿಕೆಯಲ್ಲಿ ಮೇಯರ್, ಕಮಿಷನರ್ ಹಾಗೂ ಅಕೌಂಟ್ಸ್ ವಿಭಾಗ ಪರ್ಸೆಂಟೇಜ್ ಪಡೆಯುತ್ತಿದ್ದಾರೆ. ಎಲ್ಲದರಲ್ಲೂ ಶೇಕಡಾವಾರು ಪರ್ಸೆಂಟೇಜ್ ಪಡೆಯುವ ಮೂಲಕ ಅವ್ಯವಹಾರ ಮಾಡಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಅವ್ಯವಹಾರಗಳ ಬಗ್ಗೆ ದಾಖಲೆಗಳಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಕೊರೊನಾದಿಂದ ಕಷ್ಟದಲ್ಲಿರುವವರಿಗೆ ಮಹಾನಗರ ಪಾಲಿಕೆಯಿಂದ 30 ಸಾವಿರ ಕಿಟ್ ಗಳನ್ನು ನೀಡಲಾಗಿದ್ದು, ಆದರೆ ಇದರಲ್ಲೂ ಸಹ ಅವ್ಯವಹಾರ ನಡೆದಿದೆ ಎಂದು ತಿಳಿಸಿದರು.

ಅವ್ಯವಹಾರಗಳಿಂದ ಯಾರಿಗೂ ಟ್ರೇಡ್ ಲೈಸೆನ್ಸ್ ಸಿಗುತ್ತಿಲ್ಲ
ಪಾಲಿಕೆ ಮೇಯರ್ ತಮಗೆ ಬೇಕಾದವರ ಟೆಂಡರ್ ಹಾಕಿಸಿ ಅವ್ಯವಹಾರ ನಡೆಸಿದ್ದಾರೆ. 100 ಕಿಟ್ ಗೆ 400 ರಿಂದ 500 ಎಂದು ಹೇಳಲಾಗುತ್ತಿದೆ. ಪಾಲಿಕೆ ಸದಸ್ಯರಿಗೆ ಬೇರೆ ಕಿಟ್ ಹಾಗೂ ಮೇಯರ್ ವಾರ್ಡ್ ಗೆ ಬೇರೆ ಕಿಟ್ ನೀಡಲಾಗಿದೆ.ಇನ್ನು ಪಾಲಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಂದ ಯಾರಿಗೂ ಟ್ರೇಡ್ ಲೈಸೆನ್ಸ್ ಸಿಗುತ್ತಿಲ್ಲ. ಅದಕ್ಕಾಗಿ ಮುಂದೂಡಲೂ ಮನವಿ ಮಾಡಿದ್ದೆವು ಆದರೆ ಅದನ್ನೇ ತಪ್ಪಾಗಿ ಬಿಂಬಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಹಣ ಪಡೆದು ಬಿಜೆಪಿಗೆ ಬೆಂಬಲಿಸಿದ್ದಾರೆ
ಉಪಮೇಯರ್ ಮುಂದಿನ ನಾಲ್ಕು ವರ್ಷ ಕೆಲಸ ಮಾಡಿ ಅನುಭವ ಪಡೆದು ಆರೋಪ ಮಾಡಲಿ ಎಂದು ಸಲಹೆ ನೀಡಿದರು. ಪಾಲಿಕೆಯಲ್ಲಿ ಉಪಮೇಯರ್ ಅವರನ್ನು ಕಡೆಗಣಿಸಲಾಗುತ್ತಿದೆ. ಅವರನ್ನು ಯಾವುದೇ ಸಭೆಗಳಿಗೆ ಕರೆಯುತ್ತಿಲ್ಲ. ಯಾರದೋ ಒತ್ತಡದ ಮೇಲೆ ಅವರು ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ. ಮೊದಲು ಅವರು ಎಷ್ಟು ಹಣ ಪಡೆದು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದರು.

ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು
ಪಾಲಿಕೆ ಸಭೆಯಲ್ಲಿ ಚರ್ಚೆ ಮಾಡುವವರೆಗೂ ಕಂದಾಯ ಹೆಚ್ಚಳ ಮಾಡಬಾರದು ಎಂದು ನಾಳೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ವಿದ್ಯುತ್ ದರ ಹೆಚ್ಚಳ ಮಾಡಿ ಹಗಲು ದರೋಡೆ ಮಾಡಲಾಗುತ್ತಿದೆ. ಈ ಕೂಡಲೇ ವ್ಯತ್ಯಾಸವಾದ ಬಿಲ್ ನ ಮೊತ್ತ ಸರಿಪಡಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಮಾಜಿ ಮೇಯರ್ ಅನಿತಾಬಾಯಿ, ಯುವರಾಜ್ ಇದ್ದರು.












Click it and Unblock the Notifications