ಹುಲಿ ಸಂರಕ್ಷಿತ ಪ್ರದೇಶ ಮಾಡುವ ಯೋಜನೆ ತೀರ್ಮಾನ ಸಿಎಂಗೆ ಬಿಟ್ಟದ್ದು: ಸಚಿವ ಉಮೇಶ್ ಕತ್ತಿ
ಚಾಮರಾಜನಗರ, ಆಗಸ್ಟ್ 07: ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಟೈಗರ್ ರಿಸರ್ವ್ ಮಾಡುವುದು ಸಿಎಂ ತೀರ್ಮಾನ, ಅವರ ನಿಲುವೇ ಅಂತಿಮ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಚಾಮರಾಜನಗರದಲ್ಲಿ ಹೇಳಿದರು.
ಹುಲಿ ಸಂರಕ್ಷಿತ ಪ್ರದೇಶಕ್ಕೆ ಪಟ್ಟು: ಹನೂರು ತಾಲೂಕಿನ ಮೇಕೆದಾಟು ಪ್ರದೇಶಕ್ಕೆ ಭೇಟಿ ಕೊಟ್ಟು ಮಾತನಾಡಿದ ಅವರು, ಮಲೆಮಹದೇಶ್ವರ ವನ್ಯಜೀವಿಧಾಮ ಅನುಮೋದನೆಗೊಂಡು ರಾಜ್ಯ ಸರ್ಕಾರಕ್ಕೆ ಬಂದಿದೆ. ಸಚಿವ ಸೋಮಣ್ಣ ಬೇಡ ಎನ್ನುವುದು, ನಾನು ಬೇಕು ಎನ್ನುವುದು ಏನು ಆಗಲ್ಲ. ಸಂಪುಟ ಸಭೆಯಲ್ಲಿ ಸಿಎಂ ತೀರ್ಮಾನವೇ ಅಂತಿಮ ಎಂದು ಹೇಳಿದರು. ಅರಣ್ಯ ಸಚಿವನಾಗಿ ನನ್ನ ಅಭಿಪ್ರಾಯ ಹುಲಿ ಸಂರಕ್ಷಿತ ಪ್ರದೇಶ ಆಗಬೇಕು. ಮಲೆಮಹದೇಶ್ವರನ ವಾಹನ ಹುಲಿ ಆದುದ್ದರಿಂದ ಇದು ಹುಲಿ ಸಂರಕ್ಷಿತ ಪ್ರದೇಶ ಆಗಬೇಕು. ಆಗ ಕಾಡಿನ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಶೀಘ್ರವೇ ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುಡಿಯುವ ನೀರಿಗೆ ಸಂಬಂಧಿಸಿದ್ದು. ಆ ಯೋಜನೆಯನ್ನು ಮಾಡೇ ಮಾಡುತ್ತೇವೆ. ಸರ್ಕಾರ ಈ ಬಗ್ಗೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ತಮಿಳುನಾಡಿಗೂ ವಿನಂತಿ ಮಾಡುತ್ತಿದ್ದೇವೆ. ಮೇಕೆದಾಟು ಯೋಜನೆ ಆದರೆ ಬೆಂಗಳೂರು, ಚಾಮರಾಜನಗರಕ್ಕೆ ನೆರವಾಗಲಿದೆ ಎಂದು ಭರವಸೆ ನೀಡಿದರು.
ಹೊಗೆನಕಲ್ ಜಲಪಾತ ಅಭಿವೃದ್ಧಿ: ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾದ ಹೊಗೆನಕಲ್ ಜಲಪಾತವನ್ನು ಅಭಿವೃದ್ಧಿ ಮಾಡಲಾಗುವುದು. ವೀಕ್ಷಣಾ ಗೋಪುರ ಹಾಗೂ ಸೇತುವೆ ನಿರಂತರ ಮಳೆಯಿಂದ ಹಾನಿಯಾಗಿದ್ದು, ಶೀಘ್ರ ಕಾಮಗಾರಿ ಕೈಗೊಂಡು ಸರಿಪಡಿಸಲಾಗುವುದು ಎಂದರು. ಕಾಡೊಳಗಿನ ಗ್ರಾಮ ಚಂಗಡಿ ಜನರಿಗೆ ಪುನರ್ವಸತಿ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಇನ್ನೆರೆಡು ತಿಂಗಳುಗಳಲ್ಲಿ ಅಂತಿಮವಾಗಲಿದೆ ಎಂದರು.