ಬಸವಕಲ್ಯಾಣ ಉಪ ಚುನಾವಣೆ; ಯಡಿಯೂರಪ್ಪ ಸ್ಪಷ್ಟನೆ
ರಾಯಚೂರು, ಮಾರ್ಚ್ 21: " ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿ. ವೈ. ವಿಜಯೇಂದ್ರ ಅಭ್ಯರ್ಥಿಯಾಗಲಿದ್ದಾರೆ ಎಂಬುದು ನೂರಕ್ಕೆ ನೂರರಷ್ಟು ಸುಳ್ಳು" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಭಾನುವಾರ ರಾಯಚೂರು ನಗರದಲ್ಲಿನ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ನಿವಾಸದಲ್ಲಿ ಮಾಧ್ಯಮಗಳ ಜೊತೆ ಯಡಿಯೂರಪ್ಪ ಮಾತನಾಡಿದರು. ಉಪ ಚುನಾವಣೆಯ ಅಭ್ಯರ್ಥಿ ಕುರಿತು ಸ್ಪಷ್ಟನೆ ನೀಡಿದರು.
ಬಸವಕಲ್ಯಾಣದಲ್ಲಿ ಬಿ. ವೈ. ವಿಜಯೇಂದ್ರ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಕುರಿತು ಯಡಿಯೂರಪ್ಪ ಸ್ಪಷ್ಟನೆ ನೀಡಿದರು. "ಉಪ ಚುನಾವಣೆ ಅಭ್ಯರ್ಥಿಯಾಗುವುದು ನೂರಕ್ಕೆ ನೂರರಷ್ಟು ಸುಳ್ಳುಸುದ್ದಿ" ಎಂದರು.
ಬಸವಕಲ್ಯಾಣ ಉಪ ಚುನಾವಣೆಗೆ ಮಾರ್ಚ್ 23ರಂದು ಅಧಿಸೂಚನೆ ಪ್ರಕಟವಾಗಲಿದೆ. ಮಾರ್ಚ್ 30ರ ತನಕ ನಾಮಪತ್ರಗಳನ್ನು ಸಲ್ಲಿಕೆ ಮಾಡಬಹುದು. ಏಪ್ರಿಲ್ 4 ನಾಮಪತ್ರಗಳನ್ನು ವಾಪಾಸ್ ಪಡೆಯಲು ಕೊನೆಯ ದಿನವಾಗಿದ್ದು. ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಮೈಸೂರಿನಲ್ಲಿ ಮನೆ ಮಾಡಲಿದ್ದಾರೆ
"ಬಿ. ವೈ. ವಿಜಯೇಂದ್ರ ಅವರು ಮೈಸೂರಿಗೆ ಹೋಗಿ ಅಲ್ಲಿಯೇ ಇರುತ್ತಾರೆ. ಅಲ್ಲಿಯೇ ಮನೆ ಮಾಡಲಿದ್ದಾರೆ. ಇದರಿಂದಾಗಿ ಐದಾರು ಜಿಲ್ಲೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ಮುಂದಿನ ಬಾರಿ ವರುಣಾ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ" ಎಂದು ಯಡಿಯೂರಪ್ಪ ಹೇಳಿದರು.

20 ಸಾವಿರ ಮತಗಳ ಅಂತರದ ಗೆಲುವು
"ಮಸ್ಕಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದಾಗ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರತಾಪಗೌಡ ಪಾಟೀಲ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕ್ಷೇತ್ರಕ್ಕೆ ಮತ್ತೊಮ್ಮೆ ಆಗಮಿಸಿ ಪ್ರಚಾರ ಮಾಡುತ್ತೇನೆ" ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದರು.

ಬಸವಕಲ್ಯಾಣದಲ್ಲಿ ಗೆದ್ದಾಗಿದೆ
"ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಾವು ಗೆದ್ದಾಗಿದೆ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು. ಏಪ್ರಿಲ್ 17ರಂದು ನಡೆಯುವ ಉಪ ಚುನಾವಣೆಗೆ ಇನ್ನೂ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅವರ ನಿಧನದಿಂದಾಗಿ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಗಿದೆ.

130 ಸೀಟುಗಳಲ್ಲಿ ಗೆಲುವು
"ಇತಿಹಾಸದಲ್ಲೇ ಮೊದಲ ಬಾರಿಗೆ ತೆರಿಗೆ ಹೊರೆ ಇಲ್ಲದ ಐತಿಹಾಸಿಕ ಬಜೆಟ್ ಮಂಡಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನಗಳಲ್ಲಿ ಜಯಗಳಿಸಲಿದೆ" ಎಂದು ಬಿ. ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications