ಚಿತ್ರಗಳು; ನಂದಿ ಗಿರಿಧಾಮದ ರಸ್ತೆ ನಿರ್ಮಾಣ ಪೂರ್ಣ
ಚಿಕ್ಕಬಳ್ಳಾಪುರ, ನವೆಂಬರ್ 29; ಬೆಂಗಳೂರಿನಿಂದ ಪ್ರವಾಸ ಹೋಗುವ ಜನರಿಗೆ ಸಿಹಿಸುದ್ದಿ. ನಂದಿ ಗಿರಿಧಾಮದ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆಗಸ್ಟ್ನಲ್ಲಿ ಉಂಟಾದ ಭೂ ಕುಸಿತದಿಂದ ನಂದಿ ಬೆಟ್ಟದ ಮೇಲ್ಭಾಗಕ್ಕೆ ಹೋಗುವ ರಸ್ತೆಗೆ ಹಾನಿಯಾಗಿತ್ತು.
ಸೋಮವಾರ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಮಾಹಿತಿ, ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 'ಆಗಸ್ಟ್ 25ರಂದು ಸಂಭವಿಸಿದ ಭೂಕುಸಿತದಲ್ಲಿ ಕೊಚ್ಚಿ ಹೋಗಿದ್ದ ನಂದಿ ಬೆಟ್ಟದ ರಸ್ತೆಯನ್ನು ಪುನರ್ ನಿರ್ಮಿಸಲಾಗಿದೆ. ಹೊಸ ರಸ್ತೆಯ ಕಾಮಗಾರಿ 3 ತಿಂಗಳೊಳಗೆ ಪೂರ್ಣಗೊಂಡಿದೆ' ಎಂದು ಹೇಳಿದ್ದಾರೆ.
ನಂದಿ ಬೆಟ್ಟ ಪ್ರವಾಸಿಗರಿಗೆ ಸಿಹಿ ಸುದ್ದಿ; ಶೀಘ್ರದಲ್ಲೇ ಗಿರಿಧಾಮ ಮಾರ್ಗ ಓಪನ್
ಆಗಸ್ಟ್ 24ರಂದು ನಂದಿ ಗಿರಿಧಾಮದ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿತ್ತು. ಆದ್ದರಿಂದ ಭೂಕುಸಿತ ಯಂಟಾಗಿತ್ತು. ಗಿರಿಧಾಮದ ಮೇಲ್ಭಾಗಕ್ಕೆ ಹೋಗುವ ರಸ್ತೆ, ವಿದ್ಯುತ್ ಕಂಬಗಳು ಕುಸಿದಿದ್ದವರು. ಇದರಿಂದಾಗಿ ನಂದಿ ಗಿರಿಧಾಮಕ್ಕೆ ಹೋಗುವ ಮಾರ್ಗ ಬಂದ್ ಆಗಿತ್ತು.
ನಂದಿ ಬೆಟ್ಟದ ತಪ್ಪಲಿನಲ್ಲಿ ಪವಿತ್ರ ವೃಕ್ಷ ಉತ್ಸವ ಆಯೋಜನೆ
ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದರೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡದಂತೆ ನಿರ್ಬಂಧ ಹೇರಿತ್ತು. ಕೊಚ್ಚಿ ಹೋಗಿದ್ದ ರಸ್ತೆಯನ್ನು ಪುನರ್ ನಿರ್ಮಾಣ ಮಾಡುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿತ್ತು.
VIDEO: ಪ್ರವಾಸಿ ಪ್ರೀಯರಿಗೆ ಖುಷಿ ಕೊಡುವ ಸಂಗತಿ; ಇನ್ಮುಂದೆ ನಂದಿ ಹಿಲ್ಸ್ಗೆ ಹೋಗಲು ವಾಹನ ಬೇಕಿಲ್ಲ!
ಸುಮಾರು 80 ಲಕ್ಷ ರೂ. ವೆಚ್ಚ
ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಜಯಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ಗುಡ್ಡ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ರಸ್ತೆ ಪುನರ್ ಸ್ಥಾಪನೆ ಬಗ್ಗೆ ಚರ್ಚೆ ನಡೆಸಿತ್ತು. 3 ತಿಂಗಳಿನಲ್ಲಿ ಗುಡ್ಡ ಕುಸಿದ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆ ಕುಸಿದು ಹೋಗಿರುವ 40 ಮೀಟರ್ ಉದ್ದ, 6 ರಿಂದ 7 ಮೀಟರ್ ಅಗಲದ ರಸ್ತೆ ಪುನರ್ ನಿರ್ಮಾಣಕ್ಕೆ ಸುಮಾರು 80 ಲಕ್ಷ ವೆಚ್ಚವಾಗಲಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸೆಪ್ಟೆಂಬರ್ 17ರಂದು ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಿತ್ತು. ಆಗ ನಂದಿ ಗಿರಿಧಾಮದ ರಸ್ತೆ ನಿರ್ಮಾಣಕ್ಕೆ ಸಹ ಅನುದಾನ ಬಿಡುಗಡೆ ಮಾಡಿತ್ತು.
ರಸ್ತೆ ಮತ್ತಷ್ಟು ಅಗಲೀಕರಣ
ಕೊಚ್ಚಿ ಹೋಗಿದ್ದ ರಸ್ತೆಯನ್ನು ಮತ್ತಷ್ಟು ಅಗಲೀಕರಣ ಮಾಡಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಮೂರು ತಿಂಗಳಿನಲ್ಲಿ ಉತ್ತಮ ಗುಣಮಟ್ಟದ ಶಾಶ್ವತ ರಸ್ತೆಯನ್ನು ನಿರ್ಮಿಸಲಾಗಿದೆ. ಇದರಿಂದಾಗಿ ನಂದಿ ಗಿರಿಧಾಮಕ್ಕೆ ಹೋಗುವ ಪ್ರವಾಸಿಗರಿಗೆ ಸಿಹಿಸುದ್ದಿ ಸಿಕ್ಕಿದೆ.
ರಸ್ತೆ ಕುಸಿದ ಜಾಗದಲ್ಲಿದ್ದ ಬಂಡೆಯನ್ನು ಒಡೆದು ರಸ್ತೆ ವಿಸ್ತರಣೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳು ಸ್ಥಳದಲ್ಲಿಯೇ ಮೊಕ್ಕಂ ಹೂಡಿ ಕಾಮಗಾರಿಗಳ ಕುರಿತು ಮೇಲ್ಚಿಚಾರಣೆ ನಡೆಸಿದ್ದರು. ನಾಲ್ಕು ಕಾಂಕ್ರೀಟ್ ಪೈಪ್ಗಳನ್ನು ಹಾಕಿ ಅದರ ಮೇಲೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮೇಲಿನಿಂದ ನೀರು ರಭಸವಾಗಿ ಹರಿದು ಬಂದರೂ ರಸ್ತೆಗೆ ಹಾನಿಯಾಗದಂತೆ ಕಾಮಗಾರಿ ಕೈಗೊಳ್ಳಲಾಗಿದೆ.
ಲಕ್ಷಾಂತರ ರೂ. ಆದಾಯಕ್ಕೆ ಕತ್ತರಿ
ನಂದಿ ಗಿರಿಧಾಮ ಬೆಂಗಳೂರಿನ ಹತ್ತಿರವಿರುವ ಪ್ರಸಿದ್ಧ ಪ್ರವಾಸಿ ತಾಣ ಪ್ರತಿದಿನ ಸುರ್ಯೋದಯ ನೋಡಲು ನೂರಾರು ಜನರು ಗಿರಿಧಾಮಕ್ಕೆ ಆಗಮಿಸುತ್ತಾರೆ. ರಜೆ ದಿನ, ವಾರಾಂತ್ಯದಲ್ಲಿ ಬೆಟ್ಟಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಬೈಕ್, ಕಾರುಗಳಿಂದಾಗಿ ಗಿರಿಧಾಮದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಗಿರಿಧಾಮದಿಂದಾಗಿ ಸರ್ಕಾರಕ್ಕೆ ಆದಾಯ ಬರುತ್ತದೆ. ಈಗ ರಸ್ತೆ ಕುಸಿದು ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದ್ದರಿಂದ ಲಕ್ಷಾಂತರ ರೂಪಾಯಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಯಾವಾಗ ಗಿರಿಧಾಮಕ್ಕೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಕಾದು ನೋಡಬೇಕಿದೆ.
ಮಳೆಯಿಂದಾಗಿ ವಿಳಂಬ
ಮಳೆಗೆ ಕೊಚ್ಚಿ ಹೋದ ರಸ್ತೆ ನಿರ್ಮಾಣ ಕಾರ್ಯ ಇನ್ನೂ ಬೇಗ ಪೂರ್ಣಗೊಳ್ಳಬೇಕಿತ್ತು. ಆದರೆ ಚಂಡಮಾರುತದ ಪರಿಣಾಮ ಸತತವಾಗಿ ಸುರಿದ ಮಳೆಯಿಂದಾಗಿ ಕಾಮಗಾರಿ ವಿಳಂಬವಾಯಿತು. ಈಗ ಕಾಂಕ್ರೀಟ್ ಹಾಕಿದ ಮೇಲೆ 10 ದಿನಗಳ ಕ್ಯೂರಿಂಗ್ ಸಹ ಮುಕ್ತಾಯಗೊಂಡಿದೆ. ರಸ್ತೆ ಸಂಪೂರ್ಣವಾಗಿ ಸಿದ್ಧವಾಗಿದೆ.
ರಸ್ತೆ ಕುಸಿದಿದ್ದರಿಂದ ಗಿರಿಧಾಮದ ಮೇಲಿನ ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಅಧಿಕಾರಿಗಳು ಸಹ ಗಿರಿಧಾಮಕ್ಕೆ ಹೋಗಲು ಪರದಾಟ ನಡೆಸಬೇಕಿತ್ತು. ಈಗ ರಸ್ತೆ ನಿರ್ಮಾಣ ಪೂರ್ಣಗೊಂಡಿದ್ದು, ವಾಹನಗಳು ಗಿರಿಧಾಮದ ಮೇಲಕ್ಕೆ ತಲುಪಬಹುದಾಗಿದೆ.
Recommended Video
ನಂದಿ ಗಿರಿಧಾಮದ ರಸ್ತೆ
ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ನಂದಿ ಗಿರಿಧಾಮದ ರಸ್ತೆ ನಿರ್ಮಾಣದ ಕುರಿತ ಮಾಹಿತಿ ಟ್ವೀಟ್ ಮಾಡಿದ್ದಾರೆ.