ಶಾಸಕ ರೇಣುಕಾಚಾರ್ಯರ ರಾಜಕೀಯ ಬೆನ್ನೆಲುಬಾಗಿದ್ದ ಚಂದ್ರಶೇಖರ್
ದಾವಣಗೆರೆ, ನವೆಂಬರ್, 03: ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಯಾವಾಗಲೂ ಹೊನ್ನಾಳಿ ಕ್ಷೇತ್ರದಲ್ಲಿ ಸದಾ ಚಟುವಟಿಕೆಯಿಂದ ಓಡಾಡುವವರಾಗಿದ್ದಾರೆ. ಹಳ್ಳಿ-ಹಳ್ಳಿಗಳನ್ನು ಸುತ್ತಿ ಜನರ ಸಂಕಷ್ಟಗಳನ್ನು ಆಲಿಸುತ್ತಿದ್ದರು. ಇನ್ನೇನೂ ಕೆಲ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಮೊದಲಿನಿಂದಲೂ ದೊಡ್ಡಪ್ಪ ಅಂದರೆ ಚಂದ್ರಶೇಖರ್ಗೆ ತುಂಬಾನೇ ಇಷ್ಟ.
ರೇಣುಕಾಚಾರ್ಯರು ಸಹ ಚಂದ್ರಶೇಖರ್ನನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದರು. ಕೆಲವು ವರ್ಷಗಳಿಂದ ರೇಣುಕಾಚಾರ್ಯ ಅವರಿಗೆ ರಾಜಕೀಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಇದೀಗ ಶವವಾಗಿ ಪತ್ತೆ ಆಗಿದ್ದಾರೆ. ಚಂದ್ರಶೇಖರ್ ಶವ ನೋಡುತ್ತಿದ್ದಂತೆ ಶಾಸಕ ರೇಣುಕಾಚಾರ್ಯ ಗೋಳಾಡಿದ್ದಾರೆ.
ಚಂದ್ರಶೇಖರ್ಗೆ ಮೊದಲಿನಿಂದಲೂ ಹಿರಿಯರೆಂದರೆ ಗೌರವ, ಅಷ್ಟೇ ಪ್ರೀತಿಯಿಂದ ಕಾಣುತ್ತಿದ್ದರು. ಕಾರ್ಯನಿಮಿತ್ತ ರೇಣುಕಾಚಾರ್ಯರು ಹೊನ್ನಾಳಿಯಲ್ಲಿ ಇಲ್ಲವೆಂದರೆ ಮೊದಲ ಹೆಸರು ಕೇಳಿ ಬರುತ್ತಿದ್ದದ್ದೇ ಚಂದ್ರಶೇಖರ್ ಅವರದ್ದು. ಕ್ಷೇತ್ರದಲ್ಲಿ ಯಾರೇ ಮೃತರಾಗಲೀ, ಯಾವುದೇ ಕಾರ್ಯಕ್ರಮಗಳು ಇರಲಿ ಚಂದ್ರಶೇಖರ್ ಅಲ್ಲಿಗೆ ಹೋಗುತ್ತಿದ್ದರು. ಬೇರೆಯವರು ನಿಧನ ಹೊಂದಿದಾಗಲಂತೂ ಚಂದ್ರಶೇಖರ್ ಅವರ ಅಂತ್ಯಕ್ರಿಯೆ ನೆರೆವೇರುವವರೆಗೂ ಅಲ್ಲಿಯೇ ಇರುತ್ತಿದ್ದ ಸೌಮ್ಯ ಸ್ವಭಾವದ ಯುವಕ ಆಗಿದ್ದರು.

ಎಲ್ಲಾ ಜನಪರ ಕಾರ್ಯಕ್ರಮಗಳಲ್ಲಿ ಭಾಗಿ
ಗಣೇಶೋತ್ಸವ, ದಸರಾ ಮೆರವಣಿಗೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಸಂಘಟಕರಾಗಿ ಗುರುತಿಸಿಕೊಂಡಿದ್ದರು. ಯುವಕರ ಜೊತೆ ಖುಷಿ ಖುಷಿಯಿಂದಲೇ ಪಾಲ್ಗೊಳ್ಳುತ್ತಿದ್ದ ಚಂದ್ರಶೇಖರ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ರೇಣುಕಾಚಾರ್ಯರ ಕುಟುಂಬದಲ್ಲಿ ಇವರು ಅತ್ಯಂತ ಶ್ರದ್ಧಾಭಕ್ತಿ, ದೇವರ ಪೂಜೆ, ಆಧ್ಯಾತ್ಮ ಚಿಂತನೆ ಸೇರಿದಂತೆ ದೈವ ಭಕ್ತಿ ಹೆಚ್ಚು ಹೊಂದಿದ್ದರು. ಆಗಾಗ್ಗೆ ವಿನಯ್ ಗುರೂಜಿ ಆಶ್ರಮಕ್ಕೂ ಧ್ಯಾನಕ್ಕೆ ಹೋಗುತ್ತಿದ್ದರು. ಒಂದೆಡೆ ಆಧ್ಯಾತ್ಮ, ಮತ್ತೊಂದೆಡೆ ರಾಜಕೀಯ ಚಟುವಟಿಕೆಯಲ್ಲಿ ಭಾಗಿ ಆಗುತ್ತಿದ್ದರು. ಎಲ್ಲರ ಜೊತೆಗೆ ಹೆಚ್ಚು ಬೆರೆಯದಿದ್ದರೂ, ತನ್ನ ಕೆಲಸವನ್ನು ಮಾಡುತ್ತಾ ಸಕ್ರಿಯವಾಗಿ ಇದ್ದರು.

ಚಂದ್ರಶೇಖರ್ನ ಭವಿಷ್ಯ ನುಡಿದಿದ್ದ ಜನರು
ಕೇವಲ 24 ವರ್ಷದ ಯುವಕನಾಗಿದ್ದ ಚಂದ್ರಶೇಖರ್ಗೆ ಉತ್ತಮ ರಾಜಕೀಯ ಭವಿಷ್ಯ ಇತ್ತು. ಅಲ್ಲದೆ ಆತನಿಗೆ ಮುಂದಿನ ದಿನಗಳಲ್ಲಿ ನೀನು ಜಿಲ್ಲಾ ಪಂಚಾಯಿತಿ ಸದಸ್ಯನಾಗುತ್ತೀಯಾ ಜೊತೆಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಇದೆ ಎಂದೆಲ್ಲಾ ಕ್ಷೇತ್ರದ ಜನರು ಮಾತನಾಡತೊಡಗಿದ್ದರು. ಅದೇ ರೀತಿಯಲ್ಲಿ ವಿನಯ್ ಗುರೂಜಿ ಅವರು ಹೇಳಿದ್ದರು ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಉತ್ತಮ ವ್ಯಕ್ತಿತ್ವ ಹೊಂದಿದ್ದ ಚಂದ್ರಶೇಖರ್ ಬಿಜೆಪಿ ನಾಯಕರು, ಕಾರ್ಯಕರ್ತರಿಗೂ ಪ್ರೀತಿ ಪಾತ್ರರಾಗಿದ್ದರು. ತಾನು ಶಾಸಕರ ತಮ್ಮನ ಮಗ ಎಂಬ ಹಮ್ಮು ಇರಲಿಲ್ಲ. ಯಾರೇ ಬಂದರೂ ಹೆಚ್ಚು ಮಾತನಾಡುತ್ತಿರಲಿಲ್ಲ. ರಾಜಕೀಯ ಕೆಸರೆರಚಾಟದತ್ತ ಮುಖ ಮಾಡಿರಲಿಲ್ಲ. ವಿವಾದಕ್ಕೂ ಆಸ್ಪದ ಕೊಡದ ರೀತಿಯಲ್ಲಿ ಇದ್ದರು.

ಚಂದ್ರು ನಡವಳಿಕೆಗೆ ಮೆಚ್ಚುಗೆ ವ್ಯಕ್ತ
ರೇಣುಕಾಚಾರ್ಯರ ಪುತ್ರನಿಗಿಂತ ಚಂದ್ರಶೇಖರ್ ಹೆಚ್ಚು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಎಂದೂ ಮುಂದೆ ಬಾರದಿದ್ದರೂ ತೆರೆ ಹಿಂದೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಅತ್ಯುತ್ತಮ ಸಂಘಟನಾ ಚತುರರಾಗಿದ್ದರು. ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ದೇವರಿಗೆ ಶ್ರದ್ಧಾ ಭಕ್ತಿಯಿಂದ ಸುಮಾರು ಹೊತ್ತು ಪೂಜೆ ಸಲ್ಲಿಸುತ್ತಿದ್ದ ಚಂದ್ರು ನಡವಳಿಕೆಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ದೊಡ್ಡವರು, ಸಣ್ಣವರು ಎಂಬ ಭೇದ ಭಾವ ಇಲ್ಲದ ಎಲ್ಲರಿಗೂ ಅಚ್ಚುಮೆಚ್ಚಿನ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ದೊಡ್ಡಪ್ಪನ ಬೆಂಬಲಕ್ಕೆ ನಿಂತಿದ್ದ ಚಂದ್ರು
ರೇಣುಕಾಚಾರ್ಯರ ಜೊತೆ ಗ್ರಾಮ ವಾಸ್ತವ್ಯದಲ್ಲಿಯೂ ಪಾಲ್ಗೊಳ್ಳುತ್ತಿದ್ದ ಚಂದ್ರು, ಹಳ್ಳಿ ಹಳ್ಳಿಗೂ ಹೋಗಿ ತಿರುಗಾಡುತ್ತಿದ್ದರು. ಯಾವಾಗಲೂ ದೊಡ್ಡಪ್ಪನ ಜೊತೆ ಇರುತ್ತೇನೆ, ಕಾರ್ಯದೊತ್ತಡ ಇರುತ್ತದೆ ಎಂಬ ಕಾರಣಕ್ಕೆ ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದರು. ಕಳೆದ ನಾಲ್ಕೈದು ದಿನಗಳಿಂದ ರೇಣುಕಾಚಾರ್ಯ ಕುಟುಂಬದಲ್ಲಿ ಕತ್ತಲೆ ಆವರಿಸಿದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬದವರ ಪರಿಸ್ಥಿತಿಯಂತೂ ಹೇಳತೀರದ್ದಾಗಿದೆ. ಇದೀಗ ಮನೆ ಮಗನನ್ನು ಕಳೆದುಕೊಂಡು ಕುಟುಂಬದವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.












Click it and Unblock the Notifications