ರೋಮಿಯೋ ಲವ್ಸ್ ಅನಾರ್ಕಲಿ ಹಾಸ್ಯ ನಾಟಕ ನೋಡಿ
ಬೆಂಗಳೂರು, ಜುಲೈ 20: ರಂಗಾಸಕ್ತ ಯುವಕರ ಕನಸಿನ ಕೂಸಾಗಿ ರೂಪುಗೊಂಡು ಕನ್ನಡ ರಂಗಭೂಮಿಗೆ ತನ್ನ ಅಳಿಲು ಸೇವೆಯನ್ನು ನೀಡುತ್ತಾ ಬಂದಿರುವ 'ಧ್ವನಿ' ನಾಟಕ ತಂಡ ಸದಾ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಜುಲೈ 21ರಂದು ಇಂಥದ್ದೊಂದು ಹೊಸ ಪ್ರಯೋಗ ಆಪ್ತ ರಂಗಮಂದಿರ ರಂಗಶಂಕರದಲ್ಲಿ ಕಾಣಬಹುದಾಗಿದೆ.
ಈ ನಾಟಕವು ಒಂದು ವಿಶಿಷ್ಟವಾದ ಪ್ರೇಮ ಕಥಾವಸ್ತುವುಳ್ಳ, ಹಾಸ್ಯ ಮಿಶ್ರಿತ ವಿನೂತನ ಪ್ರಯೋಗ. ಸುಮಾರು 100 ನಿಮಿಷಗಳ ಈ ನಾಟಕವು ತೀವ್ರ ಭಾವನೆಗಳ ಸಂಗಮವೂ ಆಗಿ ರಸಿಕ ಪ್ರೇಕ್ಷಕರ ಮನಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ.
ಈ ನಾಟಕದ ಉಪ ಶೀರ್ಷಿಕೆಯಾಗಿ 'ಅದೇ ಪ್ರೀತಿ ಹೊಸ ರೀತಿ' ಎಂಬುದರಲ್ಲೇ ತಿಳಿದು ಬರುವುದೇನೆಂದರೆ ಪ್ರೀತಿ, ಪ್ರೇಮಗಳು ಶತ ಶತಮಾನಗಳಿಂದ ಅದೇ ಆಗಿದ್ದರೂ ಕಾಲಬದಲಾದಂತೆಲ್ಲಾ ತನ್ನ ಸ್ವರೂಪವನ್ನು ಆಯಾ ಕಾಲಮಾನಕ್ಕೆ ಹಾಗೂ ಸಂಸ್ಕೃತಿಗನುಗುಣವಾಗಿ ಬದಲಾಯಿಸಿಕೊಳ್ಳುತ್ತಾ ತನ್ನ ಇರುವನ್ನು ಸಾಬೀತುಪಡಿಸುತ್ತಾ ಬಂದಿದೆ.
ಈ ನಾಟಕದ ಕೊನೆಯಲ್ಲಿ ಪ್ರೇಮಿಗಳು ಒಂದಾಗುತ್ತಾರಾ ಅಥವ ಈ ಸಮಾಜದ ಕೃತಕ ಸಂಪ್ರದಾಯಗಳಿಗೆ ತಮ್ಮ ಪ್ರೀತಿಯನ್ನು ಬಲಿಕೊಡುತ್ತಾರಾ? ಎಂಬುದು ನಾಟಕದ ರೋಚಕ ಅಂತ್ಯದಲ್ಲಿ ತೆರೆದುಕೊಳ್ಳುತ್ತದೆ.

ಈ ನಾಟಕವು ರಂಗದ ಮೇಲೆ ತರಲು ಹಲವಾರು ಶ್ರಮಿಗಳು ಕೆಲಸ ಮಾಡಿರುತ್ತಾರೆ, ಕನ್ನಡ ರಂಗಭೂಮಿ ಕಲಾವಿದರು ಹಾಗೂ ಚಲನಚಿತ್ರ ರಂಗಕ್ಕೆ ಅನೇಕ ಕಥೆ ಚಿತ್ರಕಥೆಗಳನ್ನು ರಚಿಸಿರುವ ಮಹೇಶ್ ಎಸ್.ಪಿ ಈ ನಾಟಕವನ್ನು ರಚಿಸಿದ್ದಾರೆ.
ಈ ನಾಟಕಕ್ಕೆ ಓರ್ವ ಕ್ರಿಯಾಶೀಲ ಸಂಗೀತ ನಿರ್ದೇಶಕರಾದ ಸಂದೀಪ್ ಎಚ್.ಎಸ್ ರಾವ್ ರವರ ಸುಶ್ರಾವ್ಯ ಸಂಗೀತವಿರುತ್ತದೆ. ಇವರೊಂದಿಗೆ ಪ್ರಖ್ಯಾತ ಕೊಳಲು ವಾದಕರಾದ ತೇಜಸ್ವಿ ಹರಿದಾಸ್ ರವರ ಕೊಡುಗೆ ಅಪಾರ. ಬೆಳಕು ವಿನ್ಯಾಸವನ್ನು ಸುನೀಲ್ ಕುಮಾರ್ ರವರು ನಿಭಾಯಿಸಿದರೆ, ರಂಗಸಜ್ಜಿಕೆ ಹಾಗೂ ವಸ್ತ್ರ ವಿನ್ಯಾಸವನ್ನು ಕನ್ನಡ ಚಿತ್ರರಂಗದ ಪ್ರಖ್ಯಾತ ಕಲಾ ನಿರ್ದೇಶಕರಾದ ವೀಳ್ಯಾ ರಾಘವೇಂದ್ರ ಮತ್ತು ವಿಶ್ವಾಸ್ ಕಶ್ಯಪ್ ರವರು ನಿರ್ವಹಿಸಿರುತ್ತಾರೆ. ಪ್ರಸಾಧನ ವಿಜಯ್ ಬೆಣಚ ರವರದ್ದು.
ತಂಡದ ಎಲ್ಲ ಕಲಾವಿದರನ್ನು ಒಟ್ಟುಗೂಡಿಸಿ, ನಾಟಕದ ಎಲ್ಲ ವಿಭಾಗಗಳೊಂದಿಗೂ ಸಾಮರಸ್ಯ ಮೂಡಿಸಿ ಈ ನಾಟಕವನ್ನು ರಂಗದ ಮೇಲೆ ತರುತ್ತಿವುವವರು ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ, ಮುಖ್ಯವಾಗಿ ಅನೇಕ ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಶಂಕರ್ ಗಣೇಶ್.
'ರೋಮಿಯೋ ಲವ್ಸ್ ಅನಾರ್ಕಲಿ' ನಾಟಕವು ಇದೇ ತಿಂಗಳ 21 ನೇ ತಾರೀಖಿನಂದು ಜೆ.ಪಿ.ನಗರದ ರಂಗಶಂಕರದಲ್ಲಿ ಸಂಜೆ 7.30 ಕ್ಕೆ ಪ್ರದರ್ಶನಗೊಳ್ಳುತ್ತಿದೆ. ಟಿಕೆಟ್ ದರ : ರೂ. 100/-.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98458 24725
(ಒನ್ ಇಂಡಿಯಾ ಸುದ್ದಿ)












Click it and Unblock the Notifications