ಲಡ್ಡೂಸ್ ಹೋಟೆಲ್ ನೌಕರನ ಬಾಯಿಗೆ ಬೀಳಲಿಲ್ಲ ಲಡ್ಡು!
ಬೆಂಗಳೂರು, ಜುಲೈ 07 : ಹೋಟೆಲ್ ಮಾಲೀಕರು ಬ್ಯಾಂಕ್ಗೆ ಕಟ್ಟಿಬರಲು ಕೊಟ್ಟಿದ್ದ 4 ಲಕ್ಷ ಹಣವನ್ನು ಯಾರೋ ದರೋಡೆ ಮಾಡಿದರು ಎಂದು ಪೊಲೀಸರಿಗೆ ದೂರು ಕೊಟ್ಟ ಲಡ್ಡೂಸ್ ಹೋಟೆಲ್ ನೌಕರನ ನಾಟಕ 40 ನಿಮಿಷಗಳಲ್ಲಿ ಬಯಲಾಗಿದೆ. ಜೆ.ಪಿ.ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಬಿಟಿಎಂ ಲೇಔಟ್ನಲ್ಲಿರುವ ಲಡ್ಡೂಸ್ ಹೋಟೆಲ್ ನೌಕರ ಬಿಹಾರ ಮೂಲದ ಕೌಶಲ್ ಕಿಶೋರ್ (26) ಎಂದು ಗುರುತಿಸಲಾಗಿದೆ. ಹೋಟೆಲ್ ಮಾಲೀಕರು ಬ್ಯಾಂಕ್ಗೆ ಕಟ್ಟಲೆಂದು ಕೊಟ್ಟಿದ್ದ ಹಣವನ್ನು ಯಾರೋ ದರೋಡೆ ಮಾಡಿದ್ದಾರೆ ಎಂದು ಜೆ.ಪಿ.ನಗರ ಪೊಲೀಸರಿಗೆ ದೂರು ಕೊಟ್ಟು, ಕೊನೆಗೆ ತಾನೇ ಸಿಕ್ಕಿಬಿದಿದ್ದಾನೆ.[ಅಮೆರಿಕದಲ್ಲಿ ಚಿನ್ನದ ಬೇಟೆಯಾಡಿದ ಬಿಎನ್ ಎಸ್ ರೆಡ್ಡಿ]

ಘಟನೆ ವಿವರ : ಸೋಮವಾರ ಬೆಳಗ್ಗೆ ಲಡ್ಡೂಸ್ ಹೋಟೆಲ್ ಮಾಲೀಕ ಸುನಿಲ್ ಕುಮಾರ್ ಕಿಶೋರ್ ಕೈಗೆ 4 ಲಕ್ಷ ಹಣ ಮತ್ತು 1 ಲಕ್ಷ ರೂ. ಮೌಲ್ಯದ ಚೆಕ್ಅನ್ನು ನೀಡಿದ್ದಾರೆ. ಪ್ರತಿಬಾರಿ ಬ್ಯಾಂಕ್ಗೆ ಹಣ ಕಟ್ಟಲು ಕಿಶೋರ್ ಅವರನ್ನೇ ಸುನಿಲ್ ಕಳಿಸುತ್ತಿದ್ದರು.
ಹಣ ತೆಗೆದುಕೊಂಡು ಹೋದ ಕಿಶೋರ್ ಕೆಲವೇ ಹೊತ್ತಿನಲ್ಲಿ ಸುನಿಲ್ ಅವರಿಗೆ ಕರೆ ಮಾಡಿದ್ದ. ಬನ್ನೇರುಘಟ್ಟ ಮುಖ್ಯರಸ್ತೆಯ ಆಕ್ಸಿಸ್ ಬ್ಯಾಂಕ್ ಬಳಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾದರು ಎಂದು ಹೇಳಿದ್ದ. ಸುನಿಲ್ ಅವರು ಹೇಳಿದಂತೆ ಜೆ.ಪಿ.ನಗರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದ.
ಕಿಶೋರ್ ಜೊತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ಈತ ನೀಡುತ್ತಿರುವ ಮಾಹಿತಿ ಬಗ್ಗೆ ಅನುಮಾನ ಉಂಟಾಯಿತು. ಸ್ಥಳದಲ್ಲಿ ಸಿಕ್ಕ ಮಾಹಿತಿಗಳೂ ದರೋಡೆ ನಡೆದಿದೆ ಎಂಬುದಕ್ಕೆ ಪೂರಕವಾಗಿರಲಿಲ್ಲ. ಅನುಮಾನಗೊಂಡ ಪೊಲೀಸರು ಕಿಶೋರ್ನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾನೆ.
ಅದೇ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲಕ ಲಾಲೂ ಎಂಬುವವನ ಕೈಗೆ ಹಣ ಕೊಟ್ಟ ಕಿಶೋರ್ ಅದನ್ನು ಬಚ್ಚಿಡುವಂತೆ ಹೇಳಿ, ದರೋಡೆಯಾದ ನಾಟಕ ಮಾಡಿದ್ದ. ಘಟನೆ ನಡೆದ ಕೇವಲ 40 ನಿಮಿಷಗಳಲ್ಲಿ ಪೊಲೀಸರು ಪ್ರಕರಣ ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.












Click it and Unblock the Notifications