ಎಸ್ಎಂ ಕೃಷ್ಣ ಭೇಟಿಯಾದ ನಂದನ್ ನಿಲೇಕಣಿ!
ಬೆಂಗಳೂರು. ಜ.3 : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಧಾರ್ ಪ್ರಾಧಿಕಾರ ಮುಖ್ಯಸ್ಥ ನಂದನ್ ನಿಲೇಕಣಿ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಗುರುವಾರ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ನಿಲೇಕಣಿ ಅವರು ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ.
ನಂದನ್ ನಿಲೇಕಣಿ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಅಂತಿಮ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಹಿಸಲಾಗಿದೆ. [ನಂದನ್ ನಿಲೇಕಣಿ ಸ್ಪರ್ಧೆ ಬಹುತೇಕ ಖಚಿತ]

ಈ ಬೆಳವಣಿಗೆಗಳ ನಡುವೆಯೇ ನಂದನ್ ನಿಲೇಕಣಿ ಗುರುವಾರ ಎಸ್.ಎಂ.ಕೃಷ್ಣ ಅವರ ಸದಾಶಿವನಗದ ನಿವಾಸಕ್ಕೆ ತೆರಳಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ರಾಜಕೀಯ ಪ್ರವೇಶ ಮಾಡುವ ಆಲೋಚನೆಯಲ್ಲಿರುವ ನಿಲೇಕಣಿ ಅವರು ಈ ಕುರಿತು ಕೃಷ್ಣ ಅವರೊಂದಿಗೆ ಚರ್ಚಿಸಿದ್ದಾರೆ. [ಅನಂತ್ ಕುಮಾರ್ ವಿರುದ್ಧ ಐಟಿ ದಿಗ್ಗಜರು ಕಣಕ್ಕೆ?]
ಎಸ್.ಎಂ.ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ನಂದನ್ ನಿಲೇಕಣಿ ಇನ್ಫೋಸಿಸ್ ನಲ್ಲಿದ್ದರು. ಬೆಂಗಳೂರು ಅಜೆಂಡಾ ಟಾಸ್ಕ್ ಪೋರ್ಸ್ ಮುಖ್ಯಸ್ಥರಾಗಿದ್ದರು. ಆದ್ದರಿಂದ ಕೃಷ್ಣ ಮತ್ತು ನಿಲೇಕಣಿ ಅವರ ನಡುವೆ ಉತ್ತಮ ಬಾಂಧವ್ಯವಿದೆ. ಆದ್ದರಿಂದ ನಿಲೇಕಣಿ ರಾಜಕೀಯ ಪ್ರವೇಶದ ಕುರಿತು ಕೃಷ್ಣ ಅವರ ಸಲಹೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. [ಪರಮೇಶ್ವರ್, ನಿಲೇಕಣಿ ಭೇಟಿ!]
ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ನಿಲೇಕಣಿ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ರಾಜಕೀಯ ಪ್ರವೇಶದ ಕುರಿತು ಚರ್ಚೆ ನಡೆಸಿದ್ದರು. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಒಟ್ಟಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ನಂದನ್ ನಿಲೇಕಣಿ ವೇದಿಕೆ ಸಿದ್ದಮಾಡಿಕೊಳ್ಳುತ್ತಿರುವುದು ನಿಜ.












Click it and Unblock the Notifications