ರೈತರ ಪ್ರತಿಭಟನೆ ಬೆಂಬಲಿಸಿ ಪಂಜಾಬ್ ಡಿಐಜಿ ರಾಜೀನಾಮೆ
ಚಂಡೀಗಢ, ಡಿಸೆಂಬರ್ 14: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಪಂಜಾಬ್ ನ ಡಿಐಜಿ (ಕಾರಾಗೃಹ) ಲಖಮಿಂದರ್ ಸಿಂಗ್ ಜಾಕರ್ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಶನಿವಾರ, ಡಿ.12ರಂದು ರಾಜ್ಯ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. "ರೈತರು ಅಷ್ಟು ದಿನಗಳಿಂದಲೂ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಅವರ ಸಮಸ್ಯೆಯನ್ನು ಯಾರೂ ಕೇಳುತ್ತಿಲ್ಲ. ನಿಯಮದ ಪ್ರಕಾರ ಕರ್ತವ್ಯದಲ್ಲಿದ್ದುಕೊಂಡು ನಾನು ಪ್ರತಿಭಟನೆಗೆ ಬೆಂಬಲ ನೀಡಲು ಸಾಧ್ಯವಿಲ್ಲ. ಹೀಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ" ಎಂದು ತಿಳಿಸಿದ್ದಾರೆ.
ಪಂಜಾಬ್, ಹರಿಯಾಣ ಮತ್ತು ಹಲವು ರಾಜ್ಯಗಳಿಂದ ಸಾವಿರಾರು ರೈತರು ದೆಹಲಿಯ ಗಡಿ ಭಾಗಗಳಲ್ಲಿ ಜಮಾಯಿಸಿದ್ದಾರೆ. ರೈತರ ಪ್ರತಿಭಟನೆಗೆ ಹಲವು ಕ್ಷೇತ್ರಗಳಿಂದ ಬೆಂಬಲವೂ ವ್ಯಕ್ತಗೊಂಡಿದೆ. ಈ ಮುನ್ನ ಪಂಜಾಬ್ ಮಾಜಿ ಸಿಎಂ ಪರ್ಕಾಶ್ ಸಿಂಗ್ ಬಾದಲ್ ಅವರು ರೈತರ ಬೆಂಬಲವಾಗಿ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದರು.

ಎಸ್ ಎಡಿ ಮುಖಂಡ ಸುಖದೇವ್ ಸಿಂಗ್ ಧಿಂಡ್ಸ್ ಕೂಡ ಪದ್ಮಭೂಷಣ ಪ್ರಶಸ್ತಿ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಪಂಜಾಬ್ ಪ್ರಸಿದ್ಧ ಕವಿ ಸುರ್ಜಿತ್ ಪತಾರ್ ಅವರೂ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ. ಪಂಜಾಬ್ ನ ಹಲವು ಆಟಗಾರರು ಕೂಡ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.












Click it and Unblock the Notifications