ಚಾಮರಾಜನಗರ: ಹುಟ್ಟುಹಬ್ಬದ ದಿನವೇ ಉಪನ್ಯಾಸಕಿ ಆತ್ಮಹತ್ಯೆಗೆ ಶರಣು
ಚಾಮರಾಜನಗರ, ಆಗಸ್ಟ್ 9: ಮಾನಸಿಕ ಒತ್ತಡದಿಂದಾಗಿ ನಗರದ ಖಾಸಗಿ ಕಾಲೇಜಿನ ಉಪನ್ಯಾಸಕಿಯೊಬ್ಬರು ಅಸುನೀಗಿದ್ದು ನೂರಾರು ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಎಲ್ಲದಕ್ಕಿಂತ ಹೆಚ್ಚಾಗಿ ಪಾಲಕರು ಮರುಗಿದ್ದಾರೆ.
ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ (26) ಎಂಬ ಉಪನ್ಯಾಸಕಿ ತನ್ನ ಹುಟ್ಟುಹಬ್ಬದ ದಿನವೇ ತನ್ನ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ. ಚಂದನಾ ಚಾಮರಾಜನಗರದ ಜೆಎಸ್ಎಸ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೆಎಸ್ಎಸ್ ಕಾಲೇಜಿನ ಹಾಸ್ಟೆಲ್ನಲ್ಲೇ ವಾಸ್ತವ್ಯ ಹೂಡಿದ್ದರು. ಈಕೆ ಎಲ್ಲರ ಜೊತೆಯಲ್ಲೂ ಉತ್ತಮ ಭಾಂದವ್ಯ ಹೊಂದಿದ್ದರು.
ಮಂಗಳವಾರ ಆಕೆಯ ಹುಟ್ಟುಹಬ್ಬ ಇತ್ತು. ಹೀಗಾಗಿ ಆಕೆಯ ಸ್ನೇಹಿತರು, ವಿದ್ಯಾರ್ಥಿಗಳು ಶುಭಾಶಯ ಕೋರಿದ್ದರು. ಆದರೆ ತಮ್ಮ ಜನ್ಮದಿನದಂದೇ ನೇಣಿಗೆ ಶರಣಾಗಿದ್ದಾರೆ. ಕೊಠಡಿಯಲ್ಲಿದ್ದ ಜೊತೆಗಿದ್ದ ಸ್ನೇಹಿತೆಯರು ಹೊರಹೋದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್ ನಲ್ಲಿ ಮಾನಸಿಕ ಒತ್ತಡ ಬಯಲು; ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿರುವ ಚಂದನಾ "ಯಾಕೆ ಯಾರೂ ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ" ಎಂದು ಪ್ರಾರಂಭಿಸಿದ್ದು, ತನ್ನ ಮನದಾಳದ ನೋವಿಗೆ ಅಕ್ಷರ ರೂಪ ನೀಡಿ ಕೊನೆಗೆ ನನ್ನ ಸಾವಿಗೆ ಯಾರು ಕಾರಣರಲ್ಲ. "ನನ್ನ ಸಾವಿಗೆ ನಾನೇ ಕಾರಣ" ಎಂದು ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನ್ನ ಇಬ್ಬರು ಅಕ್ಕಂದಿರಿಗೆ ಕ್ಷಮೆ ಕೇಳಿರುವ ಚಂದನಾ ತಂಗಿ ಉದ್ದೇಶಿಸಿ ಯಾವುದೇ ಕಾರಣಕ್ಕೂ ಉಪನ್ಯಾಸಕಿ ಹುದ್ದೆಗೆ ಬರಬೇಡ ಎಂದು ತನ್ನ ಕೊನೆಯ ಸಲಹೆಯನ್ನು ಕೊಟ್ಟಿದ್ದಾರೆ.
ತಂದೆ ಜೊತೆ ಕೊನೆಯ ಬಾರಿ ಪಾನಿಪೂರಿ; ಚಂದನಾಳ ಹುಟ್ಟುಹಬ್ಬವಾಗಿದ್ದು ಆಕೆಯ ತಂದೆ ಕೇಕ್ ಕಟ್ ಮಾಡಿಸಲು ಸಕಲ ಸಿದ್ಧತೆಯನ್ನು ನಡೆಸಿದ್ದರು. ಸೋಮವಾರ ಸಂಜೆ ಅಷ್ಟೇ ಮಗಳೊಟ್ಟಿಗೆ ಪಾನಿಪೂರಿ ಸೇವಿಸಿ ಊರಿಗೆ ಬರುವಂತೆ ಹೇಳಿದ್ದರಂತೆ, ಬೆಳಗ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಅವರ ತಂದೆ ಹಾಸ್ಟೆಲ್ನ ಸೆಕ್ಯೂರಿಟಿಗೆ ಕರೆ ಮಾಡಿ ಚಂದನಾ ಫೋನ್ ಎತ್ತದೇ ಇರುವುದನ್ನು ತಿಳಿಸಿದ್ದಾರೆ. ಈ ವೇಳೆ ಚಂದನಾ ಕೊಠಡಿ ಬಳಿ ಹೋದ ಸೆಕ್ಯೂರಿಟಿಗೆ ಚಂದನಾ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.

ಕೂಡಲೇ ಆತ ಹಾಸ್ಟೆಲ್ನ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರು ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777.












Click it and Unblock the Notifications