ದಾವಣಗೆರೆ ಜಿಲ್ಲೆಯಲ್ಲಿ ಮಾಟ-ಮಂತ್ರ: ಗ್ರಾಮಸ್ಥರ ನಿದ್ದೆಗೆಡಿಸುವ ಅಮಾವಾಸ್ಯೆ, ಹುಣ್ಣಿಮೆ
ದಾವಣಗೆರೆ, ಮಾರ್ಚ್ 23: ಅಮಾವಾಸ್ಯೆ, ಹುಣ್ಣಿಮೆ ಬಂತೆಂದರೆ ಗ್ರಾಮದ ಜನರು ನಿದ್ದೆ ಗೆಡುವಂತಾಗಿದ್ದು, ನಿಂಬೆಹಣ್ಣು ಇಟ್ಟು ಮಾಟ, ಮಂತ್ರ ಮಾಡುತ್ತಿರುವುದರಿಂದ ಭಯದ ವಾತಾವರಣ ಸೃಷ್ಠಿಯಾಗಿದ್ದು, ರೈತರು ಹೊಲಗಳಿಗೆ ಭಯದಲ್ಲೇ ಹೋಗುವಂತಾಗಿದೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿಯ ತುಂಬಿಗೆರೆ ಗ್ರಾಮದ ರಂಗಪ್ಪ ಹಾಗೂ ನಾಗರಾಜ್ ಎನ್ನುವವರ ಹೊಲದಲ್ಲಿ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ಮಾಟ ಮಂತ್ರ ನಡೆಯುತ್ತಲೇ ಬಂದಿದೆ.
ಎರಡು ದಿನಗಳ ಹಿಂದೆ ಕೂಡ ಮಾಟ-ಮಂತ್ರ ನಡೆದಿದ್ದು, ಹೊಲದ ಬಳಿ ತಟ್ಟೆಯಲ್ಲಿ ನಿಂಬೆಹಣ್ಣು, ಕುಂಕುಮ, ಎಲೆ ಅಡಿಕೆ, ತಂಬಾಕು ಸೇರಿದಂತೆ ಹಲವು ವಸ್ತುಗಳನ್ನು ಇಟ್ಟು ಮಾಟ ಮಂತ್ರ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ಹೊಲದಲ್ಲಿ ನಿಧಿ ಇದೆ ಎನ್ನುವ ವದಂತಿ ಇಷ್ಟಾಕ್ಕೆಲ್ಲ ಕಾರಣವಾಗಿದೆ.
ತುಂಬಿಗೆರೆ ಗ್ರಾಮದ ಹೊರ ಭಾಗದಲ್ಲಿರುವ ಈ ಹೊಲದಲ್ಲಿ ಮೂರು ದಿನಗಳ ಹಿಂದೆ ಆರು ಜನರ ತಂಡವು ಬಂದು ರಾತ್ರಿಯಿಡೀ ಪೂಜೆ ನಡೆಸಿದ್ದು, ಇದಕ್ಕೆ ನಾಗರಾಜ್ ಸಂಬಂಧಿಕನೊಬ್ಬ ಬೆಂಬಲ ನೀಡಿದ್ದರಂತೆ. ಅಲ್ಲದೆ ಆಂಜನೇಯನ ದೇವಸ್ಥಾನದ ಬಳಿ ನಿಧಿ ಇದೆ, ಅಲ್ಲಿ ಅಪಾರ ಪ್ರಮಾಣದಲ್ಲಿ ಬಂಗಾರ ವಜ್ರ ವೈಡೂರ್ಯಗಳು ಇವೆ ಎಂದು ಈ ರೀತಿಯಾದ ಮಾಟ ಮಂತ್ರಗಳು ನಡೆಯುತ್ತಿವೆ.
ಇನ್ನು ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ನಿಧಿಗಳ್ಳರ ಹಾವಳಿ ಜಾಸ್ತಿಯಾಗುತ್ತಿದ್ದು, ಬೇರೆ ಬೇರೆ ಕಡೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಅಲ್ಲದೆ ಮಾಟ-ಮಂತ್ರ ಮಾಡಿ ನಿಧಿ ಶೋಧ ಮಾಡುತ್ತಾರೆ.
ಕೆಲ ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಹಳೆಯ ದೇವಾಲಯಗಳನ್ನು ನಿಧಿ ಆಸೆಗೆ ನಾಶ ಮಾಡಿದ್ದಾರೆ. ಇದರಿಂದ ಜನರು ಜಮೀನುಗಳಿಗೆ ಹೋಗುವುದಕ್ಕೂ ಕೂಡ ಭಯಪಡುತ್ತಿದ್ದು, ನಿಧಿ ಇದೆ ಎನ್ನುವ ವದಂತಿಯಿಂದ ನಿಧಿಗಳ್ಳರು ದಾಳಿ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Recommended Video
ಒಟ್ಟಾರೆಯಾಗಿ ನಿಧಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ನಿಧಿಗಳ್ಳರು ಮಾತ್ರ ಈ ಗ್ರಾಮಕ್ಕೆ ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನೆಮ್ಮದಿ ಜೀವನ ನಡೆಸುವಂತೆ ಅನುವು ಮಾಡಿಕೊಡಬೇಕು ಎನ್ನುವುದೇ ನಮ್ಮ ಕಳಕಳಿ.