Cauvery Dispute: ಡಿ.ಕೆ.ಶಿವಕುಮಾರ್ಗೆ ಗ್ರಾನೈಟ್, ಲೂಟಿ ಬಗ್ಗೆ ಹೆಚ್ಚು ಜ್ಞಾನ ಇದೆ: BSP ರಾಜ್ಯಾಧ್ಯಕ್ಷ ಹೀಗೆ ಹೇಳಿದ್ದೇಕೆ?
ಚಾಮರಾಜನಗರ, ಸೆಪ್ಟೆಂಬರ್, 21: ಡಿ.ಕೆ.ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಖಾತೆ ಕೊಡಬಾರದಿತ್ತು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಗ್ರಾನೈಟ್, ಲೂಟಿ, ಮರ್ಡರ್ಗಳ ಬಗ್ಗೆ ಹೆಚ್ಚು ಜ್ಞಾನವಿದೆ. ನೀರಿನ ಸಂಬಂಧದ ಬಗ್ಗೆ ಅವರಿಗೆ ಜ್ಞಾನವಿಲ್ಲ. ನೀರು ಬಿಡಬೇಕೆಂದು ಸಲಹಾ ಮಂಡಲಿ ನಿರ್ದೇಶನ ನೀಡಿದಾಗ ನೀರು ಬಿಡದೇ ಸರ್ವಪಕ್ಷ ಸಭೆ ಕರೆದು ಒಮ್ಮತದ ತೀರ್ಮಾನ ತೆಗೆದುಕೊಂಡು ನೀರು ಬಿಡಬಾರದಾಗಿತ್ತು. ಆದರೆ, ಮೊದಲೆಲ್ಲಾ ನೀರು ಹರಿಸಿ ಬಳಿಕ ಸುಪ್ರೀಂ ಕೋರ್ಟ್ ಕದ ತಟ್ಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಿದೇ ಇರುವುದರಿಂದ ಪ್ರತಿಬಾರಿಯೂ ಹಿನ್ನಡೆ ಉಂಟಾಗಿದೆ. ಇನ್ನು, ರಾಜ್ಯದಿಂದ ಆಯ್ಕೆಯಾಗಿರುವ ಎಂಪಿಗಳು ಕೂಡ ಪ್ರಧಾನಿ ಬಳಿ ಮಾತನಾಡದೇ ಇರುವುದರಿಂದ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನೀತಿಗಳಿಂದ ಕಾವೇರಿ ಸಂಕಷ್ಟ ಉಂಟಾಗಿದೆ. ಬಿಎಸ್ಪಿ ಯಾವಾಗಲೂ ರೈತರ ಪರ, ನಾಡಿನ ಪರ ಧ್ವನಿ ಎತ್ತಲಿದೆ ಎಂದರು.
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂಬ ಪ್ರಾಧಿಕಾರವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಖಂಡಿಸಿ ಇಂದು ಚಾಮರಾಜನಗರದಲ್ಲಿ ಕಬ್ಬು ಬೆಳೆಗಾರರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು.
ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಇಂದು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಸತ್ಯಮಂಗಲಂ ರಸ್ತೆಯನ್ನು ತಡೆದು ಟೈರ್ ಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿದರು. ಈ ವೇಳೆ, ರೈತ ಮುಖಂಡ ಭಾಗ್ಯರಾಜ್ ಮಾತನಾಡಿ, ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಬಾರಿ ಬೊಂಬಾಟ್ ಪಾದಯಾತ್ರೆ ಮಾಡಿದ್ದರು. ಊಟ , ಬಾಡೂಟ ಮಾಡ್ಸ್ಕೊಂಡು ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಈಗ ಕಾವೇರಿ ಉಳಿವಿಗಾಗಿ ಪಾದಯಾತ್ರೆ ಮಾಡಿ ತಾಕತ್ತು ತೋರಿಸಿ ಎಂದು ಆಕ್ರೋಶ ಹೊರಹಾಕಿದರು.

ಪಾದಯಾತ್ರೆ ಮಾಡಿ ನಾವು ಕರ್ನಾಟಕದಿಂದ ನೀರು ಬಿಡಲ್ಲ ಅಂತಾ ತಾಖತ್ ತೋರಿಸಿ, ನಿಮ್ಮ ಬಿಟ್ಟಿ ಭಾಗ್ಯ ನಮಗೆ ಬೇಕಿಲ್ಲ. ಕುಡಿಯುವ ನೀರಿಗೆ ಯಾರಪ್ಪನ ಮನೆ ನೀರು ಕೊಡ್ತೀರಾ.? ಕರ್ನಾಟಕದಲ್ಲಿರುವ ಎಲ್ಲಾ ನೀರು ತಮಿಳುನಾಡು ಸೇರಿದಮೇಲೆ ಎಲ್ಲಿಂದ ತಗೊಂಡು ಬರ್ತೀರಾ ಡಿ.ಕೆ.ಶಿವಕುಮಾರ್ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಈ ತಕ್ಷಣ ನೀರಾವರಿ ಸಚಿವರು ರಾಜೀನಾಮೆ ನೀಡಬೇಕು, ಸಮರ್ಥ ವ್ಯಕ್ತಿಯನ್ನು ಆ ಖಾತೆಗೆ ನೇಮಕ ಮಾಡಬೇಕು. ತಮಿಳುನಾಡಿನ ಗುಲಾಮಗಿರಿ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಆಡಳಿತ ಮಾಡುತ್ತಿದೆ. ಇಲ್ಲಿ ಆಡಳಿತ ಮಾಡುವವರು ತಮಿಳುನಾಡಿನ ಗುಲಾಮರು, ತಮಿಳುನಾಡಿನ ದತ್ತು ಪುತ್ರರು, ಆದ್ದರಿಂದ ನಮ್ಮ ನೀರು ತಮಿಳುನಾಡು ಸೇರುತ್ತಿದೆ ಎಂದು ಕಿಡಿಕಾರಿದರು.
ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಂ
ರಾಷ್ಟ್ರೀಯ ಹೆದ್ದಾರಿಯನ್ನು ತಡೆದಿದ್ದರಿಂದ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಂ ಉಂಟಾಗಿತ್ತು. ಸರಕು ತುಂಬಿದ ವಾಹನಗಳು, ಬೈಕ್ ಸವಾರರು ಒಂದು ತಾಸು ಸಂಚರಿಸಲಾಗದೇ ಪರದಾಡಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತ ಪೊಲೀಸರು ರೈತ ಮುಖಂಡರನ್ನು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.












Click it and Unblock the Notifications