ನಾಳೆಯಿಂದ ಬೆಂಗಳೂರು ಕಸ ತೆಗೆಯೋರು ಯಾರು?
ಬೆಂಗಳೂರು, ಜನವರಿ 10: ಸೇವಾ ತೆರಿಗೆ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಜ.11ರಿಂದ ಕಸ ವಿಲೇವಾರಿ ಸ್ಥಗಿತಗೊಳಿಸುವುದಾಗಿ ಬಿಬಿಎಂಪಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.
ಅದರ ಬೆನ್ನಲ್ಲೇ ಸೇವೆ ಖಾಯಮಾತಿ ತಾರತಮ್ಯ ವಿರೋಧಿಸಿ ಪಾಲಿಕೆ ಕಸ ವಿಲೇವಾರಿ ಆಟೋ, ಲಾರಿ ಚಾಲಕರು, ಸಹಾಯಕರು ಮತ್ತು ಮೇಲ್ವಿಚಾರಕರು ಕೂಡ ಅದೇ ದಿನದಿಂದ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಇದರಿಂದ ಗುರುವಾರದಿಂದ ನಗರದಲ್ಲಿ ಕಸದ ಸಮಸ್ಯೆ ಉದ್ಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವರು, ಬಿಬಿಎಂಪಿ ಮೇಯರ್, ಆಯುಕ್ತರಷ್ಟೇ ಅಲ್ಲದೆ ಪಾಲಿಕೆ ಎಲ್ಲಾ 198 ವಾರ್ಡ್ ಕಾರ್ಪೊರೇಟರ್ ಗಳಿಗೂ ಪತ್ರ ಬರೆದಿರುವ ಕರ್ನಾಟಕ ಪ್ರದೇಶ ಗುತ್ತಿಗೆ ಪೌರಕಾರ್ಮಿಕರು ಚಾಲಕರು ಮತ್ತು ಮೇಲ್ವಿಚಾರಕರ ಸಂಘ ಅಧ್ಯಕ್ಷ ಪಿ. ನಾಗರಾಜು,
ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರ ಕಾರ್ಮಿಕರ ಸೇವೆಯನ್ನು ಮಾತ್ರ ಖಾಯಂಗೊಳಿಸಿ ಕಸ ವಿಲೇವಾರಿ ಮಾಡುವ ಆಟೋ, ಲಾರಿ ಚಾಲಕರು, ಸಹಾಯಕರು ಮತ್ತು ಮೇಲ್ವಿಚಾರಕರಿಗೆ ತಾರತಮ್ಯ ಎಸಗಲಾಗಿದೆ.

ಚಾಲಕರು ಸಹಾಯಕರು, ಮೇಲ್ವಿಚಾರಕರು ಕೂಡ ಮೊದಲು ಗುತ್ತಿಗೆ ಪೌರಕಾರ್ಮಿಕರರಾಗಿ ಸೇವೆ ಸಲ್ಲಿಸಿ ನಂತರ ಬಡ್ತಿ ಪಡೆದವರಾಗಿದ್ದಾರೆ. ಅವರ ಸೇವೆಯನ್ನೂ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
ಇಲ್ಲದಿದ್ದರೆ ಪಾಲಿಕೆಯ ಎಲ್ಲಾ 198 ವಾರ್ಡ್ ಗಳಲ್ಲೂ ಗುರುವಾರದಿಂದ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿಯಿಂದ ನೇರವಾಗಿಯಾಗಲಿ ಅಥವಾ ಗುತ್ತಿಗೆದಾರರ ಮೂಲಕವಾಗಲಿ ನಿರ್ವಹಿಸಲ್ಪಡುವ ಘನತ್ಯಾಜ್ಯ ನಿರ್ವಹಣೆಗೆ ಸೇವಾ ತೆರಿಗೆ ಅನ್ವಯಿಸುವುದಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶನುಸಾರ ವಿನಾಯಿತಿ ಇದೆ ಎಂದಿದ್ದಾರೆ. ಸದ್ಯವೇ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಮೇಯರ್ ಸಂಪತ್ ರಾವ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications