ಮಹಾರಾಣಿ ಕಾಲೇಜಿನಲ್ಲಿ ತಳ್ಳಾಟ, ನೂಕಾಟ, ಬಡಿದಾಟ
ಬೆಂಗಳೂರು, ಮಾರ್ಚ್ 26 : ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಾರಾಮಾರಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಪೊಲೀಸರು ಪ್ರತಿಭಟನೆಗೆ ತಡೆ ನೀಡಿ, ಕಾಲೇಜಿಗೆ ರಜೆ ಘೋಷಣೆ ಮಾಡಿದರು.
ಶೇಷಾದ್ರಿ ರಸ್ತೆಯಲ್ಲಿರುವ ಕಾಲೇಜಿನಲ್ಲಿ ಶನಿವಾರ ಪ್ರಾಂಶುಪಾಲರ ಬದಲಾವಣೆಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರಭಟನೆ ಹಿಂಸಾರೂಪಕ್ಕೆ ತಿರುಗಿತು. ವಿದ್ಯಾರ್ಥಿನಿಯರ ಗುಂಪು ಕಾಲೇಜು ಆವರಣದಲ್ಲಿಯೇ ಹೊಡೆದಾಡಿಕೊಂಡಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕಾಯಿತು.

ಪ್ರಾಂಶುಪಾಲೆ ಕೋಮಲಾ ಅವರ ಪ್ರತಿಕೃತಿಯನ್ನು ದಹಿಸಲು ಯತ್ನಿಸಿದಾಗ ವಿದ್ಯಾರ್ಥಿನಿಯರ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಪರ ಜಡೆ ಎಳೆದುಕೊಂಡು ಬಡಿದಾಡಿಕೊಂಡರು. ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನೀರು ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಏಕೆ? : ಕಾಲೇಜಿನ ಪ್ರಾಂಶುಪಾಲೆ ಕೋಮಲಾ ಅವರನ್ನು ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆ ಮಾಡಿ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಆರ್. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ವರ್ಗಾವಣೆ ಆದೇಶ ಪ್ರಕಟವಾಗಿದ್ದರೂ ಕೋಮಲಾ ಅವರು ಕಾಲೇಜಿಗೆ ಬರುತ್ತಿದ್ದಾರೆ.
ಕೋಮಲಾ ಅವರು ಕಾಲೇಜಿಗೆ ಬರುತ್ತಿರುವುದನ್ನು ಖಂಡಿಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿನಿಯರು ಕೋಮಲಾ ಅವರ ವರ್ಗಾವಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆ ವಿಕೋಪಕ್ಕೆ ಹೋಗಿ ಜಗಳ ನಡೆದಿದೆ.
ಕೋಮಲಾ ವರ್ಗಾವಣೆ : ವಿಜಯನಗರ ಪ್ರಥರ್ಮ ದರ್ಜೆ ಕಾಲೇಜಿನಿಂದ ಮಹಾರಾಣಿ ಕಾಲೇಜು ಪ್ರಾಂಶುಪಾಲರಾಗಿ ಕೋಮಲಾ ಅವರನ್ನು ವರ್ಗಾವಣೆ ಮಾಡಿ ತಾತ್ಕಾಲಿಕ ಆದೇಶ ಹೊರಡಿಸಲಾಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಅವರ ವರ್ಗಾವಣೆಯನ್ನು ರದ್ದುಗೊಳಿಸಲಾಗಿದೆ. ಕೋಮಲಾ ಅವರು ಮೊದಲು ಕಾರ್ಯನಿರ್ವಹಿಸುತ್ತಿದ್ದ ವಿಜಯನಗರ ಪ್ರಥಮ ದರ್ಜೆ ಕಾಲೇಜಿಗೆ ವಾಪಸು ಹೋಗುವಂತೆ ಸೂಚಿಸಲಾಗಿದೆ.












Click it and Unblock the Notifications