'ಮಹಿಳೆಗೆ ಸ್ವಾತಂತ್ರ್ಯದೊಂದಿಗೆ ಸ್ವಾವಲಂಬಿ ಬದುಕು ಅಗತ್ಯ'
ಬೆಂಗಳೂರು, ಸೆಪ್ಟೆಂಬರ್, 01: ಸ್ವಾತಂತ್ರ್ಯದ ಸದುಪಯೋಗವನ್ನು ಪಡೆದುಕೊಂಡು ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಕಿವಿಮಾತು ಹೇಳಿದ್ದಾರೆ.
ಬೆಂಗಳೂರಿನ ಪೂರ್ವದ ಬಾಣಸವಾಡಿ ಸಮೀಪದ ನಾರಾಯಣಪುರದ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಗುರುವಾರ, ಸೆಪ್ಟೆಂಬರ್ 1 ರಂದು ಹಮ್ಮಿಕೊಂಡಿದ್ದ 'ಕನ್ನಡ ಸಾಹಿತ್ಯದಲ್ಲಿ ಮಹಿಳಾ ಚಿಂತನೆಯ ಆಯಾಮಗಳು' ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. [ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ತೆರೆದುಕೊಂಡ ಪುಸ್ತಕ ಭಂಡಾರ]
ಕಾಲ ಬದಲಾಗಿದೆ. ಇದು ಭಾರತದ ಸ್ತ್ರೀಯರ ಜೀವನಕ್ಕೂ ಅನ್ವಯವಾಗುತ್ತದೆ. ಸಂಸಾರ, ಕುಟುಂಬ, ಗಂಡ, ಮಡಿವಂತಿಕೆ, ಮಕ್ಕಳು ಎಂಬ ಸಂಬಂಧಗಳನ್ನೆಲ್ಲ ಮೀರಿ ಮಹಿಳೆ ಬೆಳದು ನಿಂತಿದ್ದಾಳೆ. ಇವೆಲ್ಲ ಇಲ್ಲದೆಯೂ ಬದುಕಬಲ್ಲೆ ಎಂದು ಆಕೆ ಸಾಬೀತು ಮಾಡಿದ್ದಾಳೆ. ಅಂದ ಮಾತ್ರಕ್ಕೆ ಕೌಟುಂಬಿಕ ಸಂಬಂಧವನ್ನು ಕಡಿದುಕೊಳ್ಳಬೇಕು ಎಂಬ ಅರ್ಥವಲ್ಲ ಎಂದು ಮಾಲತಿ ಪಟ್ಟಣಶೆಟ್ಟಿ ಹೇಳಿದರು.[ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಜ್ಞಾನದ ಹರಿವು]
ವಿಚಾರ ಸಂಕಿರಣ ಉದ್ಘಾಟನೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಫಾದರ್ ಅಗಸ್ಟಿನ್ ಜಾರ್ಜ್, ಕನ್ನಡ ವಿಭಾಗದ ಸರ್ವೇಶ್ ಬಂಟಹಳ್ಳಿ, ಎಂ. ನಾರಾಯಣಸ್ವಾಮಿ, ಎನ್. ಚಂದ್ರಶೇಖರ್ ಮತ್ತು ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು ಭಾಗವಹಿಸಿದ್ದರು.

ಕನ್ನಡ ವಿಭಾಗದ ಕಾರ್ಯಕ್ರಮ
ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗ ಕಳೆದ ನಾಲ್ಕು ವರ್ಷದಿಂದ ವಿಚಾರ ಸಂಕಿರಣ ಹಮ್ಮಿಕೊಂಡು ಬರುತ್ತಿದೆ. ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳುತ್ತಿದ್ದ ಕಾಲೇಜಿನಲ್ಲಿ ಇದೀಗ ರಾಷ್ಟ್ರಮಟ್ಟದ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.

ವಿವಿಧ ಜಿಲ್ಲೆಯ ಉಪನ್ಯಾಸಕರು
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಸುಮಾರು 100ಕ್ಕೂ ಅಧಿಕ ಉಪನ್ಯಾಸಕರು, ಸಾಹಿತ್ಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇತಿಹಾಸದ ಉಲ್ಲೇಖ
12 ನೇ ಶತಮಾನದ ಬಸವಯುಗ, ಅಕ್ಕಮಹಾದೇವಿ, ದಾಸ ಸಾಹಿತ್ಯ, ಸಂಚಿ ಹೊನ್ನಮ್ಮಳ 'ಹದಿಬದೆಯ ಧರ್ಮ' ಎಲ್ಲದರಲ್ಲೂ ಹೆಣ್ಣು ಎದುರಿಸುತ್ತಿದ್ದ ಸಮಸ್ಯೆ ಸಾಹಿತ್ಯವಾಗಿ ಹೊರಹೊಮ್ಮಿತು. ಅನುಭವ ಮಂಟಪದಲ್ಲಿ ನಡೆದ ಚರ್ಚೆ ಉತ್ಕೃಷ್ಟ ಸಾಹಿತ್ಯಕ್ಕೆ ಬುನಾದಿ ಹಾಕಿತು ಎಂದು ಪಟ್ಟಣಶೆಟ್ಟಿ ಹೇಳಿದರು.

ಹೆಣ್ಣು ಮಕ್ಕಳ ಸ್ಥಿತಿಗತಿ
ಆಧುನಿಕ ಸ್ತ್ರೀ ಪರವಾದ ಚಿಂತನೆಗಳು, ಅವರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಭಾರತದಲ್ಲಿ ರಾಜಾರಾಮ್ ಮೋಹನ್ ರಾಯ್ ಸತಿ ಪದ್ಧತಿ ನಿಷೇಧಕ್ಕೆ ಹೋರಾಟ ಮಾಡಿದಾಗಿನಿಂದ ಆರಂಭವಾಯಿತು ಎಂಬ ವಿಚಾರವನ್ನು ಮಾಲತಿ ಪಟ್ಟಣ ಶೆಟ್ಟಿ ಮುಂದಿಟ್ಟರು.

ಮಹಿಳಾ ಸಾಹಿತಿಗಳು
ಕ್ರಿಸ್ತ ಶಕ 1900 ರ ನಂತರ ಮಹಿಳೆಯರೇ ಮುಂದೆ ನಿಂತು ಸಾಹಿತ್ಯವನ್ನು ಬರೆಯಲು ಆರಂಭಿಸಿದರು. ಅರುಣೋದಯ ಸಾಹಿತ್ಯ ಎಂಬ ಪರಂಪರೆಗೆ ಇಲ್ಲಿ ಆರಂಭ ಸಿಕ್ಕಿತು. ತಿರುಮಲಾಂಬ ಅವರಿಂದ ಆರಂಭವಾದ ಮಹಿಳಾ ಸಾಹಿತ್ಯ ಮುಂದುವರಿದುಕೊಂಡು ಬಂದಿದೆ ಎಂದು ಪಟ್ಟಣಶೆಟ್ಟಿ ಅಭಿಪ್ರಾಯ ಪಟ್ಟರು.

ವರ್ಜೀನಿಯಾ ವೂಲ್ಫ್
'ಒಬ್ಬ ಮಹಿಳೆ ಸಾಹಿತ್ಯ ರಚನೆಗೆ ತೊಡಗಬೇಕು ಎಂದರೆ ಆಕೆ ಅವಳದ್ದೇ ಆದ ಹಣ ಮತ್ತು ಸ್ವಂತ ಕೋಣೆ ಹೊಂದಿರಬೇಕು' ಎಂಬ ಆಂಗ್ಲ ಬರಹಗಾರ್ತಿ ವರ್ಜೀನಿಯಾ ವೂಲ್ಫ್ ಹೇಳಿಕೆ ಎಂದಿಗೂ ಪ್ರಸ್ತುತ ಎನ್ನುತ್ತಾ ಪಟ್ಟಣ ಶೆಟ್ಟಿ ಸದ್ಯದ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಿದರು.












Click it and Unblock the Notifications