ಮೋದಿ ವಿರುದ್ಧ ಅವಹೇಳನಕಾರಿ ಮಾತು: ಮೇವಾನಿ, ರೈ ವಿರುದ್ಧ ದೂರು
ಬೆಂಗಳೂರು, ಮೇ 01: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದ ಗುಜರಾತಿನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ನಟ ಪ್ರಕಾಶ್ ರೈ ವಿರುದ್ಧ ಕರ್ನಾಟಕ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ.
ಏ.29 ರಂದು ಬೆಂಗಳೂರಿನಲ್ಲಿ ಭಾಷಣ ಮಾಡುತ್ತಿದ್ದ ವೇಳೆಯಲ್ಲಿ "ಪ್ರಧಾನಿ ನರೇಂದ್ರ ಮೋದಿ ಒಬ್ಬ ಕಾರ್ಪೋರೇಟ್ ಸೇಲ್ಸ್ ಮನ್ ಮತ್ತು ಕಳ್ಳ. ಅವರು ದೇಶವನ್ನು ಕೊಳ್ಳೆಹೊಡೆದಿದ್ದಾರೆ" ಎಂದು ಜಿಗ್ನೇಶ್ ಮೇವಾನಿ ಹೇಳಿದ್ದರು.
'ನರೇಂದ್ರ ಮೋದಿ ಮತ್ತು ಬಿ ಎಸ್ ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಮೇವಾನಿ ಮತ್ತು ರೈ ಮಾತನಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನೀಡಿದ ದೂರಿನಲ್ಲಿ ಮನವಿಮಾಡಿಕೊಳ್ಳಲಾಗಿದೆ'

"ಯಡಿಯೂರಪ್ಪ ಮತ್ತು ಅವರ ಪ್ರೇಮಿ ಇಬ್ಬರೂ ಚುನಾವಣೆಯ ನಂತರ ಕರ್ನಾಟಕದಿಂದ ಕಾಲ್ಕೀಳುತ್ತಾರೆ" ಎಂದಿದ್ದ ಹಿರಿಯ ರಾಜಕಾರಣಿ ಎ ಕೆ ಸುಬ್ಬಯ್ಯ ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.
ಜಿಗ್ನೇಶ್ ಮೇವಾನಿ ಮತ್ತು ಪ್ರಕಾಶ್ ರೈ ಅವರಿಗೆ ಕರ್ನಾಟಕದಲ್ಲಿ ಇನ್ನು ಮುಂದೆ ಯಾವುದೇ ಸಾರ್ವಜನಿಕ ಸಭೆ ನಡೆಸಲು ಅನುಮತಿ ನೀಡಬಾರದೆಂದೂ ದೂರುಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ಚುನಾವಣೆಗಾಗಿ ಹಲವು ದಿನಗಳಿಂದ ರಾಜ್ಯದಲ್ಲೇ ಇರುವ ಜಿಗ್ನೇಶ್ ಮೇವಾನಿ ಬಿಜೆಪಿ ವಿರುದ್ಧ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.












Click it and Unblock the Notifications