ಎಐಎಡಿಎಂಕೆ ಧ್ವಜ ಸ್ತಂಭವೇ ಕಾರಣ, ಯುವತಿ ಕುಟುಂಬದವರು ಆಕ್ರೋಶ
ಚೆನ್ನೈ, ನವೆಂಬರ್ 12: ಟೆಕ್ಕಿ ಶುಭಶ್ರೀ ದುರಂತ ಸಾವಿನ ಸೂತಕದ ನಡುವೆ ಮತ್ತೊಂದು ಅಪಘಾತಕ್ಕೆ ಆಡಳಿತಾರೂಢ ಎಐಎಡಿಎಂಕೆ ಪರೋಕ್ಷವಾಗಿ ಕಾರಣವಾಗಿದೆ. ಎಐಎಡಿಎಂಕೆಯ ಧ್ವಜ ಸ್ತಂಭಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಯುವತಿ ಕಾಲು ಮುರಿದುಕೊಂಡ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಘಟನೆಗೆ ಕಾರಣವಾದ ಎಐಎಡಿಎಂಕೆಯನ್ನು ದೋಷಾರೋಪಣ ಪಟ್ಟಿಯಿಂದ ಹೊರಗಿಡುವ ಪ್ರಯತ್ನಕ್ಕೆ ಸಂತ್ರಸ್ತೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದುರ್ಘಟನೆಯಲ್ಲಿ ಕಾಲು ಮುರಿದುಕೊಂಡ ಯುವತಿಯನ್ನು ರಾಜೇಶ್ವರಿ ಎಂದು ಗುರುತಿಸಲಾಗಿದೆ. ರಾಜೇಶ್ವರಿ ಕೂಡಾ ದ್ವಿಚಕ್ರ ವಾಹನದಲ್ಲಿ ಹೋಗುವಾಗ ರಸ್ತೆ ಪಕ್ಕದಲ್ಲಿದ್ದ ಎಐಎಡಿಎಂಕೆ ಧ್ವಜ ಸ್ತಂಭವು ಪಕ್ಕಕ್ಕೆ ವಾಲಿದೆ. ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಸ್ಕೂಟರ್ ನಿಂದ ಯುವತಿ ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಟ್ರಕ್ ಆಕೆಯ ಕಾಲಿನ ಮೇಲೆ ಹರಿದಿದೆ.
ಅವಿನಾಶಿ ರಸ್ತೆಯ ಗೋಲ್ಡ್ ವಿನ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಟ್ರಕ್ ಡೈವರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ. ಯುವತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂಬಂಧಿಕರಾದ ಸಿ.ಆರ್ ಶಿವನ್ ದೂರಿದ್ದಾರೆ
ಸಿಂಗನಲ್ಲೂರು ನಿವಾಸಿಯಾದ ರಾಜೇಶ್ವರಿ, ಚಿನ್ನಯಂಪಾಳಂನ ಹೋಟೆಲ್ ವೊಂದರಲ್ಲಿ ಅಕೌಂಟ್ ವಿಭಾಗದಲ್ಲಿ ಉದ್ಯೋಗಿಯಾಗಿದ್ದು, ಈಕೆ ಸಂಬಳದ ಮೇಲೆ ಮನೆ ನಡೆಯುತ್ತಿತ್ತು. ಕಚೇರಿಯಿಂದ ಮೂರು ಕಿ.ಮೀ ದೂರದಲ್ಲಿ ಈ ಘಟನೆ ಸಂಭವಿಸಿದ್ದು, ಧ್ವಜ ಸ್ತಂಭ ತಪ್ಪಿಸಲು ಯತ್ನಿಸಿದ್ದರಿಂದ ಈ ಅಪಘಾತ ಸಂಭವಿಸಿತು ಎಂದು ಸಂಬಂಧಿಕರಾದ ಸಿ.ಆರ್ ಶಿವನ್ ದೂರಿದ್ದಾರೆ.

ಇಂಥ ದುರ್ಘಟನೆ ಮತ್ತೆ ಮರುಕಳಿಸುತ್ತಿದೆ.
ಶುಭಶ್ರೀ ಸಾವಿಗೆ ಕಾರಣವಾಗಿದ್ದೇ ಆಡಳಿತ ಪಕ್ಷದ ಅಕ್ರಮ ಹೋರ್ಡಿಂಗ್. ಹೀಗಾಗಿ, ಆಕೆ ಸಾವಿಗೆ ಎಐಎಡಿಎಂಕೆ ಸರ್ಕಾರವೇ ಹೊಣೆಯಾಗಬೇಕು ಎಂದು ಶುಭಶ್ರೀ ಆಪ್ತರು ಆಕ್ರೋಶಭರಿತವಾಗಿ ಹೇಳಿದ್ದರು. ಈ ಬಗ್ಗೆ ಸರ್ಕಾರಕ್ಕೆ ಹೈಕೋರ್ಟ್ ಕೂಡಾ ಚಾಟಿಯೇಟು ನೀಡಿತ್ತು. ರಾಜ್ಯದೆಲ್ಲೆಡೆ ಅಕ್ರಮ ಹೋರ್ಡಿಂಗ್, ಬ್ಯಾನರ್, ಬಟ್ಟಿಂಗ್ ತೆರವುಗೊಳಿಸಲಾಗಿತ್ತು. ಆದರೆ ಇಂಥ ದುರ್ಘಟನೆ ಮತ್ತೆ ಮರುಕಳಿಸುತ್ತಿದೆ.

ಆರೋಪಿ ಜಯಗೋಪಾಲ್ ಗೆ ಜಾಮೀನು
ಪಳ್ಳಿಯಕಾರಣಿ ಬಳಿ ಥರೈಪಕ್ಕಾಂ-ಪಲ್ಲಾವರಂ ರಸ್ತೆಯ ತಿರುವಿನಲ್ಲಿ ದ್ವಿಚಕ್ರವಾಹನ ಚಲಿಸುವಾಗ ಅಕ್ರಮವಾಗಿ ಹಾಕಿದ್ದ ಹೋರ್ಡಿಂಗ್ ಆಕೆ ಮೇಲೆ ಬೀಳುತ್ತದೆ. ಇದರಿಂದ ಬ್ಯಾಲೆನ್ಸ್ ತಪ್ಪಿ ರಸ್ತೆ ಮೇಲೆ ಬಿದ್ದ ಶುಭಶ್ರೀ ಮೇಲೆ ಟ್ಯಾಂಕರ್ ವಾಹನ ಹರಿಯುತ್ತದೆ. ತಕ್ಷಣವೇ ಕ್ರೋಮೆಪೇಟ್ ಸರ್ಕಾರಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಲು ಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಗೆ ಜಯಗೋಪಾಲ್ ಕಾರಣರಾಗಿದ್ದಾರೆ.
ಇದೇ ವೇಳೆ ಶುಭಶ್ರೀ ಪ್ರಕರಣದ ಆರೋಪಿ ಜಯಗೋಪಾಲ್ ಗೆ ಮದ್ರಾಸ್ ಹೈಕೋರ್ಟ್ ಜಾಮೀನು ನೀಡಿದೆ. 23 ವರ್ಷ ವಯಸ್ಸಿನ ಶುಭಶ್ರೀ ಸಾವಿಗೆ ಎಐಎಡಿಎಂಕೆ ಹೋರ್ಡಿಂಗ್ ಬಿದ್ದು, ನಿಯಂತ್ರಣ ತಪ್ಪಿ ರಸ್ತೆ ಬಿದ್ದಿದ್ದಳು, ಆಕೆ ಮೇಲೆ ಟಕ್ ಹರಿದು ಮೃತಪಟ್ಟಿದ್ದಳು.

ಸರಿಯಾದ ಲೇನ್ ವ್ಯವಸ್ಥೆಯಲ್ಲಿ ಸಂಚಾರ ಕಷ್ಟ
ಧ್ವಜ ಸ್ತಂಭವು ಮರಳು ಮಿಶ್ರಿತ ಮಣ್ಣಿನಲ್ಲಿ ನೆಟ್ಟಿರುವುದರಿಂದ ಆಗಾಗ ರಸ್ತೆ ಕಡೆ ವಾಲುತ್ತಿರುತ್ತದೆ. ಇದರಿಂದ ವಾಹನ ಸವಾರರಿಗೆ ಸಮಸ್ಯೆ ಉಂಟಾಗುವುದು ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಸರಿಯಾದ ಲೇನ್ ವ್ಯವಸ್ಥೆಯಲ್ಲಿ ಸಂಚಾರ ಕಷ್ಟವಾಗುತ್ತಿದೆ. ಆದರೆ ಈ ಪ್ರಕರಣದಲ್ಲಿ ಅತಿ ವೇಗದ ಚಾಲನೆ ಮಾಡಿದೆ ಎಂದು ಟ್ರಕ್ ಡ್ರೈವರ್ ತಪ್ಪೊಪ್ಪಿಗೆ ನೀಡಿದ್ದಾನೆ. ಸಂತ್ರಸ್ತೆಯ ಕುಟುಂಬಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಎಐಎಡಿಎಂಕೆ ಮೇಲೆ ಆರೋಪ ಬಾರದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ತಮಿಳು ಚಿತ್ರರಂಗದ ಪ್ರಮುಖ ನಟರು ಮರುಗಿದ್ದಾರೆ
ಯುವ ಸಾಫ್ಟ್ ವೇರ್ ಇಂಜಿನಿಯರ್ ಶುಭಶ್ರೀ ದುರಂತ ಸಾವಿಗೆ ತಮಿಳು ಚಿತ್ರರಂಗದ ಪ್ರಮುಖ ನಟರು ಮರುಗಿದ್ದಾರೆ. ಸ್ಟಾರ್ ನಟರಾದ ವಿಜಯ್, ಸೂರ್ಯ ಅವರು ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಅಕ್ರಮ ಹೋರ್ಡಿಂಗ್, ಫ್ಲೆಕ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಈ ನಡುವೆ 23 ವರ್ಷ ವಯಸ್ಸಿನ ಶುಭಶ್ರೀ ಸಾವಿನ ನಂತರ ಕಟೌಟ್ ಸಂಸ್ಕೃತಿಗೆ ಬ್ರೇಕ್ ಹಾಕಲು ಸ್ಟಾರ್ ನಟರಾದ ವಿಜಯ್ ಹಾಗೂ ಸೂರ್ಯ ಮುಂದಾಗಿದ್ದಾರೆ. ಈ ಕುರಿತಂತೆ ಇಬ್ಬರು ನಟರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ, ಸಿನಿಮಾ ರಿಲೀಸ್ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಟೌಟ್, ಹೋರ್ಡಿಂಗ್ ಹಾಕದಂತೆ ಅಭಿಮಾನಿಗಳಿಗೆ ಸೂಚಿಸಿದ್ದಾರೆ.












Click it and Unblock the Notifications