"ಶ್ರೀರಾಮನ ನಾಡಿನಲ್ಲೇ ಪೆಟ್ರೋಲ್ ದರ 94 ರೂಪಾಯಿ ಯಾಕೆ?"
ಬೆಂಗಳೂರು, ಮಾರ್ಚ್ 15: ಪೆಟ್ರೋಲ್, ಡೀಸೆಲ್ ದರವು ಶ್ರೀರಾಮನ ನಾಡು ಎನಿಸಿರುವ ಭಾರತದಲ್ಲೇ ಶತಕ ಬಾರಿಸಿದೆ. ಸರ್ಕಾರವು ಬೆಲೆ ಏರಿಕೆಗೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿರುವ ಪ್ರತಿಪಕ್ಷ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸೀತೆಯ ನಾಡು ನೇಪಾಳದಲ್ಲಿ ಪೆಟ್ರೋಲ್ ಬೆಲೆ 53 ರೂಪಾಯಿ ಆಗಿದೆ. ರಾವಣನ ನಾಡು ಶ್ರೀಲಂಕಾದಲ್ಲಿ ಪೆಟ್ರೋಲ್ ದರ 57 ರೂಪಾಯಿ ಇದೆ ಎಂದರು.
ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ಶತಕದ ಗಡಿ ದಾಟಿ ಹೋಗಿದೆ. ಶ್ರೀರಾಮನ ನಾಡು ಭಾರತದಲ್ಲಿ ಪೆಟ್ರೋಲ್ ದರವು 94 ರೂಪಾಯಿ ಆಗಿರುವುದು ಏಕೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ:
ಕರ್ನಾಟಕದಲ್ಲಿ ಕೊರೊನಾವೈರಸ್ ಎರಡನೇ ಅಲೆ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಇಂಥ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ಘೋಷಣೆಯಾಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಮತ್ತೊಂದು ಬಾರಿ ಲಾಕ್ ಡೌನ್ ಘೋಷಣೆ ಮಾಡಿದರೆ ಬಹಳ ಕಷ್ಟವಾಗಲಿದೆ. ಅದಕ್ಕೂ ಮೊದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.












Click it and Unblock the Notifications