ನಾನು ಕಾಂಗ್ರೆಸ್ ಸೇರುತ್ತೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು: ಕುಮಾರಸ್ವಾಮಿ
ಚಿಕ್ಕಮಗಳೂರು, ಸೆಪ್ಟೆಂಬರ್ 13: "ನಾನು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ವದಂತಿ ಹಬ್ಬಿದ್ದು, ಇದು ಸತ್ಯಕ್ಕೆ ದೂರವಾದ ಮಾತು," ಎಂದು ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ರಾಜಕೀಯದಲ್ಲಿ ಸ್ಥಾನಮಾನ ಗಳಿಸಿದ್ದು ಬಿಜೆಪಿಯಿಂದ ಮಾತ್ರ. ಬಿಜೆಪಿ ಪಕ್ಷ ನನಗೆ ಅತ್ಯುನ್ನತ ಗೌರವ ಹಾಗೂ ಸ್ಥಾನಮಾನಗಳನ್ನು ನೀಡಿದೆ. ಪಕ್ಷದ ಏಳಿಗೆಗಾಗಿ ನಾನು ದುಡಿಯುತ್ತಿದ್ದು, ಬಿಜೆಪಿ ಪಕ್ಷ ತೊರೆಯುವ ಮಾತೇ ಇಲ್ಲ.ಇಂತಹ ವದಂತಿಗಳಿಗೆ ಯಾರು ಕಿವಿಗೊಡಬಾರದು," ಎಂದು ಜನರಿಗೆ ಮನವಿ ಮಾಡಿದರು.
ಇನ್ನು ಇದೇ ವೇಳೆ ಮಾತನಾಡಿದ ಎಂ.ಪಿ. ಕುಮಾರಸ್ವಾಮಿ, "ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಹೆಚ್ಚಿನ ಹಾನಿ, ಅವಘಡಗಳು ಸಂಭವಿಸಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದು, ಸೂಕ್ತ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸಲಹೆ ನೀಡಿದ್ದೇನೆ," ಎಂದು ತಿಳಿಸಿದರು.

"ಕಳೆದ ಏಳು ದಿನಗಳಿಂದ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಆರ್ಭಟದಿಂದ ಮನೆಗಳ ಕುಸಿತ, ಭೂಕುಸಿತ, ರಸ್ತೆ, ಚರಂಡಿ, ತಡೆಗೋಡೆಗಳಿಗೆ ಸಾಕಷ್ಟು ಹಾನಿಯಾಗಿವೆ. ರೈತರ ಬೆಳೆಗಳು ನಾಶವಾಗಿದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗಿದೆ. ಜಿಲ್ಲೆಯ ಕಳಸ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ," ಎಂದು ಹೇಳಿದರು.
ನಾನು ಕಾಂಗ್ರೆಸ್ ಸೇರ್ಪಡೆ ಬಗ್ಗೆ ವದಂತಿ ಹಬ್ಬಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದು ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ ಹೇಳಿದ್ದಾರೆ. #MPKumaraswamy pic.twitter.com/zfbWQGAASW
— oneindiakannada (@OneindiaKannada) September 13, 2021
"ಕಳೆದ 2019ರಿಂದ ನಿರಂತರ ಅತೀವೃಷ್ಟಿ ಉಂಟಾಗಿದೆ. ಪರಿಹಾರ ಕಾರ್ಯಗಳು ಪ್ರಗತಿಯಲ್ಲಿದೆ. ಮತ್ತೆ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಪುನರ್ನಿರ್ಮಾಣ ಆಗಿರುವ ಕಾಮಗಾರಿಗಳಿಗೂ ಹಾನಿಯಾಗಿದೆ. ರೈತರಿಗೆ ಬೆಳೆಹಾನಿ ಪರಿಹಾರ ನೀಡಲಾಗುತ್ತಿದೆ. ಸರ್ವರ್ ಸಮಸ್ಯೆಯಿಂದ ಕೆಲ ರೈತರಿಗೆ ಬೆಳೆ ಪರಿಹಾರ ತಲುಪಿಲ್ಲ. ಸರ್ವರ್ ಸರಿಪಡಿಸಲಾಗಿದ್ದು, ಶೀಘ್ರವೇ ಪರಿಹಾರ ಸಿಗಲಿದೆ," ಎಂದು ಭರವಸೆ ನೀಡಿದರು.

"ಪ್ರಸಕ್ತ ವರ್ಷದ ಮೂಡಿಗೆರೆ ತಾಲ್ಲೂಕನ್ನು ಅತೀವೃಷ್ಟಿ ಪ್ರದೇಶವಾಗಿ ಸರ್ಕಾರ ಘೋಷಿಸಲು ನಾನು ವಿಧಾನಸೌಧದ ಎದುರು ಪ್ರತಿಭಟಿಸಬೇಕಾಯಿತು. ಕಳೆದ ವಾರ ಅತೀವೃಷ್ಟಿ ಹಾನಿ ಅಧ್ಯಯನಕ್ಕೆ ರಾಜ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಿದೆ. ಈಗ ಮತ್ತೆ ಮಳೆ ಆರ್ಭಟದೊಂದಿಗೆ ಚಳಿಯ ವಾತಾವರಣ ಏರ್ಪಟ್ಟಿದೆ. ಊರುಬಗೆ, ಭೈರಾಪುರ, ಕುಂಬರಡಿ, ಗುತ್ತಿ, ತುರುವೆ ಗ್ರಾಮಗಳಲ್ಲಿ ಮಳೆ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪಿಸಬೇಕಾಗಿದೆ," ಎಂದರು.
Recommended Video
"ಕಾಡಾನೆ, ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಹಲವೆಡೆ ಜನರು ಜೀವ ಭಯದಿಂದ ಮನೆಬಿಟ್ಟು ಹೊರಗೆ ಬಾರದಂತಹ ದುಸ್ಥಿತಿ ಉಂಟಾಗಿದೆ. ಕಾಡಾನೆಗಳಿಂದ ಅಪಾರ ಬೆಳೆನಷ್ಟ ಉಂಟಾಗುತ್ತಿದೆ. ಕೃಷಿ ಜಮೀನು ಪಾಳುಬಿಟ್ಟಿದ್ದಾರೆ. ಕಾಡಾನೆಗಳು ಗ್ರಾಮಗಳಿಗೆ ಬಾರದಂತೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರುತ್ತೇನೆ," ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications