Assembly election 2023: ನನ್ನನ್ನು ರಾಜಕೀಯದಿಂದ ಮುಗಿಸುವುದೇ ಒಂದು ಸಿದ್ಧಾಂತನಾ?: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ
ಬಿಜೆಪಿ ನಾಯಕರು ನನ್ನನ್ನು ರಾಜಕೀಯದಿಂದ ಮುಗಿಸುವುದೇ ಒಂದು ಸಿದ್ಧಾಂತ ಅಂದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ, ಪೆಬ್ರವರಿ, 22: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಮೂರು ಪಕ್ಷಗಳ ರಾಜಕಾರಣಿಗಳು ಪ್ರಚಾರದಲ್ಲಿ ಕಾರ್ಯನಿರತಗಿದ್ದಾರೆ. ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತಾ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಹಾಗೆಯೇ ಸಿದ್ದರಾಮಯ್ಯನವರು ಕೂಡ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ಜನರನ್ನು ಪ್ರಚೋದಿಸಿ, ದ್ವೇಷದ ರಾಜಕಾರಣ ಮಾಡುವುದೇ ಸಿದ್ಧಾಂತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾದಿಗೆರೆಯಲ್ಲಿ ಗುಡುಗಿದರು.
ಚಿತ್ರದುರ್ಗದ ಹೊರವಲಯದ ಕ್ಯಾದಿಗೆರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಚರ್ಚೆ ಸಿದ್ದಾಂತನಾ, ಸಾವರ್ಕರ್- ಗಾಂಧಿ ಚರ್ಚೆ ಸಿದ್ದಾಂತನಾ? ಅಥವಾ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂಬುದು ಸಿದ್ದಾಂತನಾ? ಎಂದು ಬಿಜೆಪಿಗೆ ಪ್ರಶ್ನೆ ಕೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರದ್ದು ಯಾವ ಸಿದ್ಧಾಂತ?
ಜನರ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಸಿದ್ಧಾಂತ ಎನ್ನುತಾರೆ. ಬಿಜೆಪಿಯವರದ್ದು ಯಾವ ಸಿದ್ಧಾಂತ? ಇನ್ನು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ರಾಜಕೀಯ ಜ್ಞಾನ ಗೊತ್ತಿಲ್ಲ ಎಂದಿದ್ದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೂ ರಾಜಕೀಯ ಜ್ಞಾನ ಗೊತ್ತಿಲ್ಲ. ಮೋದಿ, ಅಮೀತ್ ಶಾ, ನಡ್ಡಾ ನೂರು ಬಾರಿ ಬಂದರೂ ಕೂಡ ಏನು ಮಾಡುವುದಕ್ಕೆ ಆಗುವುದಿಲ್ಲ. ಜನ ಬಿಜೆಪಿಯನ್ನು ಸೋಲಿಸಲು ತೀರ್ಮಾನ ಮಾಡಿದ್ದು, ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಎಲ್ಲರನ್ನು ಮನುಷ್ಯರೆಂದು ಭಾವಿಸುತ್ತೇವೆ
ಮುಸ್ಲಿಂ ಓಲೈಕೆ ರಾಜಕೀಯ ಕಾಂಗ್ರೆಸ್ ಮಾಡುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾವು ಮನುಷತ್ವದ ರಾಜಕೀಯ ಮಾಡುತ್ತೇವೆ. ಎಲ್ಲರನ್ನ ಮನುಷ್ಯರು ಎಂದು ಭಾವಿಸುತ್ತೇವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಕೂಡ ಮನುಷ್ಯರೇ ಅಲ್ಲವೇ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸೂಕ್ತ ತನಿಖೆ ಮಾಡಿಸಿ
ಕುಡಿಯುವ ನೀರಿನ ಘಟಕದಲ್ಲಿ ಭಾರಿ ಅವ್ಯವಹಾರ ಆಗಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿಸಿ ಎಂದು ಬಿಜೆಪಿಗೆ ಸವಾಲು ಹಾಕಿದರು. ಅಲ್ಲದೇ ನಾವು ಏನೇ ಆರೋಪ ಮಾಡಿದರೂ ದಾಖಲೆ ಕೊಡಿ ಎಂದು ಹೇಳುತ್ತಾರೆ. ನನ್ನ ಅವಧಿಯಲ್ಲಿ 8 ಬಾರಿ ಸಿಬಿಐ ತನಿಖೆಗೆ ಕೊಟ್ಟಿದ್ದೆ. ನೀವು ತನಿಖೆ ಮಾಡಿ, ನಿಮ್ಮ ಕೈಯನ್ನು ಯಾರು ಹಿಡಿದುಕೊಂಡಿಲ್ಲ. ನನ್ನ ಕಾಲದ ಭ್ರಷ್ಟಾಚಾರದ ದಾಖಲೆ ಇದ್ದರೇ ತನಿಖೆ ಮಾಡಿ. ಅದನ್ನು ಬಿಟ್ಟು 40% ಕಮಿಷನ್ ಆರೋಪವನ್ನು ಕೂಡ ತನಿಖೆ ಮಾಡಿ. ತನಿಖೆ ಮಾಡದೆ ಯಾಕೆ ಹಿಂದೇಟು ಹೊಡೆಯುತ್ತೀರಿ ಎಂದು ಗುಡುಗಿದರು.

ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ
ಶೋಭ ಕರಂದ್ಲಾಜೆ ಒಬ್ಬ ಹೆಣ್ಣು ಮಗಳು. ಅವರಿಗೆ ಜಾತಿ, ಧರ್ಮ ಅಂದರೆ ಗೊತ್ತಿಲ್ಲ. ನಾವು ಎಲ್ಲಾ ಜಾತಿ, ಧರ್ಮಗಳ ಮೇಲೆ ಗೌರವ ಇಟ್ಟುಕೊಂಡಿದ್ದೇವೆ. ನಾವು ಎಲ್ಲಾ ಜಾತಿಯ ಬಡವರಿಗೆ ಕಾರ್ಯಕ್ರಮ ನೀಡಿದೆ. ಅನ್ನ ಭಾಗ್ಯವನ್ನು ಒಂದು ಜಾತಿ, ಧರ್ಮಕ್ಕೆ ನಾವು ಕೊಟ್ಟಿಲ್ಲ. ಇಂದಿರಾ ಕ್ಯಾಂಟಿನ್ ಹಿಂದೂಗಳಿಗೆ ಮಾತ್ರ ಕೊಟ್ಟಿದ್ದೆವಾ? ಎಂದು ಪ್ರಶ್ನಿಸಿದರು. ಇನ್ನು ರಾಜ್ಯದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜಗಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರ ಕ್ರಮ ವಹಿಸಿದೆ. ಈ ಬಗ್ಗೆ ಮಾತನಾಡುವುದಿಲ್ಲ ಎಂದರು.












Click it and Unblock the Notifications