ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರಿನ ವಿವಿಧ ಭಾಗಗಳಿಂದ ಹೆಬ್ಬಾಳ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಉದ್ದೇಶಿಸಿದ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಯೋಜನೆಯ ಸಾಧ್ಯತೆ-ಬಾಧ್ಯತೆಗಳ ವಿವರಗಳು ಇಲ್ಲಿವೆ...
ವಿಮಾನ ನಿಲ್ದಾಣದವರೆಗೆ ಪ್ರಯಾಣಿಸುವವರು, ಹೆಬ್ಬಾಳದವರೆಗೆ ತೀವ್ರ ಟ್ರಾಫಿಕ್ ಸಮಸ್ಯೆ ಎದುರಿಸುತ್ತಾರೆ. ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಬಸವೇಶ್ವರ ಸರ್ಕಲ್ (ಚಾಲುಕ್ಯ ವೃತ್ತ) ನಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿದೆ.
ಕಾಂಕ್ರೀಟ್ ಮೇಲ್ಸೇತುವೆಗಳಿಗೆ ಹೊಲಿಸಿದ್ರೆ ಉಕ್ಕಿನ ಮೇಲ್ಸೇತುವೆ ನಿರ್ವಹಣೆಗೆ ಹೆಚ್ಚು ವೆಚ್ಚ ತಗುಲಲಿದೆ. ಆದ್ರೆ ಸ್ಟೀಲ್ ಬ್ರಿಡ್ಜ್ ಗೆ 4 ಎಕರೆ ಭೂ ಸ್ವಾಧೀನ ಸಾಕಾಗಲಿದೆ. ಇದ್ರಲ್ಲಿ 3 ಎಕರೆ ಸರ್ಕಾರಿ ಭೂಮಿಯನ್ನೇ ಬಳಸಿಕೊಳ್ಳಲು ಪ್ಲಾನ್ ಮಾಡಲಾಗಿದೆ. ಸರ್ಕಾರದ ಸಮರ್ಥನೆ ಈ ಕೆಳಗಿನಂತಿದೆ.
* ಯೋಜನೆ ಪರಿಕಲ್ಪನೆ 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ರೂಪಿಸಲಾಗಿತ್ತು.[ಟೆಂಡರ್ ಗೊಂದಲಕ್ಕೆ ಜಾರ್ಜ್ ಕೊಟ್ಟ ಉತ್ತರವೇನು?]
* 2014-15 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಸಿದ್ದರಾಮಯ್ಯ ಅವರು ಯೋಜನೆಯ ಅನುಷ್ಠಾನ ಕುರಿತಂತೆ ಘೋಷಿಸಿದ್ದರು.
* ಬೆಂಗಳೂರು ದಾರ್ಶನಿಕ ಗುಂಪಿನ (Bengaluru Vision Group) 120 ಕಿ. ಮೀ ಎಲಿವೇಟೆಡ್ ಕಾರಿಡಾರ್ ನ ಒಂದು ಭಾಗವಾಗಿ ಈ ಉಕ್ಕಿನ ಸೇತುವೆ ಯೋಜನೆಯನ್ನು ಸೇರಿಸಿಕೊಂಡಿದ್ದಾರೆ.[6 ಎಲಿವೇಟೆಡ್ ಕಾರಿಡಾರ್, ಬಿಡದಿಯಲ್ಲಿ ಸ್ಮಾರ್ಟ್ ಸಿಟಿ: ಜಾರ್ಜ್]
* ಸಾರ್ವಜನಿಕ ಅಭಿಪ್ರಾಯ ಪಡೆದಾಗ ಶೇ 73ರಷ್ಟು ಮಂದಿ ಯೋಜನೆಯನ್ನು ಬೆಂಬಲಿಸಿದ್ದಾರೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಟೆಂಡರ್ ವಿವರ, ಯೋಜನೆ ವೆಚ್ಚ, ತಜ್ಞರ ಅಭಿಪ್ರಾಯ ಸೇರಿದಂತೆ ಇನ್ನೊಂದಿಷ್ಟು ವಿವರ ಮುಂದಿದೆ...

ಯಾವ ಸಂಸ್ಥೆಗೆ ಟೆಂಡರ್
ಸೇತುವೆ ನಿರ್ಮಾಣವಾದ ನಂತರ ಬಸವೇಶ್ವರ ವೃತ್ತದಿಂದ ಲೀ ಮೆರಿಡಿಯನ್ ಹೊಟೆಲ್, ಮೇಖ್ರಿ ಸರ್ಕಲ್ ಮುಖಾಂತರ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗೆ ಸುಮಾರು 7 ಕಿ.ಮೀ ಉದ್ದದ 6 ಪಥದ ಉಕ್ಕಿನ ಸೇತುವೆಯಲ್ಲಿ ಸರಾಗವಾಗಿ ಸಾಗಬಹುದು. ಮೆಸರ್ಸ್ STUP ಕನ್ಸಲ್ಟಂಟ್ಸ್ ಪ್ರೈ ಲಿಮಿಟೆಡ್ ಗೆ ಟೆಂಡರ್ ಅಂತಿಮವಾಗಿದೆ. 1791 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ.

ಯೋಜನೆ ವೆಚ್ಚ ಹೆಚ್ಚಾಗಿದ್ದು ಏಕೆ?
ಪ್ರಾರಂಭದಲ್ಲಿ 1,300 ಕೋಟಿ ರೂ. ಯೋಜನಾ ವೆಚ್ಚ ಎಂದು ಅಂದಾಜಿಸಲಾಗಿತ್ತು. ಆದ್ರೆ 500 ಕೋಟಿ ರೂ. ಹೆಚ್ಚಳ ಮಾಡಿದ್ದು, 1791 ಕೋಟಿ ರೂ.ಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಉಕ್ಕಿನ ದರ ಗಣನೀಯವಾಗಿ ಕಡಿಮೆಯಾದರೂ (ಪ್ರತಿ ಟನ್ ಉಕ್ಕಿಗೆ 46 ಸಾವಿರ ರು ನಷ್ಟಿದ್ದ ದರ ಈಗ 40 ಸಾವಿರ ರುಗಳಿಗೆ ಇಳಿದಿದೆ) ಈ ಮಾಹಿತಿಯಲ್ಲಿ ಯೋಜನಾ ವೆಚ್ಚ 1,350 ಕೋಟಿ ರು ಎಂದಿದೆ. ಆದರೆ, ಯೋಜನಾ ವೆಚ್ಚ 1,900 ಕೋಟಿ ರು ದಾಟುವ ಅಂದಾಜಿದೆ

ಯಾರ ನಿರ್ಮಾಣ ಜವಾಬ್ದಾರಿ
ಸುಮಾರು 6,687 ಮೀಟರ್ ಉದ್ದದ ಉಕ್ಕಿನ ಸೇತುವೆ ನಿರ್ಮಾಣದ ಹೊಣೆ ಹಾಗೂ ಹಣಕಾಸಿನ ಜವಾಬ್ದಾರಿಯನ್ನು ಬಿಡಿಎ ಹೊತ್ತುಕೊಂಡಿದೆ.ಮೆಸರ್ಸ್ ಎಸ್ಟಿಯುಪಿ ಕನ್ಸಲ್ಟಂಟ್ಸ್ ಪ್ರೈ ಲಿಮಿಟೆಡ್ ಕಾಮಗಾರಿ ವರದಿಯನ್ನು ಬಿಡಿಎ ಪರಿಶೀಲಿಸಲಿದೆ. ಯೋಜನೆಗೆ ತಗುಲುವ ತೆರಿಗೆ ವ್ಯಾಟ್ ಇತ್ಯಾದಿಯನ್ನು ಕಾಮಗಾರಿ ಟೆಂಡರ್ ಪಡೆದ ಸಂಸ್ಥೆ ಕಟ್ಟಲಿದೆ. ಕಾಂಗ್ರೆಸ್ ಸರ್ಕಾರದ ಅವಧಿಯೊಳಗೆ ಯೋಜನೆ ಪೂರ್ಣಗೊಳ್ಳಬೇಕು ಎಂಬುದು ಸರ್ಕಾರ ಹಾಕಿರುವ ಕಂಡೀಷನ್.

ಮರಗಳ ಮಾರಣ ಹೋಮ
ಸ್ಯಾಂಕಿ ಕೆರೆ ಪಕ್ಕದ ರಸ್ತೆಯಲ್ಲಿ ಚಲಿಸುವಾಗ ಕಾಣುವ ಪ್ರಕೃತಿ ಸೌಂದರ್ಯ ಈ ಉದ್ದೇಶಿತ ಉಕ್ಕಿನ ಮೇಲ್ಸೇತುವೆ ಯೋಜನೆಯಿಂದ ಮರೆಯಾಗಲಿದೆ. ಅಲ್ಲದೇ ಸುಮಾರು 812 ಮರಗಳು ಬ್ರಿಡ್ಜ್ ನಿರ್ಮಾದಲ್ಲಿ ನೆಲಕ್ಕುರುಳಲಿವೆ.ಆದರೆ, 60,000 ಸಸಿಗಳನ್ನು ನೆಡುವ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಟ್ರಾಫಿಕ್ ಸಮಸ್ಯೆ ಇಲ್ಲದಿರುವಾಗ ವಾಯು ಹಾಗೂ ಶಬ್ದ ಮಾಲಿನ್ಯವೂ ತಗ್ಗಲಿದೆ ಎನ್ನಲಾಗಿದೆ.

ಸಂಚಾರ ದಟ್ಟಣೆಯ ಹೊರೆ ನಿಭಾಯಿಸಲು ಸೂಕ್ತವಲ್ಲ
ಸಂಚಾರ ದಟ್ಟಣೆಯ ಹೊರೆಯನ್ನು ನಿಭಾಯಿಸಲು ಇದು ಸೂಕ್ತವಾದ ಯೋಜನೆಯಲ್ಲ. ಇಷ್ಟು ಉದ್ದದ ಉಕ್ಕಿನ ಸೇತುವೆ ಯಶಸ್ವಿಯಾದ ಪುರಾವೆ ಇಲ್ಲ. ಮೇಲ್ಸೇತುವೆ ನಿರ್ಮಾಣದಿಂದ ಬಸವೇಶ್ವರ ವೃತ್ತದಲ್ಲಿ ದಟ್ಟಣೆ ಸಮಸ್ಯೆ ಉಲ್ಬಣಗೊಳ್ಳಲಿದೆ. ಹಸಿರಿನ ಹೊದಿಕೆ, ಬಯಲು ಪ್ರದೇಶವನ್ನು ಕಸಿದುಕೊಳ್ಳುವ ಜತೆಗೆ ನಗರದ ಸೌಂದರ್ಯಕ್ಕೂ ಧಕ್ಕೆ. ಒಟ್ಟಾರೆ 8 ಲೆನ್ ಗಳ ಮೂಲಕ ಹೆಬ್ಬಾಳ ಬಳಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ ಎಂದು ಸಂಚಾರ ವ್ಯವಸ್ಥೆ ತಜ್ಞ ಎಂಎನ್ ಶ್ರೀಹರಿ ಅಭಿಪ್ರಾಯಪಟ್ಟಿದ್ದಾರೆ.

ಯೋಜನೆಗೆ ಸಾವಿರಾರು ಕೋಟಿ ರು ವ್ಯರ್ಥ
ಅಶ್ವಿನ್ ಮಹೇಶ್ : ಸಾವಿರಾರು ಕೋಟಿ ರು ಯೋಜನೆಗೆ ಸುರಿಯಲಾಗುತ್ತಿದೆ. ಆ ಮೊತ್ತದಲ್ಲಿ ನಾಲ್ಕು ಸಾವಿರ ಬಸ್ಗಳನ್ನು ಖರೀದಿ ಮಾಡಬಹುದು. ಇದರಿಂದ 1.2 ಲಕ್ಷ ಕಾರುಗಳು ರಸ್ತೆಯಿಂದ ಆಚೆ ಉಳಿಯಲಿವೆ. ಈ ಯೋಜನೆಯಿಂದ 10 ನಿಮಿಷದ ಸಮಯ ಉಳಿಸಬಹುದು ಅಷ್ಟೇ. ಹೆಬ್ಬಾಳದಲ್ಲಿ ಅಥವಾ ಬಸವೇಶ್ವರ ವೃತ್ತದ ಬಳಿ ಸಂಚಾರ ದಟ್ಟಣೆ ಆಗುವುದಿಲ್ಲ ಎಂಬುದನ್ನು ಸಾಬೀತುಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಚಾಲುಕ್ಯ ವೃತ್ತದ ಬಳಿ ಗೊಂದಲ ನಿರ್ಮಾಣ
ಬಿಡಿಎ ಯೋಜನೆಯಿಂದಾಗಿ ಚಾಲುಕ್ಯ ವೃತ್ತಕ್ಕೆ ಹೊಂದಿಕೊಂಡಂತೆ 3 ಮೇಲ್ಸೇತುವೆ ಹಾಗೂ 2 ಅಂಡರ್ ಪಾಸ್ ಗಳು ಬರಲಿವೆ. ರಾಜಭವನ ಕಡೆಯಿಂದ ರೇಸ್ ಕೋರ್ಸ್ ರಸ್ತೆ ಹಾಗೂ ಅರಮನೆ ರಸ್ತೆ ಕಡೆಗೆ ಸಂಚಾರ ಮುಕ್ತವಾಗಬೇಕಿದೆ. ಇದಕ್ಕಾಗಿ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಇನ್ನೊಂದು ಮಿಲ್ಲರ್ ರಸ್ತೆಯಿಂದ ಅರಮನೆ ರಸ್ತೆ ಕಡೆ ಅಂಡರ್ ಪಾಸ್ ಆಗಲಿದೆ. ಇದೆಲ್ಲವೂ ವಾಹನ ಸವಾರರಿಗೆ ಗೊಂದಲ ಉಂಟು ಮಾಡಲಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸ್ ಇಲಾಖೆಯನ್ನಾಗಲಿ Directorate of Urban Land Transport (DULT) ಯನ್ನಾಗಲಿ ಬಿಡಿಎ ಇನ್ನೂ ಸಂಪರ್ಕಿಸಿ ಸಲಹೆ ಕೇಳಿಲ್ಲ.












Click it and Unblock the Notifications