ಬೆಂಗಳೂರು ನಗರದ ರಸ್ತೆಗುಂಡಿ ಮುಚ್ಚಲು ಸಿದ್ದರಾಮಯ್ಯ ಆದೇಶ
ಬೆಂಗಳೂರು, ಆಗಸ್ಟ್ 03 : ಬೆಂಗಳೂರು ನಗರದಲ್ಲಿ ಗುರುವಾರದಿಂದಲೇ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು. ನಗರದಲ್ಲಿ ಮಳೆ ಅನಾಹುತಗಳನ್ನು ತಡೆಯಲು 140 ಕೋಟಿ ರೂ. ವೆಚ್ಚದಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಒಪ್ಪಿಗೆ ಕೊಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬೆಂಗಳೂರಿನಲ್ಲಿ ಮಳೆಯಿಂದಾದ ಆದ ಹಾನಿ ಬಗ್ಗೆ ಮಾಹಿತಿ ಪಡೆದ ಅವರು, ಮಳೆಯಿಂದ ಆಗುವ ಹಾವಳಿ ತಡೆಯಲು ತುರ್ತು ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.[ಮಡಿವಾಳ ಕೆರೆ ಹೂಳು ತೆಗೆಯಲು ಸಚಿವರ ಸೂಚನೆ]
'ಮಳೆ ಅನಾಹುತಗಳನ್ನು ತಡೆಯಲು ಎಲ್ಲಾ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಎಲ್ಲಾ ಇಲಾಖೆಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅಗತ್ಯ ಸಹಕಾರ ನೀಡಬೇಕು' ಎಂದು ಸಿದ್ದರಾಮಯ್ಯ ನಿರ್ದೇಶನ ನೀಡಿದರು. [ಮಳೆ ಅವಾಂತರ, ಬಿಬಿಎಂಪಿ ನಿಯಂತ್ರಣ ಕೊಠಡಿ ಸಂಖ್ಯೆಗಳು]
ಸಚಿವ ರಾಮಲಿಂಗಾ ರೆಡ್ಡಿ, ಡಾ.ಎಚ್.ಸಿ.ಮಹದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಬಿಬಿಎಂಪಿ ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ, ಮಾಜಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು....

ಗುಂಡಿ ಮುಚ್ಚಲು ಸೂಚನೆ
ಪ್ರತಿ ವಾರ್ಡ್ನಲ್ಲಿ ತುರ್ತು ಕಾಮಗಾರಿಗಳಿಗಾಗಿ 20 ಕೋಟಿ ಹಣವಿರುತ್ತದೆ. ಇದನ್ನು ಬಳಸಿಕೊಂಡು ಗುರುವಾರದಿಂದಲೇ ಬಿಬಿಎಂಪಿಯ ಎಲ್ಲಾ 198 ವಾರ್ಡ್ಗಳಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ಆರಂಭಿಸಬೇಕು. ಕಾಮಗಾರಿಯ ಗುಣಮಟ್ಟ ಉತ್ತಮವಾಗಿರುವಂತೆ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಸೂಚಿಸಿದರು.

140 ಕೋಟಿ ವೆಚ್ಚದಲ್ಲಿ ಕಾಮಗಾರಿ
ಸಭೆಯ ಬಳಿಕ ಮಾತನಾಡಿದ ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರು, 'ಮಳೆ ಅನಾಹುತಗಳನ್ನು ತಡೆಯಲು 140 ಕೋಟಿ ರೂ. ವೆಚ್ಚದಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವ ಪ್ರಸ್ತಾಪಕ್ಕೆ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ' ಎಂದು ಹೇಳಿದರು.

ರಾಜಾ ಕಾಲುವೆ ಒತ್ತುವರಿ ತೆರವು ಮಾಡಿ
'ಕೆರೆಗಳ ಅಚ್ಚುಕಟ್ಟು ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒತ್ತುವರಿಗಳನ್ನು ತೆರವುಗೊಳಿಸಬೇಕು. ರಾಜಾಕಾಲುವೆ ಒತ್ತುವರಿಯಾಗಿದ್ದರೂ ತೆರವುಗೊಳಿಸಿ' ಎಂದು ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ ಎಂದು ಮೇಯರ್ ಹೇಳಿದರು.

ಯಂತ್ರದ ಸಹಾಯದಿಂದ ಗುಂಡಿ ಮುಚ್ಚಲಾಗುತ್ತದೆ
ಬೆಂಗಳೂರಿನ ರಸ್ತೆಗಳ ಗುಂಡಿಗಳನ್ನು ಯಂತ್ರದ ಸಹಾಯದಿಂದ ಮುಚ್ಚಲಾಗುತ್ತದೆ. ಕೆನಡಾದಿಂದ ತರಿಸಿರುವ ಪೈಥಾನ್-5000 ಯಂತ್ರ ಬೆಂಗಳೂರಿನ ರಸ್ತೆಯ ಗುಂಡಿ ಮುಚ್ಚುವ ಕಾರ್ಯಾಚರಣೆಯನ್ನು ಗುರುವಾರದಿಂದ ಆರಂಭಿಸಲಿದೆ.

ಮಳೆ ತಂದ ಹಾನಿ
ಜುಲೈ 28ರ ರಾತ್ರಿಯಿಂದ ಸುರಿದ ಒಂದೇ ಮಳೆಗೆ ಮಡಿವಾಳ ಕೆರೆ ಕೋಡಿ ಬಿದ್ದಿತ್ತು. ಇದರಿಂದಾಗಿ ಬಿಟಿಎಂ ಸೇರಿದಂತೆ ವಿವಿಧ ಪ್ರದೇಶಗಳು ಜಲಾವೃತ್ತವಾಗಿತ್ತು. ಕೋಡಿಚಿಕ್ಕನಹಳ್ಳಿಯಲ್ಲಿಯೂ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ನಗರದ ಹಲವು ರಸ್ತೆಗಳು ಗುಂಡಿ ಬಿದ್ದಿದ್ದವು.












Click it and Unblock the Notifications