ಚಾಮರಾಜನಗರದ ಈ ಬುಡಕಟ್ಟು ಜನಾಂಗ ಹೊಸ ವರ್ಷವನ್ನು ಸ್ವಾಗತಿಸುವ ರೀತಿಯೇ ಚೆಂದ
ಚಾಮರಾಜನಗರ, ಜನವರಿ 01: ನೂತನ ವರ್ಷವನ್ನು ಹಲವರು ಹಲವು ರೀತಿಯಲ್ಲಿ ಸ್ವಾಗತಿಸುತ್ತಾರೆ. ಆದರೆ ಜಿಲ್ಲೆಯ ಹನೂರು ತಾಲೂಕಿನ ಅರಣ್ಯದೊಳಗಿನ ಕೋಳಿಕಟ್ಟೆ ಅಣೆಕಟ್ಟು ಬಳಿ ಬುಡಕಟ್ಟು ಜನಾಂಗದವರಾದ ಸೋಲಿಗರು ತಮ್ಮದೇ ವಿಶಿಷ್ಟ ಸಂಪ್ರದಾಯದಲ್ಲಿ ನೂತನ ವರ್ಷವನ್ನು ಬರಮಾಡಿಕೊಂಡರು.
ಇಲ್ಲಿನ ಮೂಲ ನಿವಾಸಿಗಳಾದ ಸೋಲಿಗರು ತಾವು ಬೆಳೆದ ಮೊದಲ ಬೆಳೆಗಳಾದ ರಾಗಿ, ಜೋಳ ಹಾಗೂ ಕುಂಬಳ ಕಾಯಿಯನ್ನು ತಾವು ತಿನ್ನದೇ, ಅದರಿಂದ ರೊಟ್ಟಿ ತಯಾರಿಸಿ, ಅದನ್ನು ವನದೇವತೆ ಹಾಗೂ ವನ್ಯಜೀವಿಗಳಿಗೆ ಅರ್ಪಿಸಿ ಪೂಜಿಸುವ ಮೂಲಕ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಿದರು.
ಪ್ರತಿ ವರ್ಷವೂ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಲ್ಲಿನ ಸೋಲಿಗ ಜನಾಂಗ ವನಪೂಜೆ ಮಾಡುವುದು, ಅಲ್ಲಿನ ವನ್ಯಜೀವಿಗಳಿಗೆ ಒಳ್ಳೆಯದಾಗಲಿ ಎನ್ನುವ ನಂಬಿಕೆಯಿಂದ. ಕಾಡಿದ್ದರೆ ನಾವು ಎಂಬ ಧ್ಯೇಯವನ್ನು ನಂಬಿಕೊಂಡಿರುವ ಬುಡಕಟ್ಟು ಜನಾಂಗ ಅದಕ್ಕಾಗಿ ಒಂದು ಸಂಪ್ರದಾಯವನ್ನೇ ರೂಢಿಸಿಕೊಂಡು ಬಂದಿದೆ.

ಕಾಡಿನೊಳಗಿರುವ ಪ್ರತಿಯೊಬ್ಬ ಸೋಲಿಗರೂ ತಾವು ಬೆಳೆದ ಮೊದಲ ಬೆಳೆಗಳಾದ ರಾಗಿ, ಜೋಳ ಹಾಗೂ ಕುಂಬಳಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಾರೆ. ನಂತರ ಎಲ್ಲರೂ ಸೇರಿ ರಾಗಿ ಜೋಳವನ್ನು ಕಲ್ಲಿನಿಂದ ಪುಡಿಮಾಡಿ, ಅದನ್ನು ಹಿಟ್ಟು ಕಲೆಸಿ ಕಾಡಿನೊಳಗೆ ಕೆಂಡದಿಂದ ಬೇಯಿಸಿ ತಯಾರಿಸಿದ ರೊಟ್ಟಿಯನ್ನು ಅಲ್ಲಿಯೇ ಇರುವ ಮಾದೇಶ್ವರನಿಗೆ, ಆನೆ, ಜಿಂಕೆ ಹಾಗೂ ಇನ್ನಿತರೆ ವನ್ಯಜೀವಿಗಳಿಗೆ ಭಕ್ತಿಯಿಂದ ಎಡೆಯಿಟ್ಟು ಪೂಜಿಸಿ, ಕಾಡಿಗೆ ಹಾಗೂ ವನ್ಯಜೀವಿಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ. ನಂತರ ಎಲ್ಲ ಸೋಲಿಗರು ರೊಟ್ಟಿ ತಿನ್ನುತ್ತಾರೆ.
ವನ ದೇವತೆ ಹಾಗೂ ಕಾಡಿನ ಪ್ರಾಣಿಗಳಿಗೆ ಸಮರ್ಪಿಸಿದ ನಂತರ ಜನಾಂಗದವರೆಲ್ಲರೂ ಸೇರಿ ಕಾಡಿನೊಳಗೆ ಕೆಂಡದಿಂದ ಬೇಯಿಸಿ ತಯಾರಿಸುವ ಸಾವಿರಾರು ರೊಟ್ಟಿಯನ್ನು ಸೋಲಿಗರೆಲ್ಲರೂ ಒಂದೆಡೆ ಕುಳಿತು ತಿಂದು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಇದು ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ, ಅದರಂತೆ ಈ ಬಾರಿಯೂ ಆಚರಿಸಿ ಖುಷಿಪಟ್ಟಿದ್ದಾರೆ.












Click it and Unblock the Notifications