ಕಸದ ಲಾರಿಗೆ ಬಾಲಕಿ ಬಲಿ: ಬಿಬಿಎಂಪಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ
ಬೆಂಗಳೂರು, ಮಾ.21: ಹೆಬ್ಬಾಳದ ಬಳಿ ಶಾಲಾ ಬಾಲಕಿಯೊಬ್ಬರನ್ನು ಬಿಬಿಎಂಪಿ ಕಸದ ಲಾರಿ ಬಲಿ ಪಡೆದ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗಬ್ಬೆದ್ದು ಹೋಗಿರುವ ಪಾಲಿಕೆಯನ್ನು ಮೊದಲು ಸ್ವಚ್ಚ ಮಾಡಬೇಕು ಎಂದು ಹೇಳಿದ್ದಾರೆ.
ಬಿಬಿಎಂಪಿ ಬೇಜವಾಬ್ದಾರಿ, ನಿರ್ಲಕ್ಷ್ಯ, ಅವೈಜ್ಞಾನಿಕ ಕಸದ ವಿಲೇವಾರಿ ಹಾಗೂ ಅಸಮರ್ಪಕ ರಸ್ತೆ, ಚರಂಡಿ ನಿರ್ವಹಣೆಯಿಂದ ಜನರ ಜೀವಕ್ಕೆ ಕಿಮ್ಮತ್ತಿಲ್ಲದಾಗಿದೆ. ಹೆಬ್ಬಾಳದ ಮೇಲು ಸೇತುವೆ ಬಳಿ ಕಸದ ಲಾರಿಗೆ ನೂರು ವರ್ಷ ಬಾಳಿ ಬದುಕಬೇಕಿದ್ದ ಬಾಲಕಿ ಬಲಿಯಾಗಿದ್ದಾಳೆ.

ಭಾನುವಾರದಂದು ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಆ ಫ್ಲೈ ಓವರ್ ಅಂಡರ್ಪಾಸ್ನಲ್ಲಿ ನೀರು ತುಂಬಿತ್ತು. ಹೀಗಾಗಿ ಮಕ್ಕಳು ಅಂಡರ್ ಪಾಸ್ನಲ್ಲಿ ಹೋಗದೆ ರಸ್ತೆ ಮೂಲಕ ದಾಟುತ್ತಿದ್ದರು. ಆ ಸಂದರ್ಭದಲ್ಲಿ ದುರಂತ ಘಟಿಸಿದೆ.
ಸ್ವತಃ ಗೌರವಾನ್ವಿತ ಹೈಕೋರ್ಟ್ ಛೀಮಾರಿ ಹಾಕಿದ್ದರೂ, ಎಂಜಿನಿಯರುಗಳನ್ನು ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ನೀಡಿದ್ದರೂ ಎಮ್ಮೆ ಚರ್ಮದ ಪಾಲಿಕೆ ಪಾಠ ಕಲಿತಿಲ್ಲ. ಬಿಬಿಎಂಪಿ ಆಟಗಳಿಗೆ ಸೀಟಿ ಹೊಡೆಯುತ್ತಾ, ಅಲ್ಲಿನ ಅದಕ್ಷ ಅಧಿಕಾರಿಗಳನ್ನು ಪೊರೆದು ಪೋಷಣೆ ಮಾಡುತ್ತಿರುವ ಸರಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲವಾಗಿದೆ.
ಬೆಂಗಳೂರು ನಗರದ ಗೌರವ, ಪ್ರತಿಷ್ಠೆ ಹಾಳು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಅಲ್ಲಿಂದ ಹೊರಹಾಕಿ ಬಿಬಿಎಂಪಿಯನ್ನು ಮೊದಲು ಸ್ವಚ್ಚಗೊಳಿಸಬೇಕಿದೆ. ಅಲ್ಲಿಂದಲೇ ಬೆಂಗಳೂರಿನ ಸ್ವಚ್ಚತೆ ಆರಂಭವಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications