ನ್ಯೂಸ್ ಚಾನೆಲ್ ಮಾಲೀಕನಿಗೆ ಆರು ಕೋಟಿ ವಂಚಿಸಿದ ನಕಲಿ ಆರ್ ಎಸ್ ಎಸ್ ನಾಯಕ!
ಬೆಂಗಳೂರು, ಡಿಸೆಂಬರ್ 21: ಆರ್ ಎಸ್ ಎಸ್ ನಾಯಕನ ಸೋಗಿನಲ್ಲಿ ಪ್ರತಿಷ್ಠಿತ ಗಣ್ಯ ವ್ಯಕ್ತಿಗಳಿಗೆ ಉಂಡೆ ನಾಮ ಹಾಕಿದ್ದ ಯುವರಾಜ್ ಸುದ್ದಿವಾಹಿನಿಯ ಮಾಲೀಕನನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವುದಾಗಿ ನಂಬಿಸಿ ಆರು ಕೋಟಿ ರೂಪಾಯಿ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉದ್ಯಮಿಯೊಬ್ಬರಿಗೆ ಕೆಎಸ್ ಆರ್ಟಿಸಿ ನಿಗಮದ ಅಧ್ಯಕ್ಷ ಸ್ಥಾನ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಪಡೆದು ಮೋಸ ಮಾಡಿದ್ದರು. ಉದ್ಯಮಿ ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ನಾಗರಭಾವಿಯಲ್ಲಿದ್ದ ಯುವರಾಜನ ಮನೆ ಮೇಲೆ ದಾಳಿ ನಡೆಸಿದ್ದರು. ಇಪ್ಪತೈದು ಲಕ್ಷ ರೂಪಾಯಿ ನಗದು ಜತೆಗೆ 90 ಕೋಟಿ ರೂಪಾಯಿ ಮೌಲ್ಯದ ಚೆಕ್ ಗಳನ್ನು ವಶಪಡಿಸಿಕೊಂಡಿದ್ದರು.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಿಚಾರಣೆಗೆ ಒಳಪಡಿಸಿದಾಗ ಆರ್ ಎಸ್ ಎಸ್ ನಕಲಿ ಮುಖವಾಡ ಹಾಕಿಕೊಂಡು ಪ್ರತಿಷ್ಠಿತರಿಗೆ ಕೋಟಿ ಕೋಟಿ ವಂಚಿಸಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಗಣ್ಯರ ಜತೆ ತೆಗೆಸಿಕೊಂಡಿದ್ದ ಭಾವ ಚಿತ್ರಗಳನ್ನೇ ಬಂಡವಾಳ ಮಾಡಿಕೊಂಡು ನೂರಾರು ಜನರಿಗೆ ಮೋಸ ಮಾಡಿದ್ದ ಸಂಗತಿ ಹೊರ ಬಿದ್ದಿತ್ತು.

ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಪಕ್ಕದಲ್ಲಿ ಕೂರುವ ಪ್ರತಿಷ್ಠಿತರನ್ನು ಪರಿಚಯ ಮಾಡಿಕೊಂಡು ಅವರ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಆನಂತರ ಅವರಿಗೆ ಪ್ರತಿಷ್ಠಿತ ರಾಜಕೀಯ ಹುದ್ದೆ ನೀಡುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡುತ್ತಿದ್ದ. ರಾಜ್ಯಪಾಲರನ್ನು ಮಾಡುವುದಾಗಿ ಕೆಲವರಿಂದ ಕೋಟ್ಯಂತರ ರೂಪಾಯಿ ಪಡೆದು ಮೋಸ ಮಾಡಿದ್ದ. ಕೆಲವು ಪೊಲೀಸ್ ಅಧಿಕಾರಿಗಳು ಕೂಡ ವರ್ಗಾವಣೆ ಬಯಸಿ ಹಣ ಕೊಟ್ಟು ಮೋಸ ಹೋಗಿದ್ದರು ಎಂಬ ಮಾಹಿತಿ ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ನೂರಾರು ಜನರಿಗೆ ವರ್ಷಗಳಿಂದ ವಂಚಿಸಿದ್ದ ಸ್ವಾಮಿಯ ಅಕ್ರಮ ಆಸ್ತಿಯನ್ನು ಪತ್ತೆ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಖರೀದಿಸಿದ್ದಾನೆ. ಅಲ್ಲದೇ ಸಕಲೇಶಪುರದಲ್ಲಿ ಮೂವತ್ತೈದು ಎಕರೆ ಟೀ ಎಸ್ಟೇಟ್ ಹೊಂದಿರುವುದು ಬೆಳಕಿಗೆ ಬಂದಿದ್ದು, ಸುಮಾರು 70 ಕೋಟಿ ಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂಬ ಪ್ರಾಥಮಿಕ ಮಾಹಿತಿ ಸಿಸಿಬಿ ಪೊಲೀಸರಿಂದ ಲಭ್ಯವಾಗಿದೆ. ಆತನ ಸುಮಾರು ಹದಿನೈದು ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
ಸ್ವಾಮಿ ಪಡೆದಿರುವ ಚೆಕ್ ಗಳಲ್ಲಿ ಯಾರ ಹೆಸರು ಉಲ್ಲೇಖಿಸಿಲ್ಲ. ಬಡವರನ್ನು ಪರಿಚಯ ಮಾಡಿಕೊಂಡು ಅವರ ಖಾತೆಗೆ ಚೆಕ್ ಹಾಕಿ ಅಲ್ಲಿಂದ ಹಣ ಡ್ರಾ ಮಾಡುತ್ತಿದ್ದ. ಸ್ವಾಮಿಯ ಆವಾಂತರದಿಂದ ಅನೇಕರು ಆದಾಯ ತೆರಿಗೆ ಇಲಾಖೆಯ ತನಿಖೆಗೆ ಒಳಪಟ್ಟಿದ್ದರು. ಈ ಬಗ್ಗೆ ಪ್ರಶ್ನೆ ಮಾಡಲು ಹೋದವರ ಮೇಲೆ ಸ್ವಾಮಿ ಹಲ್ಲೆ ನಡೆಸಿರುವ ಮಾಹಿತಿಯೂ ಹೊರ ಬಿದ್ದಿದೆ.
ಸಿರಿ ಚಾನೆಲ್ ಗೆ ಮೋಸ: ಮೈಸೂರಿನಲ್ಲಿ ಸಿರಿ ಎಂಬ ಸುದ್ದಿ ವಾಹಿನಿ ನಡೆಸುತ್ತಿರುವ ಮಾಲೀಕರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವುದಾಗಿ ನಂಬಿಸಿ ಆರು ಕೋಟಿ ರೂಪಾಯಿ ಪಡೆದು ಸ್ವಾಮಿ ವಂಚನೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈವರೆಗೂ ಮೂರು ವಂಚನೆ ಪ್ರಕರಣ ದಾಖಲಾಗಿವೆ. ಉದ್ಯಮಿಗೆ ಕೆಎಸ್ ಆರ್ಟಿಸಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವುದಾಗಿ ನಂಬಿಸಿ ಮೋಸ ಮಾಡಿದ್ದ. ಮತ್ತೊಬ್ಬ ಪ್ರತಿಷ್ಠಿತ ವ್ಯಕ್ತಿಗೆ ರೇಷ್ಮೆ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಪಡೆದಿದ್ದಾನೆ. ಹಣ ಪಡೆದು ಒಬ್ಬರಿಗೂ ಕೆಲಸ ಮಾಡಿಕೊಟ್ಟಿಲ್ಲ. ಇವನ ವಂಚನೆ ಜಾಲಕ್ಕೆ ಕೆಲವು ಅಧಿಕಾರಿಗಳು ಬಿದ್ದು ಹಣ ಕಳೆದುಕೊಂಡಿದ್ದಾರೆ.
ಸ್ವಾಮಿ ವಿರುದ್ಧ ಈವರೆಗೂ ಮೂರು ವಂಚನೆ ಪ್ರಕರಣ ದಾಖಲಾಗಿದ್ದು, ಸಾಕಷ್ಟು ದೂರು ಬರುತ್ತಿವೆ. ಸುಮಾರು ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎಂದು ಸಿಬಿಬಿ ಅಧಿಕಾರಿ ತಿಳಿಸಿದ್ದಾರೆ. ಸ್ವಾಮಿ ಆಸ್ತಿ ಹಾಗೂ ಬ್ಯಾಂಕ್ ಖಾತೆ ವಿವರ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಉನ್ನತ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications