ಜಿಎಸ್ ಟಿ ಜಾರಿಗೆ ಒಂದು ವರ್ಷ, ಆಡಿಟರ್ ಹೇಳಿಕೊಂಡ ಅನುಭವ
ಬೆಂಗಳೂರು, ಜೂನ್ 30: "ಈಗ ತೆರಿಗೆ ವಿಧಾನವೇ ತೀರಾ ಅನುಕೂಲ ಆಗಿದೆ. ಟೀಕೆ ಮಾಡಬೇಕು ಅನ್ನೋ ಕಾರಣಕ್ಕೆ ಬೈಯ್ಕೊಂಡು ಓಡಾಡೋದು ಬೇರೆ. ಆದರೆ ಒಳ್ಳೆ ಕೆಲಸ ಆದಾಗ ಅದನ್ನು ಮೆಚ್ಚಿಕೊಳ್ಳಬಹುದು ಅಲ್ಲವಾ?" ಎಂದರು ಲೆಕ್ಕಪರಿಶೋಧಕರಾದ ತುಮಕೂರು ಮೂಲದ ಎಸ್.ವಿಶ್ವನಾಥ್.
ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಯಾಗಿ ಒಂದು ವರ್ಷ ಆಯಿತು. ಈ ಅವಧಿಯಲ್ಲಿ ಆದ ಅನುಭವಗಳ ಬಗ್ಗೆ ಆಡಿಟರ್ ವಿಶ್ವನಾಥ್ ಅವರ ಬಳಿ ತಿಳಿದುಕೊಳ್ಳುವ ಸಲುವಾಗಿ ಒನ್ಇಂಡಿಯಾ ಕನ್ನಡ ಮಾತನಾಡಿಸಿತು.
"ಈ ಹಿಂದೆ ಮೂವತ್ತೈದು ತೆರಿಗೆ ಇರುತ್ತಿದ್ದವು. ಎಲ್ಲಕ್ಕೂ ಪ್ರತ್ಯೇಕ ಅರ್ಜಿ, ಒಂದೊಂದು ಕಚೇರಿ, ಒಂದೊಂದು ರೀತಿಯ ಕೆಲಸ. ಒಟ್ಟಿನಲ್ಲಿ ರೇಜಿಗೆ ಬಂದು ಹೋಗುತ್ತಿತ್ತು. ಈಗ ಏನೆಂದರೆ ಅವೆಲ್ಲವನ್ನೂ ಒಂದರಲ್ಲೇ ಸೇರಿಸಿ, ಜಿಎಸ್ ಟಿ ಅಂತ ಮಾಡಿ ಅನುಕೂಲವಾಗಿದೆ" ಎಂದರು ವಿಶ್ವನಾಥ್.

ಆದರೆ, ಭಾರತದಲ್ಲಿ ಈಗ ಜಾರಿಗೆ ತಂದಿರುವ ಸ್ಲ್ಯಾಬ್ ವಿಪರೀತ ಹೆಚ್ಚಾಯಿತು, ಅಲ್ಲವೆ? ಸಿಂಗಾಪೂರ್, ಮಲೇಷಿಯಾ ಅಲ್ಲೆಲ್ಲ ಕಡಿಮೆ ಇದೆಯಂತಲ್ಲಾ ಎಂಬ ಪ್ರಶ್ನೆ ಮುಂದಿಡಲಾಯಿತು.
ಅಲ್ಲೆಲ್ಲ ಜನಸಂಖ್ಯೆ ಕಡಿಮೆ ಇದ್ದರೂ ತೆರಿಗೆ ಪಾವತಿಸುವವರ ಪ್ರಮಾಣ ಹೆಚ್ಚಿದೆ. ಜಿಎಸ್ ಟಿ ಜಾರಿಯಾದ ನಂತರ ಭಾರತದಲ್ಲಿ ಪಾವತಿದಾರರ ಸಂಖ್ಯೆಯಲ್ಲಿ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಅನ್ನೋದನ್ನೂ ಗಮನಿಸಿ. ಜಿಎಸ್ ಟಿ ಅನ್ನೋದು ಪರೋಕ್ಷ ತೆರಿಗೆ. ಅದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಂಚಿಕೊಳ್ಳುತ್ತವೆ. ಭಾರತದಂಥ ದೊಡ್ಡ ದೇಶದಲ್ಲಿ ಈ ಪ್ರಮಾಣದ ತೆರಿಗೆ ಅನಿವಾರ್ಯ ಎಂದರು.
ಪ್ರತಿಯೊಂದು ವಸ್ತುವಿಗೆ ತೆರಿಗೆ ಹಾಕಿ, ಮತ್ತೆ ಇಷ್ಟು ಪ್ರಮಾಣ ಅನಿವಾರ್ಯ ಅನ್ನೋ ಮಾತು ಒಪ್ಪಲು ಸಾಧ್ಯವೇ ಎಂಬ ಪ್ರಶ್ನೆ ಇಡಲಾಯಿತು.
ಆದಾಯ ತೆರಿಗೆ ಎಂಬುದು ಕೇಂದ್ರ ಸರಕಾರಕ್ಕೆ ನೇರವಾಗಿ ತಲುಪುವ ಆದಾಯ. ನಮ್ಮ ದೇಶದಲ್ಲಿ ಆದಾಯ ತೆರಿಗೆ ಪಾವತಿಸುವವರ ಪ್ರಮಾಣ ಎಷ್ಟಿದೆ? ಈಗಿನ ಪ್ರಮಾಣ ಗಣನೀಯವಾಗಿ ಏರಿಕೆಯಾದರೆ, ಆದಾಯ ತೆರಿಗೆ ವಿಧಿಸುವುದರಲ್ಲೂ ಇಳಿಕೆ ಮಾಡಬಹುದು. ಆದರೆ ಅದು ಸಾಧ್ಯವಾಗಬೇಕಷ್ಟೆ ಎಂದು ಹೇಳಿದರು.
ಜಿಎಸ್ ಟಿಯನ್ನು ಕಾಂಗ್ರೆಸ್ ಸರಕಾರವೇ ಜಾರಿ ಮಾಡಬೇಕಿತ್ತು. ಆದರೆ ಅದರ ಜಾರಿಯಿಂದ ಹಣದುಬ್ಬರ ಏರಿಕೆ ಆಗುತ್ತದೆ. ಜತೆಗೆ ಜಿಡಿಪಿಗೆ ಹಿನ್ನಡೆ ಆಗುತ್ತದೆ ಎಂಬ ಅಳುಕು ಆ ಪಕ್ಷಕ್ಕೆ ಇತ್ತು. ಇದರ ಹೊರತಾದ ಕೆಲವು ಆತಂಕಗಳಿದ್ದ ಕಾರಣಕ್ಕೆ ಧೈರ್ಯವಾಗಿ ಜಾರಿ ಮಾಡಲು ಮುಂದಾಗಲಿಲ್ಲ.
"ಈಗ ದೇಶದ ಅಭಿವೃದ್ಧಿ ಸ್ಥಿತಿಯನ್ನು ಯಾವುದರ ಆಧಾರದಲ್ಲಿ ಅಳೆಯುತ್ತೀರಿ? ಎಕನಾಮಿಕ್ ಇಂಡಿಕೇಟರ್ ಅಂತ ಯಾವುದನ್ನು ಕರೆಯುತ್ತೇವೆ, ಅವುಗಳ ಆಧಾರದಲ್ಲೇ ಅಳೆಯುತ್ತೇವೆ. ಈಗ ದೇಶದ ಜಿಡಿಪಿ, ಹಣದುಬ್ಬರ ಮತ್ತಿತರದರ ಸ್ಥಿತಿ ಹಾಳಾಗಿದೆಯಾ? ದೀರ್ಘಾವಧಿಯಲ್ಲಿ ಜಿಎಸ್ ಟಿ ಜಾರಿಯಿಂದ ಅನುಕೂಲವಿದೆ. ಈಗಾಗಲೇ ತೆರಿಗೆ ಪಾವತಿದಾರರ ಸ್ಥ್ತಿತಿ ಜಾಸ್ತಿಯಾಗಿದೆ" ಎಂದು ಮಾತು ಮುಗಿಸಿದರು ಆಡಿಟರ್ ವಿಶ್ವನಾಥ್.












Click it and Unblock the Notifications