'ಇಬ್ಬರು ಅತ್ಯಂತ ಶಕ್ತಿಶಾಲಿ ಸೇನಾನಿಗಳೆಂದರೆ ತಾಳ್ಮೆ ಹಾಗೂ ಸಮಯ'
ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂದಿಯಾ ಜೊತೆಗಿರುವ ಫೋಟೋವೊಂದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇಬ್ಬರ ಕೈ ಹಿಡಿದಿರುವ ರಾಹುಲ್, ಆ ರಾಜ್ಯದಲ್ಲಿನ ಮುಖ್ಯಮಂತ್ರಿ ಆಯ್ಕೆ ವಿಚಾರ ಅಂತಿಮಗೊಂಡಿದೆ ಎಂದು ಸೂಚಿಸುತ್ತಿರುವಂತಿದೆ.
ಕಮಲ್ ನಾಥ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. ಈ ಆಯ್ಕೆಯನ್ನು ಜ್ಯೋತಿರಾದಿತ್ಯ ಸಿಂದಿಯಾ ಒಪ್ಪಿದ್ದಾರೆ ಎಂಬುದು ಕಂಡುಬರುತ್ತಿದೆ. ಗುರುವಾರದಂದು ಇದೇ ವಿಚಾರವಾಗಿ ಸುದೀರ್ಘವಾದ ಸಭೆ ನಡೆದಿತ್ತು.
"ಇದು ರೇಸ್ ಅಲ್ಲ, ಇದು ಕುರ್ಚಿಗಾಗಿ ನಡೆಯುವ ಕುಸ್ತಿಯೂ ಅಲ್ಲ, ನಾವಿಲ್ಲಿ ಇರುವುದು ಮಧ್ಯಪ್ರದೇಶದ ಜನರ ಸೇವೆಗಾಗಿ" ಎಂದು ಸಿಂದಿಯಾ ಮಾಧ್ಯಮದವರಿಗೆ ಹೇಳಿದ್ದಾರೆ. ಯಾವಾಗ ಮಧ್ಯಪ್ರದೇಶ ಮುಖ್ಯಮಂತ್ರಿ ಆಯ್ಕೆ ವಿಚಾರವು ಬಿಸಿ ಏರಿತೋ ಆಗ ರಾಹುಲ್ ಗಾಂಧಿ ಅವರು ಸೋದರಿ ಪ್ರಿಯಾಂಕಾ ಹಾಗೂ ತಾಯಿ ಸೋನಿಯಾ ಜತೆಗೂ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.

ಮತ್ತೆ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ ಫೋಟೋ ವಿಚಾರಕ್ಕೆ ಬಂದರೆ, ಲೇಖಕ ಲಿಯೋ ಟಾಲ್ ಸ್ಟಾಯ್ ರ, ಇಬ್ಬರು ಅತ್ಯಂತ ಶಕ್ತಿಶಾಲಿ ಸೇನಾನಿಗಳೆಂದರೆ ತಾಳ್ಮೆ ಹಾಗೂ ಸಮಯ ಎಂಬ ವಾಕ್ಯಗಳನ್ನು ಹಾಕಿದ್ದಾರೆ.
ರಾಜಸ್ತಾನದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿಯೇ ಇದೆ. ಹೈಕಮಾಂಡ್ ನಲ್ಲಿ ಅಶೋಕ್ ಗೆಹ್ಲೋಟ್ ಆಯ್ಕೆ ಬಗ್ಗೆ ಒಲವಿದ್ದರೆ, ರಾಜಸ್ತಾನ ರಾಜ್ಯ ನಾಯಕರಲ್ಲಿ ಸಚಿನ್ ಪೈಲಟ್ ಆಯ್ಕೆ ಕಡೆ ಮನಸ್ಸಿದೆ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ, ದಯವಿಟ್ಟು ಸಮಾಧಾನದಿಂದ ಇರಬೇಕು. ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರು ಏನೇ ನಿರ್ಧಾರ ಮಾಡಿದರೂ ಸ್ವಾಗತಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಸಚಿನ್ ಪೈಲಟ್ ಮನವಿ ಮಾಡಿದ್ದಾರೆ.
ಇದೀಗ ಲೋಕಸಭೆ ಚುನಾವಣೆ ಕಣ್ಣೆದುರು ಇಟ್ಟುಕೊಂಡು ಅನುಭವಿ ನಾಯಕರನ್ನೇ ಆಯ್ಕೆ ಮಾಡುವ ಕಡೆಗೆ ಕಾಂಗ್ರೆಸ್ ವರಿಷ್ಠರಿಗೆ ಒಲವಿದೆ. ಅದೇ ಸಂದರ್ಭದಲ್ಲಿ ಯುವ ನಾಯಕರಿಗೂ ಬೇಸರ ಮಾಡಬಾರದು ಎಂಬ ಸಂಗತಿಯೂ ಗಮನದಲ್ಲಿದೆ.
The two most powerful warriors are patience and time.
— Rahul Gandhi (@RahulGandhi) December 13, 2018
- Leo Tolstoy pic.twitter.com/MiRq2IlrIg
ಯಾವ ರಾಜ್ಯದಲ್ಲಿ ಯಾರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಮಾಧ್ಯಮದವರು ಸೋನಿಯಾ ಗಾಂಧಿ ಅವರನ್ನು ಕೇಳಿದಾಗ, ಯಾರು ಮುಖ್ಯಮಂತ್ರಿ ಅಂತ ನನಗೆ ಗೊತ್ತಿಲ್ಲ. ರಾಹುಲ್ ರನ್ನು ಕೇಳಿ ಎಂದಿದ್ದರು.












Click it and Unblock the Notifications