ಕ್ವಾರೆಂಟೈನ್ ಮುಗಿಸಿದ ಸಚಿವರು ವಿಧಾನಸೌಧದಲ್ಲಿ ಹೇಳಿದ್ದೇನು?
ಬೆಂಗಳೂರು, ಮೇ.07: ನೊವೆಲ್ ಕೊರೊನಾ ವೈರಸ್ ಸೋಂಕು ತಗುಲುವ ಸಾಧ್ಯತೆಗಳಿಲ್ಲದಿದ್ದರೂ ಜನರಿಗೆ ತಪ್ಪು ಸಂದೇಶ ರವಾನೆ ಆಗಬಾರದು ಎಂಬ ಉದ್ದೇಶದಿಂದ ಸ್ವಯಂಪ್ರೇರಿತ ಕ್ವಾರಂಟೈನ್ ಅವಧಿ ಮುಗಿಸಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕ್ವಾರಂಟೈನ್ ಅವಧಿಯ ನಂತರ ಮೊದಲ ಬಾರಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಕ್ವಾರಂಟೈನ್ ಒಂದು ಹೊಸ ಅನುಭವ ನೀಡಿದ್ದು ಕೆಲಸ ಮಾಡಲು ಮತ್ತಷ್ಟು ಹೊಸ ಚೈತನ್ಯ ನೀಡಿದೆ. ಇನ್ನು ಮುಂದೆ ಎರಡುಪಟ್ಟು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕ್ವಾರೆಂಟೈನ್ ಅವಧಿ ಅಂತ್ಯ
ವಿದೇಶದಲ್ಲಿ ಸಿಲುಕಿರುವ ಕನ್ನಡಿಗರು ಶೀಘ್ರದಲ್ಲೇ ನಗರಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಸರ್ಕಾರ ಲಾಕ್ ಡೌನ್ ನಿಯಮಗಳಲ್ಲಿ ಸಡಿಲ ಮಾಡಿದೆ ಎಂದರೆ ಕೊರೊನಾ ಇಲ್ಲವೆಂದು ಅರ್ಥವಲ್ಲ. ವೈರಸ್ ಜೊತೆಯಲ್ಲಿ ನಾವು ಜೀವನ ನಡೆಸಬೇಕಾದ ಅನಿವಾರ್ಯತೆಯಿದೆ.
ಸರ್ಕಾರದ ಮಾರ್ಗಸೂಚಿ ಪಾಲನೆಗೆ ಮನವಿ:
ಸರ್ಕಾರದ ಮಾರ್ಗಸೂಚಿಗಳನ್ನು ಜನರು ಚಾಚೂ ತಪ್ಪದೆ ಪಾಲಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡರು. ಸರ್ಕಾರ ಉತ್ತಮವಾದ ಆರ್ಥಿಕ ಪ್ಯಾಕೇಜ್ ನೀಡಿದ್ದು, ಸಂಪನ್ಮೂಲ ಲಭ್ಯತೆಯ ಆಧಾರದ ಮೇಲೆ ಇನ್ನೂ ಹೆಚ್ಚಿನ ನೆರವನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಹೇಳಿದರು.
ಕಳೆದ ಏಪ್ರಿಲ್.22ರಂದು ಹೆಬ್ಬಾಳದಲ್ಲಿ ಬಡವರಿಗೆ ಅಗತ್ಯ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಹೋದ್ಯೋಗಿ ಸಚಿವರೊಂದಿಗೆ ಡಾ.ಕೆ.ಸುಧಾಕರ್ ಕೂಡಾ ಭಾಗವಹಿಸಿದ್ದರು. ಈ ವೇಳೆ ಸೋಂಕಿತನ ಸಂಪರ್ಕಕ್ಕೆ ಒಳಗಾಗಿದ್ದರು. ಆದರೆ ತಾವೆಲ್ಲರೂ ಮಾಸ್ಕ್ ಧರಿಸಿದ್ದರಿಂದ ಅಪಾಯವಿಲ್ಲವೆಂದು ತಮಗೆ ಮೊದಲೇ ಅರಿವಿತ್ತು ಎಂದರು. ಕ್ವಾರಂಟೈನ್ ಅವಧಿಯಲ್ಲಿ ತಮಗೆ ಶುಭ ಹಾರೈಸಿದ ಎಲ್ಲರಿಗೂ ಸಚಿವರು ಧನ್ಯವಾದಗಳನ್ನು ತಿಳಿಸಿ, ಮಾಧ್ಯಮ ಮಿತ್ರರು ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕೋರಿದ್ದಾರೆ.