ಮಾರುಕಟ್ಟೆಗೆ ಮಾರ್ಚ್ ಅಂತ್ಯಕ್ಕೆ ಲಗ್ಗೆ ಇಡಲಿವೆ ರುಚಿಯಾದ ಮಾವು
ಬೆಂಗಳೂರು, ಮಾರ್ಚ್ 07: ಈ ಬಾರಿ ಬಾರಿ ಮಾವು ಬೆಳೆಯನ್ನು ನಿರೀಕ್ಷಿಸಿದ ಬೆಳೆಗಾರರಿಗೆ ಆಘಾತವಾಗಿದೆ. ಕಳೆದ ವರ್ಷ ಆದ ಭಾರಿ ಮಳೆಯು ಮಾವಿನ ಉತ್ಪಾದನೆಗೆ ಪೆಟ್ಟು ನೀಡಿದೆ.
ಹೂಬಿಟ್ಟ ನಂತರ ಮರದಲ್ಲಿ ಮತ್ತೆ ಚಿಗುರು ಕಾಣಿಸಿಕೊಂಡಿದ್ದರಿಂದ ಹೂವುಗಳೆಲ್ಲ ಉದುರಿ ಹೋಗಿದ್ದು, ಮಾವಿನ ಉತ್ಪಾದನೆ ಮೇಲೆ ಹೊಡೆತ ಬಿದ್ದಿದೆ.
ಈ ಬಾರಿ ಮಾರ್ಚ್ ಅಂತ್ಯದೊಳಗೆ ಮಾವು ಮಾರುಕಟ್ಟೆಗೆ ಬರಲಿದೆ. ಆದರೆ ಹೂವುಗಳು ಉದುರುವಿಕೆಯಿಂದ ಮಾವು ಉತ್ಪಾದನೆ ಶೇ.50-60ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ರೈತರು ಬೇಗ ಬೆಳೆ ಬರಲಿ ಎಂಬ ಕಾರಣಕ್ಕೆ ಈ ಬಾರಿ ಕಲ್ಟಾರ್ ಎಂಬ ಔಷಧ ಸಿಂಪಡಿಸಿದ್ದಾರೆ.
ಹೀಗಾಗಿ ಡಿಸೆಂಬರ್ ನಲ್ಲೇ ಮರಗಳು ಹೂ ಬಿಟ್ಟಿದ್ದವು. ಆಗ ಅಳಿದುಳಿದ ಹೂವಿನಿಂದ ಕಚ್ಚಿಕೊಂಡಿರುವ ಕಾಯಿಗಳು ಈ ಬಾರಿ ಬೇಗ ಮಾರುಕಟ್ಟೆಗೆ ಬರಲಿವೆ ಎಂಬುದು ತೋಟಗಾರಿಕೆ ತಜ್ಞರ ಲೆಕ್ಕಾಚಾರವಾಗಿದೆ. ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಸಾವಿರಾರು ಕಾಯಿಗಳನ್ನು ಬಿಡುವ ಮರವೊಂದರಲ್ಲಿ ಕಾಯಿಗಿಂತ ಹೆಚ್ಚು ಚಿಗುರು ಕಾಣಿಸುತ್ತಿದೆ, ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಮಾವಿನ ಮರ ಎಲ್ಲ ಪೋಷಕಾಂಶಗಳನ್ನು ಹೋರಿಕೊಂಡು ಹೂವು ಬಿಟ್ಟು ಕಾಯಾಗುವ ಸಮಯದಲ್ಲಿ ಮತ್ತೆ ಚಿಗುರಿತು.

ಆರಂಭದಲ್ಲಿ ಮಾವಿನ ಹೂವು ಗಮನಿಸಿದ್ದ ಹಣ್ಣಿನ ತಜ್ಞರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಈ ಬಾರಿಯೂ ಏರಿಕೆ ಹಂಗಾಮು ಎಂದು ಸಂಭ್ರಮಿಸಿದ್ದರು. ಆದರೆ ಹೂವು ಉದುರುವಿಕೆಯಿಂದಾಗಿ ಇಳಿಕೆ ಹಂಗಾಮು ಎಂದು ನಿರ್ಧರಿಸಲಾಗಿದೆ.
ರೈತರಿಗೆ ಗ್ಯಾಪ್ ಸರ್ಟಿಫಿಕೇಟ್: ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮವು 230 ಮಾವು ಬೆಳೆಗಾರರನ್ನು ಗುರುತಿಸಿ ಅವರಿಗೆ ಗ್ಲೋಬಲ್ ಗ್ಯಾಪ್ ಸರ್ಟಿಫಿಕೇಟ್ ನೀಡಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಈ ರೈತರು ಗುಣಮಟ್ಟದ ಮಾವ್ನು ಹೊರ ರಾಷ್ಟ್ರಗಳಿಗೆ ರಫ್ತು ಮಾಡಲು ಅರ್ಹತೆ ನೀಡುವುದೇ ಈ ಸರ್ಟಿಫಿಕೇಟ್ ನ ಉದ್ದೇಶವಾಗಿದೆ.












Click it and Unblock the Notifications