ವಿವಿ ಸಾಗರ ಕೋಡಿ ತಗ್ಗಿಸುವ ಮಾಜಿ ಶಾಸಕರ ಹೇಳಿಕೆಗೆ ಸಿಡಿದೆದ್ದ ಹಿರಿಯೂರು ರೈತರು
ಚಿತ್ರದುರ್ಗ, ಅಕ್ಟೋಬರ್ 26 : ವಾಣಿ ವಿಲಾಸ ಜಲಾಶಯದಲ್ಲಿ 89 ವರ್ಷಗಳ ಬಳಿಕ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಜಲಾಶಯ ಹಿನ್ನೀರಿನ ಪ್ರದೇಶದಲ್ಲಿರುವ ಹೊಸದುರ್ಗ ತಾಲ್ಲೂಕಿನ ಕೆಲವು ರೈತರ ತೋಟಗಳು ಜಲಾವೃತವಾಗಿವೆ ಈ ಹಿನ್ನೆಲೆಯಲ್ಲಿ ವಿವಿ ಸಾಗರ ಜಲಾಶಯದ ಕೋಡಿ ಮಟ್ಟವನ್ನು ತಗ್ಗಿಸಬೇಕು ಎಂದು ಮಾಜಿ ಶಾಸಕ ಬಿಜಿ ಗೋವಿಂದಪ್ಪ ನೀಡಿರುವ ಹೇಳಿಕೆಗೆ ಹಿರಿಯೂರು ರೈತರು ಸಿಡಿದೆದ್ದಿದ್ದಾರೆ.
ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪನವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಕಾರ್ಯಕ್ರಮದಲ್ಲಿ ವಾಣಿವಿಲಾಸ ಸಾಗರ ಜಲಾಶಯದ ಕೋಡಿಯನ್ನು 124 ಅಡಿಗೆ ಇಳಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಪ್ರಸ್ತಾವನೆ ಮಾಡಿದ್ದರು. ಬುಧವಾರ ಹಿರಿಯೂರು ತಾಲ್ಲೂಕಿನ ಆರನಕಟ್ಟೆ ಗ್ರಾಮದ ಗಣೇಶ ದೇವಾಲಯ ಬಳಿ ಸಭೆ ನಡೆಸಿದ ರೈತ ಮುಖಂಡರು ಗೋಂವಿಂದಪ್ಪ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ವಾಣಿ ವಿಲಾಸ ಸಾಗರ ಹೋರಾಟ ಸಮಿತಿಯ ಸಂಚಾಲಕ ಆರನಕಟ್ಟೆ ಶಿವಕುಮಾರ್ ಮಾತನಾಡಿ " ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸಲು ಸಾಕಷ್ಟು ಹೋರಾಟ ನಡೆಸಲಾಗಿದೆ. ಹೋರಾಟದ ಫಲವಾಗಿ ಇಂದು ವಿ.ವಿ ಸಾಗರಕ್ಕೆ ಭದ್ರಾ ನೀರು ಹಾಗೂ ಮಳೆ ನೀರು ಬಂದು ಡ್ಯಾಂ ಸಮೃದ್ಧಿಯಾಗಿ ತುಂಬಿದೆ. ಇಂತಹ ಸಂದರ್ಭದಲ್ಲಿ ಹಿರಿಯರು ಹಾಗೂ ಮಾಜಿ ಶಾಸಕರು ಬಿಜಿ ಗೋವಿಂದಪ್ಪ ಅವರ ವಿವಿ ಸಾಗರ ಕೋಡಿ ತಗ್ಗಿಸುವ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋಡಿ ತಗ್ಗಿಸಿದರೆ 10 ಟಿಎಂಸಿ ನೀರು ಖಾಲಿ
ಜಲಾಶಯದ ಹಿನ್ನೀರಿನ ರೈತರಿಗೆ ತೊಂದರೆ ಆಗಿದೆ. ಆದರೆ ಅದಕ್ಕೆ ಪರಿಹಾರ ಕಂಡುಕೊಳ್ಳೋಣ. ಅದನ್ನು ಬಿಟ್ಟು ಕೋಡಿ ತಗ್ಗಿಸಬೇಕು ಎಂದು ಹೇಳಿಕೆ ನೀಡುವುದು ಸರಿಯಲ್ಲ. ಕೋಡಿ ತಗ್ಗಿಸಿದರೆ ಸುಮಾರು 10 ಟಿಎಂಸಿ ನೀರು ಖಾಲಿಯಾಗುವ ಸಾಧ್ಯತೆಯಿದೆ. ಇದರಿಂದ ನೀರಿನ ಸಮಸ್ಯೆ ಉಂಟಾಗಲಿದೆ. ಇದರ ಜೊತೆಗೆ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಳಲ್ಕೆರೆ ಹಾಗೂ ಚಿತ್ರದುರ್ಗ ಜನತೆಗೆ ಮತ್ತು ಡಿಆರ್ಡಿಒ ಕುಡಿಯುವ ನೀರಿಗೆ ಕಲ್ಲು ಹಾಕಿದಂತಾಗುತ್ತದೆ ಎಂದು ತಿಳಿಸಿದರು.

ಮಾಜಿ ಸಚಿವ ಡಿ. ಸುಧಾಕರ್ ವಿರುದ್ಧ ರೈತರ ಕಿಡಿ
ಕೋಡಿ ತಗ್ಗಿಸುವ ಹೇಳಿಕೆಯನ್ನು ಕೇಳಿ ಸುಮ್ಮನೆ ವೇದಿಕೆಯಲ್ಲಿ ಕುಳಿತಿದ್ದ ಮಾಜಿ ಸಚಿವ ಡಿ. ಸುಧಾಕರ್ ಹಾಗೂ ಮಾಜಿ ಸಂಸದ ಬಿಎನ್ ಚಂದ್ರಪ್ಪ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಬಗ್ಗೆ ಕಳಾಜಿ ಇಲ್ಲದ ಇವರು ಬರುವ ಚುನಾವಣೆಯಲ್ಲಿ ಯಾವ ಮುಖವಿಟ್ಟುಕೊಂಡು ಮತಗಳನ್ನು ಹೇಗೆ ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ ರೈತರು, ಹಿಂದೊಮ್ಮೆ ತಾಲೂಕಿನಿಂದ ನೀರನ್ನು ಚಳ್ಳಕೆರೆಗೆ ಕೊಂಡೊಯ್ದು ನಮ್ಮ ತೋಟಗಳ ನಾಶಕ್ಕೆ ಕಾರಣವಾಗಿದ್ದ ಮಾಜಿ ಸಚಿವರು ಮತ್ತೆ ಕಿವಿಯಿದ್ದು ಕೇಳಿಸಲಿಲ್ಲ ಎಂಬಂತೆ ಸುಮ್ಮನೆ ಕುಳಿತಿರುವುದು ಕ್ಷೇತ್ರದ ಜನತೆಯ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ವಿವಿ ಸಾಗರ ಅಣೆಕಟ್ಟೆ ವಿಚಾರದಲ್ಲಿ ರಾಜಕೀಯ ಬೇಡ
ವಾಣಿ ವಿಲಾಸ ಸಾಗರ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಪಿಟ್ಲಾಲಿ ಶ್ರೀನಿವಾಸ್ ಮಾತನಾಡಿ " ಮಾಜಿ ಶಾಸಕರು ಈ ವಿಚಾರವಾಗಿ ಒಂದು ಹೇಳಿಕೆಯನ್ನು ನೀಡಿಲ್ಲ. ಇದು ಕ್ಷೇತ್ರದ ಬಗ್ಗೆ ಅವರು ಯಾವ ರೀತಿಯ ಧೋರಣೆ ಹೊಂದಿದ್ದಾರೆ ಎಂದು ತಿಳಿಸುತ್ತದೆ. ಹಾಲಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ರವರು ವಿದೇಶಿ ಪ್ರವಾಸದಲ್ಲಿದ್ದರೂ ಅವರು ಕ್ಷೇತ್ರದ ಪರವಾಗಿ ಮಾಧ್ಯಮ ಹೇಳಿಕೆ ನೀಡಿ' ರಾಜಕೀಯ ಕಾರಣಕ್ಕಾಗಿ ವಾಣಿ ವಿಲಾಸ ಸಾಗರ ಅಣೆಕಟ್ಟೆಯ ವಿಷಯ ಬಳಸಿಕೊಳ್ಳಬೇಡಿ' ಎಂದು ಹೇಳಿಕೆ ನೀಡಿರುವುದನ್ನು ನೋಡಿದರೆ ಹಾಲಿ ಶಾಸಕರಿಗೆ ಕ್ಷೇತ್ರದ ಮೇಲೆ ಇರುವ ಬದ್ದತೆಯನ್ನು ತೋರಿಸುತ್ತದೆ" ಎಂದು ಹೇಳಿದರು.

ಹಳ್ಳಿ ಹಳ್ಳಿಗಳಲ್ಲಿ ಹೋರಾಟ ಮಾಡಲು ಸಿದ್ದ
ಆರನಕಟ್ಟೆ ಗ್ರಾಮದ ಗಣೇಶ್ ಮಾತನಾಡಿ " ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಹಾಗೂ ನೀರಾವರಿ ಯೋಜನೆಗೆ ಸಾಕಷ್ಟು ನೀರಿನ ಅವಶ್ಯಕತೆ ಇದೆ. ಯಾವುದೇ ಕಾರಣಕ್ಕೂ ಕೋಡಿ ತಗ್ಗಿಸಲು ವಾಣಿವಿಲಾಸ ಅಚ್ಚುಕಟ್ಟು ಪ್ರದೇಶದ ರೈತರು ನಾವು ಬಿಡುವುದಿಲ್ಲ. ಪ್ರತಿ ಹಳ್ಳಿಹಳ್ಳಿಗಳಲ್ಲಿ ಹೋರಾಟ ಮಾಡಲು ನಾವೆಲ್ಲಾ ಸಿದ್ದ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್, ಜೆ.ಕೃಷ್ಣ, ರೈತ ಮುಖಂಡರಾದ ಎನ್. ಶಿವಕುಮಾರ್, ಎಸ್ ಕೆ ಗೌಡ್ರು ಮುತ್ತುಸ್ವಾಮಿ, ಸಮುದ್ರದ ಹಳ್ಳಿ ಲೋಕಣ್ಣ , ಶಿವಪುರ ತಿಪ್ಪೇಸ್ವಾಮಿ , ಆರನಕಟ್ಟೆ ಮಂಜುನಾಥ್, ಚಲುವರಾಜ್ ಮೋಹನ್ ರಾಜ್, ರಾಜೇಂದ್ರನ್, ಕಸವನಹಳ್ಳಿ ರಾಮಚಂದ್ರ, ದೇವರಾಜ್ ನಾಗಣ್ಣ, ಮೋಹನ್ ಗೌಡ್ರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications