ಚಾಮರಾಜನಗರದಲ್ಲಿ ಡಯಾಲಿಸಿಟ್ ಸಿಬ್ಬಂದಿ ಮುಷ್ಕರ: ರೋಗಿಗಳ ಪರದಾಟ!
ಚಾಮರಾಜನಗರ, ಜೂ 23: ವೇತನ ಹಾಗೂ ವಿವಿಧ ಸೌಲಭ್ಯಗಳಿಗಾಗಿ ಆಗ್ರಹಿಸಿ ಏಜೆನ್ಸಿ ವಿರುದ್ಧ ಇಂದು ಡಯಾಲಿಸಿಟ್ ಸಿಬ್ಬಂದಿ ಮುಷ್ಕರ ನಡೆಸಿದ್ದರ ಪರಿಣಾಮ 27ಕ್ಕೂ ಹೆಚ್ಚು ಮಂದಿ ಡಯಾಲಿಸಿಸ್ ಮಾಡಿಸಿಕೊಳ್ಳಲಾಗದೇ ಪರದಾಡಿದ ಘಟನೆ ನಡೆಯಿತು.
ಚಾಮರಾಜನಗರ ಜಿಲ್ಲಾಸ್ಪತ್ರೆ ಹಳೇ ಕಟ್ಟಡದ ಮುಂಭಾಗ ಡಯಾಲಿಸಿಸ್ ಮಾಡಿಸಿಕೊಳ್ಳಲು ಮಧ್ಯಾಹ್ನದವರೆಗೂ ಕಾದು 27 ಕ್ಕೂ ಹೆಚ್ಚು ಮಂದಿ ರೋಗಿಗಳು ಪರದಾಡಿದರು. ಕೆಲವರು ಆಸ್ಪತ್ರೆ ಆವರಣದಲ್ಲಿ ನಿತ್ರಾಣರಾಗಿ ಮಲಗಿಕೊಂಡಿದ್ದರು. 13 ಮಂದಿ ಜಿಲ್ಲಾಡಳಿತ ಭವನ ಆವರಣದಲ್ಲಿ ಧರಣಿ ಕುಳಿತಿದ್ದಾರೆ. ಜಿಲ್ಲಾಡಳಿತ, ಸಂಜೀವಿನಿ ಏಜೆನ್ಸಿ ವಿರುದ್ಧ ಡಯಾಲಿಸಿಸ್ ರೋಗಿಗಳ ನ್ಯಾಯಬೇಕು ಎಂದು ಪಟ್ಟು ಹಿಡಿದು ಡಯಾಲಿಸಿಸ್ ರೋಗಿಗಳು ಆರೋಗ್ಯ ಇಲಾಖೆ, ಆರೋಗ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು ಪ್ರದೇಶ ವೀಕ್ಷಿಸಿದ ಚಾಮರಾಜನಗರ ಡಿಸಿ
ಸಿಬ್ಬಂದಿ ವಿರುದ್ಧ ರೋಗಿಗಳ ಆಕ್ರೋಶ
ಇನ್ನು, ಡಯಾಲಿಸಿಸ್ ರೋಗಿಗಳು ಈ ಹಿಂದೆ ಇದ್ದ ಬಿಆರ್ಎಸ್ ಏಜೆನ್ಸಿ ಸೇವೆ ಉತ್ತಮವಾಗಿತ್ತು, ಈಗಿನ ಸಂಜೀವಿನಿ ಏಜೆನ್ಸಿಯವರು ದುಡ್ಡು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ರೋಗಿಗಳು ಕಿಡಿಕಾರಿದ್ದಾರೆ. 4 ದಿನಗಳಿಗೊಮ್ಮೆ ತಾವು ಡಯಾಲಿಸಿಸ್ ಮಾಡಿಸಿಕೊಳ್ಳಬೇಕಿದ್ದು ಸಿಬ್ಬಂದಿ ಈ ರೀತಿ ಮುಷ್ಕರ ಹೂಡಿ ಪ್ರಾಣದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಡಯಾಲಿಸಿಸ್ನ್ನು ಆರು ಮಾತ್ರ ಬಳಸುವುದು, ಪ್ರತಿದಿನವೂ ಬೆಡ್ ಶೀಟ್ ಬದಲಿಸುವುದು, ಸರಿಯಾದ ಕ್ರಮದಲ್ಲಿ ಎಫಾರಿನ್ ಬಳಸುವುದು, ಕಬ್ಬಿನಾಂಶ ಮತ್ತು ರಕ್ತ ಹೆಚ್ಚುವ ಇಂಜೆಕ್ಷನ್ ಗಳನ್ನು ನೀಡ ಬೇಕು.ಆದರೆ, ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ನ್ನು 10-11 ಬಾರಿ ಮಾಡಲಾಗುತ್ತದೆ, ಸ್ವಂತ ಹಣದಿಂದ ಇಂಜೆಕ್ಷನ್ ತೆಗೆದುಕೊಂಡು ಹೋಗಬೇಕಾಗಿದೆ ಇಷ್ಟೆಲ್ಲಾ ಮಾಡಿದರೂ ಸಿಬ್ಬಂದಿ ಮುಷ್ಕರದಿಂದ ಪರದಾಡುತ್ತಿದ್ದೇವೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಮಾಧ್ಯಮ ದೂರವಿಟ್ಟು ಕಾಡು ಸುತ್ತಿದ ಅರಣ್ಯ ಸಚಿವ ಉಮೇಶ್ ಕತ್ತಿ
ಡಿಎಚ್ಓ ಮಾತಿಗೆ ಬಗ್ಗದ ರೋಗಿಗಳು
ಈ ಸಂಬಂಧ ಪ್ರತಿಭಟನಾಕಾರರ ಒಟ್ಟಿಗೆ ಡಿಎಚ್ಒ ಡಾ.ವಿಶ್ವೇಶ್ವರಯ್ಯ ಮಾತನಾಡಿ, ಸಂಜೀವಿನಿ ಏಜೆನ್ಸಿ ವಿರುದ್ಧ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಿಬ್ಬಂದಿ ಮೈಸೂರಿಗೆ ತೆರಳಿದ್ದಾರೆ, ಮಧ್ಯಾಹ್ನ 3-4 ರ ವೇಳೆಗೆ ಬರಲಿದ್ದು ಡಯಾಲಿಸಿಸ್ ಮಾಡಲಿದ್ದಾರೆ, ಇಲ್ಲವೇ ನಾಳೆಯಾದರೂ ಮಾಡುತ್ತಾರೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಡಿಎಚ್ಓ ಮಾತಿಗೆ ಬಗ್ಗದ ರೋಗಿಗಳು ತಮಗೇ ಡಯಾಲಿಸಿಸ್ ಮಾಡುವ ತನಕ ತಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ, ಕೆಲವರು ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ಬೇಕೇ ಬೇಕು ನ್ಯಾಯ ಬೇಕು ಎಂದು ಪಟ್ಟು ಹಿಡಿದು ಡಯಾಲಿಸಿಸ್ ರೋಗಿಗಳು ಆರೋಗ್ಯ ಇಲಾಖೆ, ಆರೋಗ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡ, ವಿದ್ಯುತ್ ಹಾಗೂ ನೀರನ್ನು ಸರ್ಕಾರ ಒದಗಿಸಿದೆ. ಡಯಾಲಿಸಿಸ್ ಅಗತ್ಯವಿರುವ ಉಪಕರಣ, ಔಷಧ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಗುತ್ತಿಗೆ ಪಡೆದ ಸಂಸ್ಥೆಯ ಜವಾಬ್ದಾರಿ. ಇಲ್ಲವೇ ಯಂತ್ರೋಪಕರಣಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಸೇವೆ ಒದಗಿಸಬೇಕೆಂದು ಆಗ್ರಹಿಸಿದರು.
ಉತ್ತಮ ಚಿಕಿತ್ಸೆ ಕ್ರಮಕ್ಕೆ ಸರ್ಕಾರ ಮುಂದಾಗಬೇಕು
ಡಯಾಲಿಸಿಸ್ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲು ಬಂದಿದ್ದೇವೆ. ಆದರೆ ವೇತನ ಹಾಗೂ ವಿವಿಧ ಸೌಲಭ್ಯಗಳಿಗಾಗಿ ಆಗ್ರಹಿಸಿ ಏಜೆನ್ಸಿ ವಿರುದ್ಧ ಇಂದು ಡಯಾಲಿಸಿಸ್ ಸಿಬ್ಬಂದಿ ಮುಷ್ಕರ ಪರಿಣಾಮ, ಸಿಬ್ಬಂದಿಗಳು ಸರಿಯಾದ ವೇತನ, ಸೌಲಭ್ಯ ನೀಡುತ್ತಿಲ್ಲ ಎಂದು ಆಸ್ಪತ್ರೆ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ರೋಗಿಗಳು ಸಹ ಯಾವುದೇ ರೀತಿಯ ಉತ್ತಮವಾದ ಚಿಕಿತ್ಸೆ ಸಿಗುತ್ತಿಲ್ಲ. ಜೊತೆಗೆ ಮೊದಲು ಬಿಆರ್ ಎಸ್ ಕಂಪನಿ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಸಂಜೀವಿನಿ ಕಂಪನಿಯವರು ವಹಿಸಿಕೊಂಡಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಗುಣಮಟ್ಟದ ಡಯಾಲಿಸಿಸ್, ಹಾಸಿಗೆಗಳನ್ನು ಬದಲಾಗಿಸದೇ ರೋಗಿಗಳನ್ನು ಹಾಗೆ ಮಲಗಿಸುತ್ತಿದ್ದಾರೆ. ಉತ್ತಮವಾದ ಚಿಕಿತ್ಸೆ ಸರ್ಕಾರದಿಂದ, ಜಿಲ್ಲಾಡಳಿತ ವತಿಯಿಂದ ಒದಗಿಸ ಬೇಕು, ನಾಲ್ಕು ದಿನದಿಂದ ಮಾಡಿಸದ ಕಾರಣ ರೋಗಿ ಪರದಾಡುವಂತಾಗಿದೆ ಎಂದು ಸಿದ್ದಯ್ಯನಪುರ ಡಯಾಲಿಸಿಸ್ ರೋಗಿ ನಾಗರಾಜು ತಮ್ಮ ಆಳಲು ತೋಡಿಕೊಂಡರು.
ಸಮಸ್ಯೆ ಬಗೆಹರಿಸಲು ರೋಗಿಗಳ ಒತ್ತಾಯ
ಡಯಾಲಿಸಿಸ್ ಮಾಡುವಾಗ ರಕ್ತದೊತ್ತಡ ಏರುಪೇರು ಆಗುವುದು ಸಾಮಾನ್ಯ, ಇಂತಹ ಸಂದರ್ಭದಲ್ಲಿ ಹೃದಯ ಸಂಬಂಧಿ ಕಾಯಿಲೆ ಉಲ್ಪಣವಾಗುವ ಸಾಧ್ಯತೆ ಹೆಚ್ಚು. ತುರ್ತು ಚಿಕಿತ್ಸೆಗೆ ಡಿಫ್ರಿಜಿಲೇಟರ್ ಯಂತ್ರ ನೆರವಿಗೆ ಬರುತ್ತದೆ. ಆದರೆ ಬಹುಪಾಲು ಡಯಾಲಿಸಿಸ್ ಕೇಂದ್ರಗಳಲ್ಲಿ ಈ ಯಂತ್ರವಿಲ್ಲ. ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಸರ್ಕಾರ ನಿಯಮಿತವಾಗಿ ಹಣ ಪಾವತಿಸುತ್ತಿಲ್ಲ ಎಂಬ ಆರೋಪಗಳಿವೆ. ಇದರಿಂದ ಖಾಸಗಿ ಏಜೆನ್ಸಿಗಳು ಒಂದೋಂದೇ ಸೇವೆಯನ್ನು ಮೊಟಕುಗೊಳಿಸುತ್ತಿವೆ. ಸರ್ಕಾರದ ಮೇಲೆ ಒತ್ತಡ ಹೇರುವಂತೆ ರೋಗಿಗಳಿಗೆ ಸೂಚಿಸುತ್ತಿವೆ. ಬಾಹ್ಯ ಒತ್ತಡ ಸೃಷ್ಟಿಯಾದಾಗ ಏಜೆನ್ಸಿ ಬದಲಿಸುವುದಾಗಿ ಭರವಸೆ ನೀಡುವ ಆರೋಗ್ಯ ಇಲಾಖೆ ಮಾತಿಗೆ ತಪ್ಪುತ್ತಿದೆ. ಸರ್ಕಾರ ಹಾಗೂ ಏಜೆನ್ಸಿಗಳ ನಡುವಿನ ಜಟಾಪಟಿಯಲ್ಲಿ ಹೈರಾಣಾಗುತ್ತಿದ್ದಾರೆ.
ರೋಗಿಗಳ ಸಂಖ್ಯೆ ಹೆಚ್ಚಾದರೆ ಮೂರು ಪಾಳಿಯಲ್ಲಿ ಡಯಾಲಿಸಿಸ್ ಕೇಂದ್ರ ಕಾರ್ಯನಿರ್ವಹಿಸಬೇಕು, ಮೂತ್ರಪಿಂಡ ವೈದ್ಯರು, ಪ್ರತಿ ಮೂರು ಯಂತ್ರಕ್ಕೊಬ್ಬ ಸಿಬ್ಬಂದಿ ಇರಬೇಕು. ಆದರೆ ಬಹುಪಾಲು ಡಯಾಲಿಸಿಸ್ ಕೇಂದ್ರಗಳು ಈ ಕೊರತೆ ಎದುರಿಸುತ್ತಿವೆ. ಆದ್ದರಿಂದ ದಯವಿಟ್ಟು ಈ ಸಮಸ್ಯೆಗಳನ್ನು ಬಗೆಹರಿಸಲು ರೋಗಿಗಳ ಒತ್ತಾಯವಾಗಿದೆ.