ಕೊರೊನಾ: ಸಪ್ತಪದಿ ಸಾಮೂಹಿಕ ಮದುವೆಗೂ ಹಿಡಿಯಿತು ಗ್ರಹಣ
ಬೆಂಗಳೂರು, ಏಪ್ರಿಲ್ 7: ಕೊರೊನಾ ಮಹಾಮಾರಿಯಿಂದ ರಾಜ್ಯ ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ ಏನಾಯಿತು ಎಂಬುದಕ್ಕೆ ಸ್ವತಃ ಸಚಿವರೇ ಇಂದು ಉತ್ತರ ಕೊಟ್ಟಿದ್ದಾರೆ. ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಸಪ್ತಪದಿ ಯೋಜನೆ ಮುಂದೂಡಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 24 ರಂದು ಪ್ರಥಮ ಹಂತದಲ್ಲಿ ನಡೆಯಬೇಕಿತ್ತು. ಇದಕ್ಕಾಗಿ 1500 ಸಾವಿರ ವಧು ವರರು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು ಎಂದು ತಿಳಿಸಿದರು.
ದೆಹಲಿಯಲ್ಲಿ ಆನ್ ಲೈನ್ ಮದುವೆ, ವಿಡಿಯೋ ಕಾಲ್ನಲ್ಲೇ ನೃತ್ಯ
ಯೋಜನೆಯಡಿ ಬಡ ವಧು ವರರಿಗೆ ಸರ್ಕಾರದಿಂದ ಉಚಿತ ವಿವಾಹ ಭಾಗ್ಯ ಕಲ್ಪಿಸಲು ತೀರ್ಮಾನಿಸಲಾಗಿತ್ತು. ಇದೀಗ ಕೊರೋನಾದಿಂದ ಸಪ್ತಪದಿ ಯೋಜನೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಮೇ 24 ರಂದು ಎರಡನೇ ಹಂತದ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೆ. ಮೊದಲ ಮತ್ತು ಎರಡನೇ ಹಂತಗಳನ್ನು ಕೂಡಿಸಿ ಒಂದೇ ಹಂತದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಇದು ಅಂತಿಮ ಅಲ್ಲ. ಲಾಕ್ಡೌನ್ ಹಾಗೂ ಕೊರೊನಾ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತಿಳಿಸಲಾಗುವುದು. ಇದಕ್ಕೆ ಮುಖ್ಯಮಂತ್ರಿಗಳು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.