ಕಾಡಾನೆ ದಾಳಿಯಿಂದ ನಾಲ್ಕು ಎಕರೆ ಅಡಿಕೆ, ಬಾಳೆ ತೋಟ ನಾಶ: ರೈತ ಕಂಗಾಲು
ಚಿಕ್ಕಮಗಳೂರು, ಜನವರಿ 2: ಕಾಡಾನೆಗಳ ಹಿಂಡು ದಾಂಧಲೆ ಮಾಡಿದ ಪರಿಣಾಮ ಸುಮಾರು ನಾಲ್ಕು ಎಕರೆ ಅಡಿಕೆ-ಬಾಳೆ ತೋಟ ಬಹುತೇಕ ನಾಶವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ನಂದಿಬಟ್ಲು ಗ್ರಾಮದಲ್ಲಿ ನಡೆದಿದೆ.
ಕಳೆದೊಂದು ತಿಂಗಳಿಂದ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸುತ್ತಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದೆ. ಸ್ಥಳೀಯರು ಪಟಾಕಿ ಸಿಡಿಸಿದಾಗ ಕಾಡಿನಲ್ಲಿ ಕಣ್ಮರೆಯಾಗುವ ಕಾಡಾನೆಗಳ ಹಿಂಡು ಮರುದಿನ ಬೆಳಗ್ಗೆ ಮತ್ತೆ ಹೊಲ-ಗದ್ದೆ-ತೋಟಗಳಲ್ಲಿ ಬೀಡು ಬಿಟ್ಟಿರುತ್ತವೆ.
ಲಿಂಗದಹಳ್ಳಿ ಸಮೀಪದ ನಂದಿಬಟ್ಲು ಗ್ರಾಮದಲ್ಲಿ ಕಾಡಾನೆಗಳ ಹಿಂಡು ನಾಲ್ಕು ಎಕೆರೆ ಅಡಿಕೆ-ಬಾಳೆ ತೋಟವನ್ನು ನಾಶಮಾಡಿವೆ. ಇನ್ನೊಂದು ವರ್ಷ ಕಳೆದಿದ್ದರೆ ಅಡಿಕೆ ಫಸಲು ಬರುತ್ತಿತ್ತು. ಆದರೆ, ಬೆಳೆ ಬರುವ ಸಮಯದಲ್ಲಿ ತೋಟವನ್ನು ಕಳೆದುಕೊಂಡ ಬೆಳೆಗಾರ ಕಂಗಾಲಾಗಿದ್ದಾನೆ.

ಲಿಂಗದಹಳ್ಳಿಯಲ್ಲಿ ಕಾಡಾನೆಗಳ ಹಿಂಡು ದಾಂದಲೆ ಮಾಡುತ್ತಿರುವ ಕಾರಣ ಈಗಾಗಲೇ ಹಲವು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಆನೆಗಳನ್ನು ಓಡಿಸದ ಅರಣ್ಯ ಇಲಾಖೆ ವಿರುದ್ಧ ನೂರಾರು ರೈತರು ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆ ದಾಳಿಯಿಂದ ನಾಶವಾದ ಅಡಿಕೆ ತೋಟಕ್ಕೆ ತಣಿಗೇಬೈಲು ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಮ್ಮ ಅಸಮಾಧಾನ ಹೊರ ಹಾಕಿದ ರೈತರು, ಕಾಡಾನೆ ಹಾವಳಿಯಿಂದ ಬೆಳೆ ಕಳೆದುಕೊಂಡಿದ್ದೇವೆ. ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ, ಅರಣ್ಯ ಅಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಬ್ಬಿನ ಗದ್ದೆಗೆ ನುಗ್ಗಿದ ಒಂಟಿ ಸಲಗದಿಂದ ಅಪಾರ ಬೆಳೆ ನಾಶ: ಆತಂಕದಲ್ಲಿ ಗ್ರಾಮಸ್ಥರು
ಮಂಡ್ಯ: ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮ ಸಮೀಪ ಕಬ್ಬಿನ ಗದ್ದೆಗೆ ಒಂಟಿ ಸಲಗವೊಂದು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ.

ಚಿಕ್ಕರಸಿನಕೆರೆ ಗ್ರಾಮದ ಶಿವಲಿಂಗಯ್ಯ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಬೆಳಗಿನ ಜಾವ ಕಾಡಾನೆ ಪ್ರತ್ಯಕ್ಷವಾಗಿದೆ. ಮುಂಜಾನೆ ರೈತರು ಕೃಷಿ ಕೆಲಸ ಮಾಡಲು ಹೊಲ-ಗದ್ದೆಗಳಿಗೆ ತೆರಳುತ್ತಿದ್ದಾಗ ಆನೆ ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಎಸಿಎ ಮಹದೇವಸ್ವಾಮಿ, ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪ ಅರಣ್ಯಾಧಿಕಾರಿಗಳಾದ ರವಿ, ರತ್ನಾಕರ್ ಹಾಗೂ ಮಂಡ್ಯ ಮತ್ತು ಮಳವಳ್ಳಿ, ಮದ್ದೂರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಗ್ರಾಮಕ್ಕೆ ಮತ್ತೆ ಕಾಡಾನೆ ನುಗ್ಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಹಲಗೂರಿನ ಮುತ್ತತ್ತಿ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಒಂಟಿ ಸಲಗ, ಮಾರ್ಗ ಮಧ್ಯೆ ಮಳವಳ್ಳಿ ಸಮೀಪದ ವಳಗೆರೆದೊಡ್ಡಿ ಗ್ರಾಮದ ಬಾಳೆ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದೆ. ಬಳಿಕ ಮುಂಜಾನೆ ವೇಳೆ ಚಿಕ್ಕರಸಿನಕೆರೆ ಕಬ್ಬಿನ ತೋಟಕ್ಕೆ ನುಗ್ಗಿ ದಾಳಿ ಮಾಡಿದೆ. ಬಳಿಕ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಆನೆಯನ್ನು ಮತ್ತೆ ಅರಣ್ಯಕ್ಕಟ್ಟಲು ಕ್ರಮಗಳನ್ನು ಕೈಗೊಂಡಿದ್ದಾರೆ.












Click it and Unblock the Notifications