ಮನೆ ಮುಂದೆ ಬಿದ್ದಿರುವ ನ್ಯೂಸ್ ಪೇಪರ್ ನಿಂದಲೇ ಕಳ್ಳರಿಗೆ ಸುಳಿವು !
ಬೆಂಗಳೂರು, ಡಿಸೆಂಬರ್ 08: ಸಿಲಿಕಾನ್ ಸಿಟಿಯಲ್ಲಿ ಕಳ್ಳರು ಮನೆಗಳ್ಳತನ ಮಾಡೋಕು ಮೊದಲು ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳೋಕೆ ಸುಲಭ ಮಾರ್ಗ ಕಂಡು ಹಿಡಿದುಕೊಂಡಿದ್ದಾರೆ. ಮನೆ ಬಾಗಿಲು ಎದುರು ಎರಡು ನ್ಯೂಸ್ ಪೇಫರ್ ಬಿದ್ದಿದ್ದರೆ ಸಾಕು, ಮನೆಯಲ್ಲಿ ಯಾರೂ ಇಲ್ಲ ಎಂಬುದು ಖಚಿತ. ಇದೇ ಮಾರ್ಗ ಅನುಸರಿಸಿ ಮನೆಗೆ ಕನ್ನ ಹಾಕುತ್ತಾರೆ. ಕಳ್ಳೊಬ್ಬ ಇದೇ ಐಡಿಯಾ ಬಳಸಿ ಮೂರು ಮನೆ ಯಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. .
ಮನೆಯಲ್ಲಿ ಯಾರು ಇಲ್ಲ ಅಂದರೆ ಸಾಮಾನ್ಯವಾಗಿ ಮನೆಗೆ ಬರುವ ಡೈಲಿ ಪೇಪರ್ ಅಲ್ಲಿಯೇ ಬಿದ್ದಿರುತ್ತದೆ. ಪ್ರವಾಸ ಅಥವಾ ಬೇರೆ ಊರಿಗೆ ಹೋಗಿದ್ದರೆ ಅಲ್ಲಿ ಎರಡು ಮೂರು ಪೇಫರ್ ಬಿದ್ದಿರುತ್ತವೆ. ಮನೆ ಕಳ್ಳರು ಮೊದಲು ನೋಡುವುದೇ ಮನೆ ಪೇಪರ್ ಅಥವಾ ಹಾಲು ಪಾಕೆಟ್. ಮನೆ ಮುಂದೆ ಹಾಲು ಪಾಕೆಟ್ ಅಥವಾ ಡೈಲಿ ಪೇಪರ್ ಬಿದ್ದಿದ್ದರೆ ಈ ಮನೆಯಲ್ಲಿ ಯಾರೂ ಇಲ್ಲ ಎಂದು ಖಚಿತ ಪಡಿಸಿಕೊಳ್ಳುತ್ತಾರೆ.
ಅಂತಹ ಮನೆಯ ಸುತ್ತಮುತ್ತ ಚಲನೆ ಮಾಡಿ ರಾತ್ರಿ ವೇಳೆ ಬೀಗ ಮುರಿದು ಕದಿಯುತ್ತಾರೆ. ಇದೇ ಐಡಿಯಾ ಬಳಸಿ ಮನೆಗಳಲ್ಲಿ ಕಳ್ಳತನ ಮಾಡಿದ್ದ ಕಳ್ಳನೊಬ್ಬ ಜಾಲಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಶ್ರೀನಿವಾಸ ಅಲಿಯಾಸ್ ಅಪ್ಪು ಬಂಧಿತ ಆರೋಪಿ. ಈತನಿಂದ 300 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕದ್ದ ಚಿನ್ನವನ್ನು ಮಾರಾಟ ಮಾಡಲು ಯತ್ನಿಸಿದಾಗ ಖಚಿತ ಮಾಹಿತಿ ಆಧರಸಿ ಆರೋಪಿ ಶ್ರೀನಿವಾಸ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಮಹಾಲಕ್ಷ್ಮೀ ಬಡಾವಣೆ, ಜ್ಞಾನ ಭಾರತಿ, ಹಾಗೂ ಜಾಲಹಳ್ಳಿ ಠಾಣಾ ವ್ಯಾಪ್ತಿಯ ಮೂರು ಕಳವು ಪ್ರಕರಣ ಪತ್ತೆಯಾಗಿವೆ. ವಿಚಾರಣೆ ವೇಳೆ ಮನೆ ಕಳ್ಳತನಕ್ಕೂ ಮೊದಲು ಯಾರೂ ಇಲ್ಲದ ಮನೆ ಹೇಗೆ ಗುರುತು ಹಿಡಿಯುತ್ತಿದ್ದ ಎಂಬುದನ್ನು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಯಾರೂ ಇಲ್ಲದ ಮನೆಗಳ ಮುಂದೆ ನ್ಯೂಸ್ ಪೇಪರ್ ಅಥವಾ ಹಾಲು ಪಾಕೆಟ್ ಬಿದ್ದಿರುತ್ತದೆ. ಎರಡು ಅಥವಾ ಮೂರು ನ್ಯೂಸ್ ಪೇಪರ್ ಬಿದ್ದಿರುವ ಮನೆ ಟಾರ್ಗೆಟ್ ಮಾಡ್ತೇವೆ. ಪ್ರವಾಸಕ್ಕೆ ಅಥವಾ ಬೇರೆ ಕಾರಣಕ್ಕೆ ದೂರದ ಊರಿಗೆ ಹೋಗಿದ್ದರೆ ಯಾರೂ ಪೇಪರ್ ಮತ್ತು ಹಾಲು ಪಾಕೆಟ್ ಅಲ್ಲೇ ಬಿದ್ದಿರುತ್ತವೆ. ಅದರಿಂದಲೇ ಮನೆಯಲ್ಲಿ ಯಾರೂ ಇಲ್ಲದಿರುವುದು ಖಚಿತ ಪಡಿಸಿಕೊಂಡು ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಶ್ರೀನಿವಾಸ್ ತಿಳಿಸಿದ್ದಾನೆ.

ಮನೆ ಬೀಗ ಒಡೆದು ಒಳಗೆ ಹೋದ ಕೂಡಲೇ ಶ್ರೀನಿವಾಸ್ ಮದ್ಯದ ಬಾಟಲಿ ಹುಡುಕುತ್ತಿದ್ದನಂತೆ. ತದ ನಂತರ ಚಿನ್ನಾಭರಣ ಕದಿಯುತ್ತಿದ್ದ. ಹೀಗೆ ಮೂರು ಕಡೆ ಕದ್ದ ಚಿನ್ನ ಮಾರಾಟ ಮಾಡಿ ಐಶರಾಮಿ ಜೀವನ ನಡೆಸಲು ಮುಂದಾಗಿದ್ದ. ಆದರೆ, ಕದ್ದ ಆಭರಣ ಮಾರಾಟದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.j












Click it and Unblock the Notifications