ಗುತ್ತಿಗೆದಾರರ ಸಂಘದವರೆಲ್ಲರೂ ಕಾಂಗ್ರೆಸ್ನ ಚೇಲಾಗಳು: ದಾವಣಗೆರೆಯಲ್ಲಿ ಭೈರತಿ ಬಸವರಾಜ್ ಕಿಡಿ
ದಾವಣಗೆರೆ, ಜನವರಿ, 05: ಶೇಕಡಾ 40ರಷ್ಟು ಕಮಿಷನ್ ಪಡೆದ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಪ ಮಾಡಿದ್ದವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಸಂಘದ ಪದಾಧಿಕಾರಿಗಳೆಲ್ಲರೂ ಕಾಂಗ್ರೆಸ್ ಪಕ್ಷದ ಚೇಲಾಗಳು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ದಾವಣಗೆರೆಯಲ್ಲಿ ಆರೋಪಿಸಿದರು.
ಮಾಯಕೊಂಡ ಹೋಬಳಿಯ ಬೋರಗೊಂಡನಹಳ್ಳಿಯ ಎಚ್. ಗಿರಿಯಾಪುರ ಗ್ರಾಮದಲ್ಲಿ ನಿರ್ಮಿಸಿರುವ ಹಮಾಲರ ವಸತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸುಮ್ಮನೆ ಆರೋಪ ಮಾಡುವುದು, ಗಾಳಿಯಲ್ಲಿ ಗುಂಡು ಹೊಡೆಯುವುದು ಆಗಬಾರದು. ದಾಖಲೆ ಕೊಟ್ಟು ಮಾತನಾಡಿ. ನಮಗೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ. ಹುಚ್ಚುಚ್ಚಾಗಿ ಏನೇನೋ ಮಾತನಾಡಬಾರದು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿ ಮರಿ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಗೌರವಯುತವಾಗಿ ಮಾತನಾಡಬೇಕು. ಎಲ್ಲೇ ಸಿಕ್ಕರೂ ವಿರೋಧ ಪಕ್ಷದ ನಾಯಕ ಸಿದ್ದರಾಮಣ್ಣ ಅಂತಾ ಪ್ರೀತಿಯಿಂದ ಸಿಎಂ ಕರೆಯುತ್ತಾರೆ. ಆದರೆ ಸಿದ್ದರಾಮಯ್ಯ ಅವರೇ ತನ್ನ ಗೌರವಕ್ಕೆ ಧಕ್ಕೆ ತಂದುಕೊಂಡಿದ್ದಾರೆ. ಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು, ವಿಪಕ್ಷ ನಾಯಕರಾಗಿರುವವರು. ಅವರು ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಹೇಳಿದರು.

ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತೇವೆ
ರಾಜ್ಯದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರ ಪ್ರವಾಸ ಶುರುವಾಗಿದೆ. ದಾವಣಗೆರೆಗೆ ಆಗಮಿಸುವ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ, ನೀಡಿರುವ ಸೌಲಭ್ಯದ ಕುರಿತು ಜನರಿಗೆ ತಿಳಿಸುವ ಕುರಿತಂತೆ ಪಕ್ಷದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರಿಗೆ ಸೂಚನೆ ನೀಡಲಿದ್ದಾರೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಾವೆಲ್ಲರೂ ಶ್ರಮಿಸುತ್ತೇವೆ. ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ದಾಖಲೆ ನೀಡಿದರೆ ಮಾತ್ರ ಸೂಕ್ತ ಕ್ರಮ
ರಾಗಿ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಕುರಿತಂತೆ ಮಾಹಿತಿ ಇಲ್ಲ. ದಾಖಲೆ ಕೊಟ್ಟರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮದು ರೈತ ಪರ ಸರ್ಕಾರವಾಗಿದೆ. ರಾಗಿಗೆ ಬೆಂಬಲ ಬೆಲೆ ನೀಡಿ ಖರೀದಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಎಲ್ಲಿ ಲೋಪ ಆಗಿದೆ ಎಂಬ ಕುರಿತಂತೆ ದಾಖಲೆ ಕೊಡಿ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. ಇನ್ನು ವಿಧಾನಸೌಧದಲ್ಲಿ ಪಿಡಬ್ಲ್ಯೂಡಿ ಎಂಜಿನಿಯರ್ 10 ಲಕ್ಷ ರೂಪಾಯಿ ಪಡೆಯುವಾಗ ಸಿಕ್ಕಿ ಬಿದ್ದಿರುವ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗ್ಗೆಯಿಂದಲೂ ಕಾರ್ಯಕ್ರಮಗಳ ಮುಗಿಸಿಕೊಂಡು ದಾವಣಗೆರೆಗೆ ಬಂದಿದ್ದೇನೆ. ಈ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದರು.

ಯಾರೇನೇ ಹೇಳಿದರೂ ಸೊಪ್ಪು ಹಾಕುವುದಿಲ್ಲ
ಸ್ಯಾಂಟ್ರೋ ರವಿ ಯಾರು? ಈ ಹೆಸರು ಇವತ್ತೇ ಕೇಳುತ್ತಿರುವುದು. ಆತನ ಜೊತೆ ಸಚಿವರ ನಂಟಿದೆ ಎಂಬ ಕುರಿತಂತೆ ನನ್ನ ಗಮನಕ್ಕೆ ಬಂದಿಲ್ಲ. ಯಾರು ಏನು ಹೇಳಿದರೂ ಸೊಪ್ಪು ಹಾಕುವುದಿಲ್ಲ. ಮೋಜು, ಮಸ್ತಿಗಾಗಿ ನೀಚ ಕೆಲಸ ಯಾರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ವಿರುದ್ಧ ಸಂಚು ಸೃಷ್ಟಿಸಿ ಮಾನ ಹರಾಜು ಹಾಕುವ ಕೆಲಸ ಮಾಡಿದರು. ಚುನಾವಣೆ ಹತ್ತಿರವಾದಾಗ ಇಂತಹ ಆರೋಪ ಮಾಡುತ್ತಾರೆ. ದಾಖಲೆ ಸಮೇತ ತೋರಿಸಲಿ. ಮೂರ್ನಾಲ್ಕು ತಿಂಗಳು ಚುನಾವಣೆ ಮುಂದಿಟ್ಟುಕೊಂಡು ಕಥೆ ಹೇಳಿದರೆ ಜನರು ಕೇಳುತ್ತಾರಾ? ಬೆಳಗಾವಿಯ ಅಧಿವೇಶನದಲ್ಲಿ ದಾಖಲೆ ಸಮೇತ ಮಾತನಾಡಬೇಕಿತ್ತು. ಬೇಕಾದರೆ ಫೋಟೋ ರಿಲೀಸ್ ಮಾಡಲಿ. ಇದಕ್ಕೆಲ್ಲಾ ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಹೋಗಲ್ಲ
ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಬಿಜೆಪಿ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬಂದರೆ ಬರಲಿ. ನಾವು ಮತ್ತೆ ಕಾಂಗ್ರೆಸ್ಗೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ರಾಜಕೀಯ ಜೀವನ ಏನಿದ್ದರೂ ಬಿಜೆಪಿಯಲ್ಲಿ ಮಾತ್ರ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಹಾಗೆಯೇ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಒಡೆತನದ ಕಲ್ಲೇಶ್ವರ ರೈಸ್ ಮಿಲ್ನಲ್ಲಿ ವನ್ಯಜೀವಿಗಳ ಪತ್ತೆ ಪ್ರಕರಣ ಸಂಬಂಧ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗುತ್ತದೆ. ಮುಂದಿನ ದಿನಗಳಲ್ಲಿ ನಿಮಗೇ ಗೊತ್ತಾಗಲಿದೆ. ಈಗಾಗಲೇ ಎಫ್ಐಆರ್ ದಾಖಲಾಗಿದೆ. ತಪ್ಪು ಮಾಡಿದ್ದರೆ ಪ್ರತಿಫಲದ ಊಟ ಮಾಡುತ್ತಾರೆ. ಎಫ್ಐಆರ್ನಲ್ಲಿ ಮಲ್ಲಿಕಾರ್ಜುನ್ ಹೆಸರು ದಾಖಲು ಆಗಿಯೇ ಆಗುತ್ತದೆ. ಸ್ಥಳದ ಮಾಲೀಕರೇ ಹೊಣೆಗಾರರು ಎಂದು ಆರೋಪಿಸಿದರು.











Click it and Unblock the Notifications