ಕರ್ನಾಟಕದ ಮುಖ ತೋರಿಸುವಂತೆ ಮಾಡಬೇಡಿ ಎಂದು ಬೆದರಿಕೆ ಹಾಕಿದ ಅಣ್ಣಾಮಲೈ ವಿರುದ್ಧ ಎಫ್ಐಆರ್
ಚೆನ್ನೈ, ಏಪ್ರಿಲ್ 3: ಡಿಎಂಕೆ ಅಭ್ಯರ್ಥಿ ಸೆಂತಿಲ್ ಬಾಲಾಜಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ತಮಿಳುನಾಡಿನ ಅರವಕುರುಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕರೂರಿನ ಅರವಕುರುಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈಚೆಗೆ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಣ್ಣಾಮಲೈ, ಡಿಎಂಕೆ ಅಭ್ಯರ್ಥಿ ಸೆಂತಿಲ್ ಬಾಲಾಜಿ ಕುರಿತು ಮಾತನಾಡುತ್ತಾ, ನಾನು ಹೊಡೆದರೆ ಡಿಎಂಕೆ ನಾಯಕನ ಹಲ್ಲು ಮುರಿಯುತ್ತದೆ, ಮೂಳೆಗಳು ಇರುವುದಿಲ್ಲ. ಆದರೆ ಗಲಭೆಯಿಂದ ರಾಜಕೀಯ ಮಾಡುವುದು ನನಗೆ ಬೇಕಿಲ್ಲ. ನನ್ನ ಕರ್ನಾಟಕದ ಮುಖವನ್ನು ಇಲ್ಲಿ ತೋರಿಸಲು ಅವಕಾಶ ಕೊಡಬೇಡಿ ಎಂದು ಹೇಳಿದ್ದರು. ಈ ಭಾಷಣದ ಆಧಾರದಲ್ಲಿ ಡಿಎಂಕೆ ದೂರು ನೀಡಿದ್ದು, ಸೆಕ್ಷನ್ 153, 506 ಹಾಗೂ 66 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದೆ ಓದಿ...
ತಮಿಳುನಾಡಿನ ಅರವಕುರಿಚಿ ಕ್ಷೇತ್ರದಿಂದ ಅಣ್ಣಾಮಲೈ ನಾಮಪತ್ರ
"ನಾನು ಗಲಭೆಗೆ ಸಿದ್ಧನಿಲ್ಲ"
"ಇದುವರೆಗೂ ಎಷ್ಟು ಜನ ವಂಚಕರನ್ನು ನಾನು ನೋಡಿದ್ದೇನೆ. ನಾನು ನಿಮ್ಮ ಮೇಲೆ ಕೈ ಎತ್ತಿದರೆ ನಿಮ್ಮ ದನಿ ಬದಲಾಗುತ್ತದೆ. ನಾನು ಗಲಭೆ ಎಬ್ಬಿಸುತ್ತೇನೆ ಎಂದು ಹೇಳುತ್ತೀರ. ಡಿಎಂಕೆಗೆ ನಾನು ಒಂದು ಸಂದೇಶ ನೀಡಲು ಬಯಸುತ್ತೇನೆ. ನಾನು ಗಲಭೆಗೆ ಸಿದ್ಧವಿಲ್ಲ. ಹಿಂಸಾಚಾರವಲ್ಲದ ರಾಜಕೀಯ ಮಾಡಲು ನಾನು ಬಯಸುತ್ತೇನೆ" ಎಂದು ಹೇಳಿದ್ದರು.
'ನನಗೆ ಇನ್ನೊಂದು ಮುಖವಿದೆ. ಅದನ್ನು ತೋರಿಸಲು ಬಿಡಬೇಡಿ'
ತಾವು ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದವರು ಎಂಬುದನ್ನು ಉಲ್ಲೇಖಿಸಿ ಮಾತನಾಡಿದ ಅವರು, "ನನಗೆ ಇನ್ನೊಂದು ಮುಖವಿದೆ. ಅದು ನನ್ನ ಕರ್ನಾಟಕದ ಮುಖ. ಅದನ್ನು ಇಲ್ಲಿ ತೋರಿಸಬೇಕೆಂದು ಭಾವಿಸುವುದಿಲ್ಲ. ಈ ಭಾಷಣದ ವಿಡಿಯೋ ತೆಗೆದುಕೊಂಡು ಚುನಾವಣಾ ಆಯೋಗಕ್ಕೆ ನೀಡಿ. ನನಗೆ ಇದ್ಯಾವುದರ ಭಯವೂ ಇಲ್ಲ" ಎಂದು ಹೇಳಿದ್ದಾರೆ. ನನಗೆ ಹಿಂಸಾಚಾರ, ಗಲಭೆಯನ್ನು ಕೈಗೆತ್ತಿಕೊಳ್ಳಲು ಇಷ್ಟವಿಲ್ಲ. ಅಹಿಂಸಾ ಮಾರ್ಗದಲ್ಲಿ ರಾಜಕೀಯ ಮಾಡುತ್ತೇನೆ ಎಂದಿದ್ದರು.
ಸವಾಲು ಹಾಕಿದ್ದ ಡಿಎಂಕೆ ಸಂಸದ
ಅಣ್ಣಾಮಲೈ ಅವರ ಈ ಭಾಷಣ ಡಿಎಂಕೆ ಕೋಪಕ್ಕೆ ಕಾರಣವಾಗಿದ್ದು, ಸಂಸದ ಕನಿಮೊಳಿ ಅಣ್ಣಾಮಲೈಗೆ ತಿರುಗೇಟು ನೀಡಿದ್ದರು. ನಮ್ಮ ಪಕ್ಷದ ಸದಸ್ಯರನ್ನು ಮುಟ್ಟಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ತಾವು ಇಲ್ಲಿ ಕರ್ನಾಟಕದಲ್ಲಿನ ತಮ್ಮ ಮತ್ತೊಂದು ಮುಖವನ್ನು ತೋರಲು ಇಷ್ಟವಿಲ್ಲವೆಂದು ಅಣ್ಣಾಮಲೈ ಹೇಳಿದ್ದಾರೆ. ಸೆಂತಿಲ್ ಬಾಲಾಜಿಯವರ ಮೇಲೆ ಕೈ ಮಾಡುವ ಮಾತನಾಡಿದ್ದಾರೆ. ಡಿಎಂಕೆಯ ಒಬ್ಬ ಸದಸ್ಯರನ್ನು ಮುಟ್ಟಿ ನೋಡೋಣ. ನಮ್ಮನ್ನು ಯಾರೂ ಬೆದರಿಸಲು ಸಾಧ್ಯವಿಲ್ಲ. ನೀವು ಹಾಗೆ ಮಾಡಿದರೆ, ನಾವು ನಿಮ್ಮ ವಿರುದ್ಧ ತಿರುಗಿಬೀಳುತ್ತೇವೆ. ಅದನ್ನು ನೀವು ತಡೆದುಕೊಳ್ಳಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಚುನಾವಣೆ
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು 234 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಎಐಎಡಿಎಂಕೆ-ಬಿಜೆಪಿ ಮೈತ್ರಿ ಹಾಗೂ ಡಿಎಂಕೆ-ಕಾಂಗ್ರೆಸ್ ಮೈತ್ರಿ ನಡುವೆ ಹಣಾಹಣಿಯಿದೆ. ಅಣ್ಣಾಮಲೈ ಅರವಕುರಿಚಿಯಲ್ಲಿ ಡಿಎಂಕೆ ಅಭ್ಯರ್ಥಿ ಆರ್ ಎಳಂಗೊ ಅವರ ವಿರುದ್ಧ ಪೈಪೋಟಿಯಲ್ಲಿದ್ದಾರೆ.