Snehamayi Krishna: ಕಾಳಿಗೆ ಕುರಿ ಬಲಿ- ಸ್ನೇಹಮಯಿ ಕೃಷ್ಣ ಫೋಟೋಗೆ ರಕ್ತ ಸವರಿ ವಾಮಾಚಾರ!
ಬೆಂಗಳೂರು ಫೆಬ್ರವರಿ 22: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಆರೋಪ ಮಾಡಿದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಮೇಲೆ ವಾಮಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯೊಬ್ಬರ ಮೊಬೈಲ್ ಫೋನ್ನಲ್ಲಿ ಈ ವಾಮಾಚಾರದ ದೃಶ್ಯ ಪೊಲೀಸರಿಗೆ ಲಭ್ಯವಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸಿದ್ದಾರೆ.
ಹೌದು... ಆರೋಪಿಯ ಮೊಬೈಲ್ನಲ್ಲಿ ಈ ಭಯಾನಕ ದೃಶ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಪ್ರಾಣಿಗಳನ್ನು ಬಲಿ ನೀಡಿ ಅದರ ರಕ್ತವನ್ನು ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳಿಗೆ ಸವರುತ್ತಿರುವ ದೃಶ್ಯವನ್ನು ಸೆರೆ ಹಿಡಿದು ಹಂಚಿಕೊಳ್ಳಲಾಗಿದೆ. ಈ ದೃಶ್ಯ ಆರೋಪಿಯೊಬ್ಬರ ಮೊಬೈಲ್ನಲ್ಲಿ ಸಿಕ್ಕಿದೆ.

ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಕಾಳಿಕಾಂಬ ಗುಡಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಆದರೆ ಈ ಘಟನೆ ನಡೆದಿರುವುದು ಸ್ವತ: ಈ ಗುಡಿಯ ಆರ್ಚಕರಿಗೆ ತಿಳಿದಿಲ್ಲ ಎನ್ನುವುದು ಪೊಲೀಸ್ ವಿಚಾರಣೆಯಿಂದ ಬಯಲಾಗಿದೆ. ಅಷ್ಟಕ್ಕೂ ಪೊಲೀಸ್ ಬಂಧಿಸಿದ ಆ ಆರೋಪಿ ಯಾರು?
ಜನವರಿ 30ರಂದು ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸೆಲೂನ್ ಮೇಲೆ ಏಕಾಏಕಿ ದಾಳಿ ಮಾಡಿ ಪಿಠೋಪಕರಣಗಳನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದ ಪೊಲೀಸರು ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ್ ಅವರನ್ನು ಬಂಧಿಸಿದ್ದರು. ಈ ಆರೋಪಿ ಮೊಬೈಲ್ನಲ್ಲಿ ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ನೀಡಿ ಆ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ನಾ ಹಾಗೂ ಆರ್ಟಿಐ ಕಾರ್ಯಕರ್ತ ಗಂಗರಾಜು ಫೋಟೋಗೆ ಹಚ್ಚುತ್ತಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ.
ಅಷ್ಟೇ ಅಲ್ಲ ಸ್ನೇಹಮಯಿ ಕೃಷ್ಣ, ಗಂಗರಾಜು, ಪ್ರಸಾದ್ ಅತ್ತಾವರ, ಶ್ರೀನಿಧಿ ಮತ್ತು ಸುಮಾ ಆಚಾರ್ಯ ಹೆಸರಿನ ಚೀಟಿಗಳನ್ನು ಜೋಡಿಸಿ ಹಾರದಂತೆ ಮಾಡಿ ಕಾಳಿಕಾಂಬ ದೇವಿ ಕೊರಳಿಗೆ ಹಾಕಲಾಗಿತ್ತು. ಕುರಿ ಬಲಿ ನೀಡಿದ್ದ ರಕ್ತವನ್ನು ಸ್ನೇಹಮಯಿ ಕೃಷ್ಣ, ಗಂಗರಾಜು ಫೋಟೋಗೆ ಅರ್ಪಣೆ ಮಾಡಲಾಗಿದೆ. ಅಲ್ಲದೆ ಸರಣಿ ಪ್ರಾಣಿ ಬಳಿ ಮಾಡಿರುವ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಮೇಲೆ ವಾಮಾಚಾರ ಮಾಡಿದ ಬಗ್ಗೆ ಹೆಚ್ಚಿನ ವಿಷಯಗಳನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ. ವಾಮಾಚಾರ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನು ಮಾಡಿದವರು ಯಾರು? ಯಾಕೆ ಮಾಡಿದರು ಎನ್ನುವ ಸಂಪೂರ್ಣ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸಿಎಂ ವಿರುದ್ಧ ಸ್ನೇಹಮಯಿ ಕೃಷ್ಣ ಆರೋಪ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಮುನ್ನಲೆಗೆ ಬಂದಿದೆ. ಈ ಪ್ರಕರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ. ಈ ಪ್ರಕರಣದ ತನಿಖೆ ಪ್ರಸ್ತುತ ನಡೆದಿದೆ. ಇದೇ ವಿಚಾರದಲ್ಲಿ ವಾಮಾಚಾರ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಆದರೆ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿದ್ದಾರೆ.












Click it and Unblock the Notifications