Vani Vilas Sagara : ಇತಿಹಾಸದಲ್ಲೇ ಮತ್ತೊಮ್ಮೆ ಹೊಸ ದಾಖಲೆ ಸೃಷ್ಟಿಸಿದ ವಾಣಿ ವಿಲಾಸ ಜಲಾಶಯ
ಚಿತ್ರದುರ್ಗ, ಸೆಪ್ಟೆಂಬರ್, 08: ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿ ಆಗಿರುವ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 135 ಅಡಿ ನೀರು ಸಂಗ್ರಹವಾಗುವ ಮೂಲಕ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.
1907ರಲ್ಲಿ ನಿರ್ಮಾಣ ಆಗಿರುವ ಈ ಅಣೆಕಟ್ಟಿಗೆ 115 ವರ್ಷಗಳ ತಿಹಾಸ ಹೊಂದಿದೆ. 1933ರಲ್ಲಿ 135.25 ಅಡಿ ನೀರು ಸಂಗ್ರಹವಾಗುವ ಮೂಲಕ ದಾಖಲೆ ನಿರ್ಮಿಸಿತ್ತು. ಇದೀಗ 2022ರಲ್ಲಿ 135 ಅಡಿ ನೀರು ಸಂಗ್ರಹವಾಗುವ ಮೂಲಕ ಮತ್ತೆ ನೂತನ ದಾಖಲೆ ಬರೆದಿದೆ. ಈ ಮೂಲಕ ಜಿಲ್ಲೆಯ ಜನತೆಯ ಮುಖದಲ್ಲಿ ಹರ್ಷ ತುಂಬಿದ್ದು, ರೈತಾಪಿ ವರ್ಗದಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಈಗಾಗಲೇ ಜಲಾಶಯದ ಕೋಡಿ ಬಿದ್ದಿದ್ದು, ಡ್ಯಾಂಗೆ 14,891 ಕ್ಯೂಸೆಕ್ ಒಳಹರಿವು ನೀರು ಹೆಚ್ಚಳ ಆಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 135 ಅಡಿ ಇದೆ. ಇನ್ನು ಅಣೆಕಟ್ಟಿನಿಂದ 14,736 ಕ್ಯೂಸೆಕ್ ಪ್ರಮಾಣದ ಹೊರ ಹರಿವು ಇದೆ. ಜಲಾಶಯದ ಕ್ರಸ್ಟ್ ಗೇಟ್ ಓಪನ್ ಮಾಡಿದ್ದು, 500-600 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಕೋಡಿ ನೀರು ಹೊರ ಹೋಗುತ್ತಿರುವುದರಿಂದ ಹಿರಿಯೂರು ನಗರದ ವೇದಾವತಿ ನದಿ ಹಾಗೂ ಎಡನಾಲೆ, ಬಲ ನಾಲೆಗಳು ಮೈದುಂಬಿ ಹರಿಯುತ್ತಿವೆ. 1933ರಲ್ಲಿ 135.25 ಅಡಿ ನೀರು ಸಂಗ್ರಹ ಆಗಿದ್ದು, 1934ರಲ್ಲಿ 130.24 ಅಡಿ ನೀರು ಹರಿದು ಬಂದಿತ್ತು. 1957ರಲ್ಲಿ 125.05 ಅಡಿ, 1958ರಲ್ಲಿ124.50 ಅಡಿ, 2021ರಲ್ಲಿ 125.50 ಅಡಿ 2022ರಲ್ಲಿ 135 ಅಡಿ ನೀರು ಸಂಗ್ರಹ ಆಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ವೇದಾವತಿ ಎಂದು ಹೆಸರಾಗಿದ್ದು ಹೇಗೆ?
ರಾಜ್ಯದ ಬಹುತೇಕ ಜಲಾಶಯಗಳು ಮುಂಗಾರು ಹಂಗಾಮಿನಲ್ಲಿ ತುಂಬುವುದು ವಾಡಿಕೆ ಇದೆ. ಆದರೆ ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಹರಿವು ಗಮನಿಸಿದಾಗ ಹಿಂಗಾರು ಮಳೆಗೆ ಅತೀ ಹೆಚ್ಚು ನೀರು ಸಂಗ್ರಹಣೆ ಆಗುತ್ತಿರುವುದು ವಿಶೇಷವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಅವು ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಅಣೆಕಟ್ಟು. ಇನ್ನು ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1898ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಾಣ ಮಾಡಿತ್ತು. ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ಅಣೆಕಟ್ಟನ್ನು ನಿರ್ಮಿಸಿ, 1907ರಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು. ಅಲ್ಲದೇ ಕೆಆರ್ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿ ನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಬತ್ತಿ ಹೋಗಿದ್ದ ಜಲಾಶಯ, 2019ರಲ್ಲಿ 66 ಅಡಿ ಡೆಡ್ ಸ್ಟೋರೆಜ್ ತಲುಪಿತ್ತು. ವರ್ಷ ಕಳೆದಂತೆ ಡ್ಯಾಂನಲ್ಲಿ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ಬಂದು ನಿಂತಿದೆ. ಇದರಿಂದ ಹಿರಿಯೂರು ತಾಲೂಕಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಹೊಸ ಚಿಗುರು ಬಂದಿದೆ.

ವಾಣಿ ವಿಲಾಸ ಸಾಗರಕ್ಕೆ ಬರುವ ಮಾರ್ಗಗಳು
ಜಲಾಶಯವನ್ನು ನೋಡಲು ಬಯಸುವ ಪ್ರವಾಸಿಗರು ಕುಟುಂಬದ ಸದಸ್ಯರು, ಸ್ನೇಹಿತರು ಒಂದು ದಿನ ಪ್ರವಾಸ ಕೈಗೊಳ್ಳಬಹುದು. ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 21 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಹೋದರೆ ಜಲಾಶಯವನ್ನು ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಾಣಿ ವಿಲಾಸಪುರ ಕ್ರಾಸ್ ಮೂಲಕ ಜಲಾಶಯಕ್ಕೆ ತೆರಳಿ ಜಲಾಶಯ, ಕಣಿವೆ ಮಾರಮ್ಮನ ಗುಡಿ, ವಾಣಿ ವಿಲಾಸ ಸಾಗರ ಪಾರ್ಕ್, ಉತ್ತರೆ ಗುಡ್ಡ, ಛತ್ರಿ ಗುಡ್ಡ, ಕೋಡಿ ನೀರು ಹೋಗುವ ಜಾಗ, ಹಾರಕಣಿವೆ ರಂಗನಾಥ ಸ್ವಾಮಿ ದೇವಸ್ಥಾನ, ಹಾಗೂ ಬೆವಿನಹಳ್ಳಿ ಬಳಿ ಹಿನ್ನೀರು ಪ್ರದೇಶವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಜಲಾಶಯದಲ್ಲಿ ಸಂಗ್ರಹವಾದ ನೀರಿನ ಪ್ರಮಾಣ
ಸೆಪ್ಟೆಂಬರ್ 4ರಂದು ವಾಣಿ ವಿಲಾಸ ಸಾಗರ ಜಲಾಶಯಕ್ಕೆ 2,612 ಕ್ಯೂಸೆಕ್ ಒಳಹರಿವು, 2,457 ಕ್ಯೂಸೆಕ್ ಹೊರಹರಿವು, ಜಲಾಶಯದ ನೀರಿನ ಮಟ್ಟ 131.45 ಅಡಿ ಇತ್ತು. ಸೆಪ್ಟೆಂಬರ್ 5ರಂದು 4437 ಕ್ಯೂಸೆಕ್ ಒಳಹರಿವು, ನೀರಿನ ಮಟ್ಟ 132.10 ಅಡಿ, ಸೆಪ್ಟೆಂಬರ್ 6ರಂದು 7,467 ಕ್ಯೂಸೆಕ್ ಒಳಹರಿವು, ಜಲಾಶಯದ ನೀರಿನ ಮಟ್ಟ 133 ಅಡಿ, 7312 ಕ್ಯೂಸೆಕ್
ಹೊರಹರಿವು, ಸೆಪ್ಟೆಂಬರ್ 7ರಂದು 11,112 ಕ್ಯೂಸೆಕ್ ಒಳಹರಿವು, ನೀರಿನ ಮಟ್ಟ 134 ಅಡಿ, 10,957 ಕ್ಯೂಸೆಕ್ ಹೊರ ಹರಿವು, ಇಂದು 14,891 ಕ್ಯೂಸೆಕ್ ಒಳಹರಿವು ಹೆಚ್ಚಳ, ನೀರಿನ ಮಟ್ಟ 135 ಅಡಿ, 14,736 ಕ್ಯೂಸೆಕ್ ಪ್ರಮಾಣದಲ್ಲಿ ಹೊರ ಹರಿವು ನೀರನ್ನು ನಾಲೆಗಳು ಹಾಗೂ ವೇದಾವತಿ ನದಿ ಮೂಲಕ ಬಿಡಲಾಗಿದೆ.

ಸುಳ್ಳು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ
ವಾಣಿ ವಿಲಾಸ ಅಣೆಕಟ್ಟು ಬಿರುಕು ಬಿಟ್ಟಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದು ಸಳ್ಳು ಸುದ್ದಿ ಯಾರು ನಂಬಬೇಡಿ. ಡ್ಯಾಂ ಎಲ್ಲಿಯೂ ಬಿರುಕು ಬಿಟ್ಟಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವ ಹಿನ್ನೆಲೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಡ್ಯಾಂಗೆ ಭೇಟಿ ಪರಿಶೀಲನೆ ನಡೆಸಿದರು. ನಂತರ ಈ ವಿಚಾರವಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಜಲಾಶಯ ತೊಂದರೆಯಲ್ಲಿ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಎಷ್ಟು ಇದೆಯೋ ಅಷ್ಟೇ ಪ್ರಮಾಣದಲ್ಲಿ ಹೊರ ಹರಿವಿನ ಪ್ರಮಾಣ ಕೂಡ ಹೆಚ್ಚಿಸಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಲೋಕೇಶ್ ಮತ್ತು ಸಿಬ್ಬಂದಿಗಳು ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದು, ಜಲಾಶಯ ಸುರಕ್ಷಿತವಾಗಿದೆ. ಯಾರು ಕೂಡ ಆತಂಕ ಪಡಬೇಕಾಗಿಲ್ಲ. ಹಾಗಂತ ಯಾರು ಊರುಗಳನ್ನು ಖಾಲಿ ಮಾಡಬಾರದು ಎಂದು ಜನರಿಗೆ ಅಭಯ ನೀಡಿದರು.












Click it and Unblock the Notifications