ಉಕ್ಕಿನ ಮೇಲ್ಸೇತುವೆ ಪರ್ಯಾಯವಾಗಿ ಏನ್ಮಾಡ್ಬಹುದು?
ಬೆಂಗಳೂರು, ಅಕ್ಟೋಬರ್ 14: ಬಹುಕೋಟಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಅಪಸ್ವರ ಹೆಚ್ಚಾಗುತ್ತಿದೆ. ನಗರಾಭಿವೃದ್ಧಿ, ಸಂಚಾರ ದಟ್ಟಣೆ ತಜ್ಞರು ಮಾಧ್ಯಮಗಳಲ್ಲಿ ತಮ್ಮಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ ಬುಕ್ ನಲ್ಲಿ ಎನ್ ಜಿಒಗಳು ಪ್ರತಿಭಟನೆ ಮಾಡೋಣ ಬನ್ನಿ ಎಂದು ಕರೆ ನೀಡಿವೆ. ಮೇಲ್ಸೇತುವೆ ನಿರ್ಮಾಣದ ಮುಖ್ಯ ಉದ್ದೇಶವಾಗಿರುವ ಸಂಚಾರ ದಟ್ಟಣೆ ಒತ್ತಡ ಕಡಿಮೆ ಮಾಡಲು ಪರ್ಯಾಯವಾಗಿ ಯಾವ ಮಾರ್ಗಗಳಿವೆ ಎಂಬುದರ ಬಗ್ಗೆ ಇಲ್ಲಿ ಒಂದು ವರದಿ ಇದೆ ಓದಿ...
ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗಿನ ಉಕ್ಕಿನ ಮೇಲ್ಸೇತುವೆಗೆ ಸುಮಾರು 1,791 ಕೋಟಿ ರು ವೆಚ್ಚ ಎಂದು ಅಂದಾಜಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ವೆಚ್ಚ 1,900 ಕೋಟಿ ರು ದಾಟಬಹುದು. ಆರೇಳು ಕಿ.ಮೀ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಥವಾ 10 ನಿಮಿಷದ ಟ್ರಾಫಿಕ್ ಒತ್ತಡ ನಿವಾರಿಸಲು ಎಷ್ಟೊಂದು ಮೊತ್ತದ ಸಾರ್ವಜನಿಕರ ಹಣ ವ್ಯಯಿಸುವ ಅಗತ್ಯವಿದೆಯೇ? ಎಂಬ ಪ್ರಶ್ನೆ ಎದ್ದಿದೆ. [ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

ಮೊದಲಿಗೆ ಮೂಲ ಸೌಕರ್ಯ ಅಭಿವೃದ್ಧಿ ಮಾಡಿ ರಸ್ತೆ ಸರಿಪಡಿಸಿದರೆ ಸಂಚಾರ ದಟ್ಟಣೆ ತಾನಾಗೇ ಪರಿಹಾರಗೊಳ್ಳುತ್ತದೆ. ಇಲ್ಲದಿದ್ದರೆ, ಉಕ್ಕಿನ ಸೇತುವೆ ನಿರ್ಮಾಣವಾದ ಮೇಲೂ ಸಂಚಾರ ದಟ್ಟಣೆಯನ್ನು ಬಸವೇಶ್ವರ ಸರ್ಕಲ್ ಹಾಗೂ ಹೆಬ್ಬಾಳದ ಬಳಿ ಕಾಣಬೇಕಾಗುತ್ತದೆ. ಹೆಬ್ಬಾಳ ಬಳಿ 8 ಕಡೆಗಳಿಂದ ವಾಹನಗಳು ಬರುತ್ತವೆ. ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಟ್ರಾಫಿಕ್ ತಜ್ಞ ಶ್ರೀಹರಿ ಹೇಳಿದ್ದಾರೆ.[ಸೇತುವೆ ಪರಿಕಲ್ಪನೆ ಬಿಜೆಪಿಯದ್ದು, ಅನುಷ್ಠಾನ ಕಾಂಗ್ರೆಸಿನದ್ದು :ಸಿಎಂ]
'ಅರಮನೆ ಮೈದಾನಕ್ಕೆ ಜಯಮಹಲ್ ರಸ್ತೆ ಕಡೆಯಿಂದ ಮಾತ್ರ ಪ್ರವೇಶಾವಕಾಶ ಕಲ್ಪಿಸಬೇಕು. ಕಬ್ಬನ್ ರಸ್ತೆ, ಕೆ.ಆರ್.ಪುರ ಹಾಗೂ ತುಮಕೂರು ರಸ್ತೆ ಮೂರೂ ಕಡೆ ವಿಮಾನ ನಿಲ್ದಾಣದಿಂದ ಹೆಚ್ಚಿನ ಬಸ್ಗಳನ್ನು ಓಡಿಸಬೇಕು' ಎಂಬ ಸಲಹೆ ನೀಡಿದ್ದಾರೆ.
ತಜ್ಞರು ನೀಡುವ ಸಲಹೆ, ಪರ್ಯಾಯ ಮಾರ್ಗಗಳು ಹೀಗಿವೆ:
* ಉಕ್ಕಿನ ಸೇತುವೆಯಂತಹ ದುಬಾರಿ ಯೋಜನೆಗಳ ಬದಲು ಸಮೂಹ ಸಾರಿಗೆ ಸೌಲಭ್ಯವನ್ನು ಈಗಿರುವ ಶೇ 50ರಿಂದ ಶೇ 70ಕ್ಕೆ ಹೆಚ್ಚಿಸಬೇಕು. ಕಾರು ಕೇಂದ್ರಿತ ಮನಸ್ಥಿತಿಯಿಂದ ಹೊರಬರಬೇಕು. ಈ ಮೇಲ್ಸೇತುವೆ ವಿಐಪಿ ಅಥವಾ ಕಾರು ಉಳ್ಳವರ ಅನುಕೂಲಕ್ಕೆ ಮಾಡಿದ್ದಂತಿದೆ.
* ಬಸ್ ಓಡಾಟದ ಮಾರ್ಗಗಳನ್ನು ಇನ್ನಷ್ಟು ಯೋಜಿತವಾಗಿ ರೂಪಿಸಬೇಕು.
* ಮೆಟ್ರೊ ಯೋಜನೆಯನ್ನು ಶೀಘ್ರಗತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಮೆಟ್ರೋ ಹಾಗೂ ಬಸ್ ವ್ಯವಸ್ಥೆ ಸಂಪರ್ಕ ಸಾರಿಗೆ ಬಲಗೊಳ್ಳಬೇಕು.
* ಖಾಸಗಿ ಮಿನಿ ಬಸ್ಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು. ಕಾರುಗಳ ಬದಲಿಗೆ ಇದು ಉತ್ತಮ ಪರಿಹಾರ.
* ಟೆಂಡರ್ ಶ್ಯೂರ್ ಮಾದರಿಯಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಬೇಕು. ಜನರ ಓಡಾಟಕ್ಕೆ ಒಳ್ಳೆಯ ಫುಟ್ಪಾತ್ ಸೌಲಭ್ಯ ಕಲ್ಪಿಸಬೇಕು
* ಉಕ್ಕಿನ ಮೇಲ್ಸೇತುವೆಗೆ ವ್ಯಯಿಸುವ 1,858 ಕೋಟಿ ರು ಮೊತ್ತದಲ್ಲಿ ಏನೆಲ್ಲ ಆಗುತ್ತದೆ?
ಅಶ್ವಿನ್ ಮಹೇಶ್ ಅವರು ಹಾಕುವ ಲೆಕ್ಕಾಚಾರ ಹೀಗಿದೆ:
* ನಾಲ್ಕು ಸಾವಿರ ಬಸ್ ಖರೀದಿಸಬಹುದು. ಅಥವಾ 300 ಕಿ.ಮೀ. ಉದ್ದದ ಫುಟ್ಪಾತ್ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸಬಹುದು.
* ಸಾವಿರ ಕಿ.ಮೀ. ಉದ್ದದ ಸೈಕಲ್ ಮಾರ್ಗದ ನಿರ್ಮಾಣ ಮಾಡಬಹುದು.
* ನಗರದ ಸರ್ಕಾರಿ ಶಾಲೆಗಳ ಪ್ರತಿ ಮಗುವಿನ ಮೇಲೆ ಶೈಕ್ಷಣಿಕ ಉದ್ದೇಶಕ್ಕಾಗಿ ಸರಾಸರಿ 10 ಸಾವಿರ ರು ಅಧಿಕವಾಗಿ ಖರ್ಚು ಮಾಡಬಹುದು.
* ಜಲಪೂರಣ ವ್ಯವಸ್ಥೆಯನ್ನು ಸದೃಢಗೊಳಿಸಿ ನಗರದ ಶೇ 50ರಷ್ಟು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಬಹುದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications