ಫೋನ್ ಕದ್ದಾಲಿಕೆ ಪ್ರಕರಣ ಬಹಿರಂಗಗೊಂಡಿದ್ದು ಆ ಒಂದು ಮೊಬೈಲ್ ಸಂಖ್ಯೆಯಿಂದ
ಬೆಂಗಳೂರು, ಸೆಪ್ಟೆಂಬರ್ 28: ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ನಿನ್ನೆಯಷ್ಟೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರೂ ಇದರಲ್ಲಿ ತಳುಕು ಹಾಕಿಕೊಂಡಿದೆ.
ಆದರೆ ಈ ಪ್ರಕರಣ ಬೆಳಕಿಗೆ ಬರಲು ಒಂದು ಮೊಬೈಲ್ ಸಂಖ್ಯೆ ಕಾರಣವಾಗಿದೆ. ಅದೇ 9880300007. ಈ ಮೊಬೈಲ್ ಸಂಖ್ಯೆಯಿಂದಲೇ ಇಡೀಯ ಪ್ರಕರಣ ಬೆಳಕಿಗೆ ಬಂದಿದ್ದು ಎನ್ನುತ್ತವೆ ಪೊಲೀಸ್ ಮೂಲಗಳು.
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬ ಈ ಫೋನ್ ಅನ್ನು ಬಳಸುತ್ತಿದ್ದ. ಈ ಸಂಖ್ಯೆಗೆ ಕರೆ ಮಾಡಿದರೆ ಟ್ರೂ ಕಾಲರ್ನಲ್ಲಿ ಎಫ್ಎ ಎಂದು ಬರುತ್ತದೆ. ಇದನ್ನು ಫರಾಜ್ ಅಹ್ಮದ್ ಎಂದು ಸಿಬಿಐ ಗುರುತಿಸಿದೆ.

9880300007 ಸಂಖ್ಯೆಯ ಮೇಲೂ ನಿಗಾ ಇಡಲಾಗಿತ್ತು
ಜನರಿಗೆ ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡಿದ್ದ ಇಂಜಾಜ್ ಇಂಟರ್ನ್ಯಾಷನಲ್ ಸಂಸ್ಥೆ ಮಾಲೀಕ ಮಿಸ್ಬಾಉದ್ದೀನ್ ಮೇಲೆ ನಿಗಾ ಇಡಲು ಪೊಲೀಸರು ಆತನ ಕರೆಗಳ ಮೇಲೆ ನಿಗಾ ಇಟ್ಟಿದ್ದರು. ಆಗಲೇ 9880300007 ಸಂಖ್ಯೆಯ ಮೇಲೂ ನಿಗಾ ಇಡಲಾಗಿತ್ತು.

ಭಾಸ್ಕರ್ ರಾವ್ ಸಂಭಾಷಣೆ ಹೊರಕ್ಕೆ
ಈ ಮೊಬೈಲ್ ಸಂಖ್ಯೆಯ ಕರೆಗಳ ಮೇಲೆ ನಿಗಾ ಇಡಲಾಗಿದ್ದಾಗಲೇ ಈಗಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಡೆಸಿರುವ ಸಂಭಾಷಣೆ ಬಯಲಾಗಿದೆ. ಇದನ್ನು ಪೆನ್ಡ್ರೈವ್ ಒಂದಕ್ಕೆ ರೆಕಾರ್ಡ್ ಮಾಡಿಕೊಳ್ಳಲಾಗಿದೆ.

ರೆಕಾರ್ಡ್ ಮಾಡಿದ್ದ ಸಂಭಾಷಣೆ ಟಿವಿ ಚಾನೆಲ್ಗೆ
ರೆಕಾರ್ಡ್ ಮಾಡಿಕೊಂಡ ಸಂಭಾಷಣೆಯನ್ನು ಆಗಿನ ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಆಗಸ್ಟ್ 2 ರಂದು ಟಿವಿ ಚಾನೆಲ್ ಒಂದಕ್ಕೆ ತಲುಪಿಸಲಾಗಿದೆ ಎನ್ನಲಾಗುತ್ತಿದೆ. ಇದರ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.

ಹಲವು ಅಧಿಕಾರಿಗಳನ್ನು ಪ್ರಶ್ನಿಸಿರುವ ಸಿಬಿಐ
ಪ್ರಕರಣ ಸಂಬಂಧ ಸಿಬಿಐ ತಂಡ ಈಗಾಗಲೇ ಸೈಬರ್ ಕ್ರೈಂ ತಾಂತ್ರಿಕ ವಿಭಾಗದ ಇನ್ಸ್ಪೆಕ್ಟರ್ಗಳಾದ ಮಿರ್ಜಾ ಅಲಿ, ಮಾಲತೇಶ್, ಸಿಸಿಬಿ ಎಸಿಪಿ ವೇಣುಗೋಪಾಲ್ ಒಳಗೊಂಡಂತೆ ಅನೇಕ ಅಧಿಕಾರಿಗಳನ್ನು ಪ್ರಶ್ನೆ ಮಾಡಿದೆ. ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನೂ ನಿನ್ನೆ ಪ್ರಶ್ನೆ ಮಾಡಲಾಗಿದೆ.












Click it and Unblock the Notifications