ರಾಮಾಯಣ-ಮಹಾಭಾರತದಲ್ಲಿ ಹಲವು ಕಟ್ಟುಕತೆಗಳಿವೆ: ಬೈರಪ್ಪ
ಬೆಂಗಳೂರು, ಜೂನ್ 27: ರಾಮಾಯಣ-ಮಹಾಭಾರತದಲ್ಲಿ ಹಲವಾರು ಕಟ್ಟುಕತೆಗಳಿವೆ, ಆದರೆ ಅವು ಗಹನವಾದ ಅರ್ಥಗಳನ್ನು ಒಳಗೊಂಡಿವೆ ಎಂದು ಖ್ಯಾತ ಸಾಹಿತಿ ಎಸ್.ಎಲ್.ಬೈರಪ್ಪ ಹೇಳಿದ್ದಾರೆ.
ಇಸ್ಕಾನ್ ಮತ್ತು ಭಾರತೀಯ ವಿದ್ಯಾಭವನ ಆಯೋಜಿಸಿದ್ದ 'ಮಹಾಭಾರತದ ಸಂದೇಶ' ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಮಯ, ಸ್ಥಳಗಳನ್ನು ಪರಿಶೀಲಿಸಿ, ತಾಳೆ ಮಾಡಿ ನೋಡಿದಲ್ಲಿ ರಾಮಾಯಣ, ಮಹಾಭಾರತದಲ್ಲಿ ಹಲವು ಕಟ್ಟುಕತೆಗಳಿವೆ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.
31 ವರ್ಷ ವಯಸ್ಸಿನ ಭೀಮ, 80 ವರ್ಷದ ಜರಾಸಂಧನ ಜೊತೆ ಮೂರು ದಿನ ಯುದ್ಧ ಮಾಡಲು ಸಾಧ್ಯವೆ, ಗುಡ್ಡಗಾಡು ಪ್ರದೇಶವಾದ ವಿರಾಟ ನಗರದಲ್ಲಿ ರಥದಲ್ಲಿ ತೆರಳಿ ಯುದ್ಧಮಾಡಲು ಆಗುತ್ತದೆಯೆ? ವಿಪರೀತ ಚಳಿ ಇರುವ ಬದರಿನಾಥದಲ್ಲಿ ಕೂತು ವಯಸ್ಸಾದ ವ್ಯಾಸರು ಮಹಾಭಾರತ ಬರೆಯಲು ಸಾಧ್ಯವೆ ಎಂಬ ಪ್ರಶ್ನೆಗಳು ಏಳದೇ ಇರುತ್ತವೆಯೇ? ಎಂದು ಬೈರಪ್ಪ ಅವರು ಪ್ರಶ್ನೆ ಮಾಡಿದರು.

ಸೋಲು, ಅವಮಾನವನ್ನು ಸಹಿಸುವ ನಮ್ಮ ಜನ, ಹೆಂಡತಿಯ ಮೇಲೆ ಕಣ್ಣು ಬಿದ್ದರೆ ಸಹಿಸಲಾರರು, ಈ ಸಂಸ್ಕೃತಿ ಬಂದಿರುವುದು ಭೀಮನಿಂದ ಎಂದು ಪ್ರತಿಪಾಧಿಸಿದ ಬೈರಪ್ಪನವರು, ಜೂಜು ವ್ಯಸನಿ ಧರ್ಮರಾಯನನ್ನು ತಮ್ಮಂದಿರು ವಿರೋಧಿಸಲಿಲ್ಲ, ಅದೇ ಸಂಸ್ಕೃತಿ ಈಗಲೂ ಇದೆ, ಕುಟುಂಬದಲ್ಲಿ ಅಣ್ಣನಿಗೆ ತಂದೆಯ ನಂತರದ ಸ್ಥಾನವಿದೆ ಎಂದರು.
ಇಷ್ಟೆಲ್ಲಾ ಕಟ್ಟುಕತೆಗಳ ಹೊರತಾಗಿಯೂ ಎರಡೂ ಮಹಾಕಾವ್ಯಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಮ್ಮ ಸಂಸ್ಕೃತಿಯ ಮೂಲವನ್ನು ಇಲ್ಲಿಂದಲೇ ಕಟ್ಟಿಕೊಂಡಿದ್ದೇವೆ, ಕಟ್ಟುಕತೆಗಳನ್ನು ಗಹನವಾದ ಅರ್ಥವಿರುತ್ತದೆ, ನೈಜತೆಗೆ ಕಟ್ಟುಬಿದ್ದರೆ ಮೌಲ್ಯಗಳನ್ನು ಪ್ರತಿಪಾದಿಸುವಾಗ ಅಷ್ಟೋಂದು ಆಳಕ್ಕೆ ಇಳಿಯಲಾಗದು ಎಂದರು.












Click it and Unblock the Notifications