ಸ್ಪೀಕರ್ ಮುಂದೆ ವಿಚಾರಣೆಗೆ ಅತೃಪ್ತ ಶಾಸಕರು ಗೈರು
ಬೆಂಗಳೂರು, ಜುಲೈ 23: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನೀಡಿರುವ ದೂರಿನ ಅನ್ವಯ ಇಂದು ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ನೀಡಿರುವ ಸೂಚನೆಗೆ ಕಾಲಾವಕಾಶ ನೀಡುವಂತೆ ಅತೃಪ್ತ ಶಾಸಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮಂಗಳವಾರ ಬೆಳಿಗ್ಗೆ 11 ಗಂಟೆ ಒಳಗೆ ತಮ್ಮ ಮುಂದೆ ಹಾಜರಾಗುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು 15 ಮಂದಿ ಅತೃಪ್ತ ಶಾಸಕರಿಗೆ ನೋಟಿಸ್ ನೀಡಿದ್ದರು.
ಆದರೆ, ಮುಂಬೈನಲ್ಲಿರುವ ಹಾಗೂ ರಾಜ್ಯದಲ್ಲಿ ಇದ್ದೂ ಸದನಕ್ಕೆ ಗೈರು ಹಾಜರಾಗಿರುವ ಎಲ್ಲ ಶಾಸಕರೂ ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಖುದ್ದು ಹಾಜರಾಗಲು ನಾಲ್ಕು ವಾರಗಳ ಸಮಯ ಬೇಕು ಎಂದು ಅವರು ಪತ್ರ ಬರೆದು ಕೋರಿದ್ದಾರೆ.
ಒಂದು ವೇಳೆ ತಮ್ಮ ಮನವಿಯನ್ನು ಸ್ಪೀಕರ್ ಪುರಸ್ಕರಿಸದೆ ಹೋದರೆ ಕಾನೂನು ಹೋರಾಟಕ್ಕೂ ಅವರು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇವೆ
ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಮ್ಮ ರಾಜೀನಾಮೆಯನ್ನು ಶೀಘ್ರವೇ ಅಂಗೀಕಾರ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇವೆ. ಈ ನಡುವೆ ನಮ್ಮ ಪಕ್ಷದ ನಾಯಕರು ನಮ್ಮನ್ನು ಅನರ್ಹಗೊಳಿಸುವಂತೆ ನಿಮಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದು ಗೊತ್ತಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ನಾಲ್ಕು ವಾರಗಳ ಸಮಯ ಬೇಕು
ಆದರೆ, ನಮ್ಮನ್ನು ಅನರ್ಹತೆಗೊಳಿಸುವ ಸಂಬಂಧ ಪಕ್ಷದ ಕಡೆಯಿಂದ ನಮಗೆ ಯಾವುದೇ ನೋಟಿಸ್ ಅಥವಾ ಮಾಹಿತಿ ಬಂದಿಲ್ಲ. ಕೆಲವು ಅನಿವಾರ್ಯ ಕಾರಣಗಳಿಂದ ನಾವು ಹೊರಗೆ ಇದ್ದೇವೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಕನಿಷ್ಠ ನಾಲ್ಕು ವಾರಗಳ ಸಮಯ ಬೇಕು ಎಂದು ಕೋರಿದ್ದಾರೆ. ಅರ್ಜಿ ಪ್ರಕ್ರಿಯೆ ನಡೆಸಲು ಕನಿಷ್ಠ ಏಳು ದಿನಗಳ ಸಮಯ ಬೇಕು. ನೀವು ಅವಸರ ಮಾಡುತ್ತಿದ್ದೀರಿ. ಕಾಂಗ್ರೆಸ್ನ ಅರ್ಜಿಯ ಪ್ರತಿ ಕೈಗೆ ಸಿಕ್ಕ ಬಳಿಕ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಹೇಳಿದ್ದಾರೆ.

ಶಾಸಕರ ಅನರ್ಹತೆಗೆ ದೂರು
ಕಾಂಗ್ರೆಸ್ನ 12 ಮತ್ತು ಜೆಡಿಎಸ್ನ 3 ಅತೃಪ್ತ ಶಾಸಕರ ವಿರುದ್ಧ ಎರಡೂ ಪಕ್ಷಗಳ ನಾಯಕರು ಸ್ಪೀಕರ್ಗೆ ದೂರು ನೀಡಿದ್ದರು. ಕಾಂಗ್ರೆಸ್ ಪಕ್ಷೇತರ ಶಾಸಕ ಶಂಕರ್ ವಿರುದ್ಧವೂ ದೂರು ನೀಡಿತ್ತು. ಜುಲೈ 18ರಂದು ಈ ನೋಟಿಸ್ ನೀಡಲಾಗಿತ್ತು. ಪಕ್ಷದ ವಿಪ್ಅನ್ನು ಉಲ್ಲಂಘಿಸಿ ಸದನಕ್ಕೆ ಗೈರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಸ್ಪೀಕರ್ ಅವರನ್ನು ಕರೆಸಿ ವಿಚಾರಣೆಗೆ ಒಳಪಡಿಸಲಿ ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸ್ಪೀಕರ್ ಕಚೇರಿಯಿಂದ ನೋಟಿಸ್ ಜಾರಿಮಾಡಲಾಗಿತ್ತು.

ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಕಣ್ಣು
ಇತ್ತ ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್ಗೆ ಅರ್ಜಿಸಲ್ಲಿಸಿದ್ದರೆ. ಸುಪ್ರೀಂಕೋರ್ಟ್ನ ಆದೇಶದಿಂದ ಶಾಸಕಾಂಗ ಪಕ್ಷದ ನಾಯಕರ ಅಧಿಕಾರ ಮೊಟಕುಗೊಳ್ಳುತ್ತಿದೆ. ಆದ್ದರಿಂದ ವಿಪ್ ಕುರಿತಂತೆ ಸ್ಪಷ್ಟೀಕರಣ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರು ಸದನದಲ್ಲಿ ಎತ್ತಿದ್ದ ಕ್ರಿಯಾಲೋಪದ ಬಗ್ಗೆ ರೂಲಿಂಗ್ ನೀಡಿದ್ದ ಸ್ಪೀಕರ್, ಸದಸ್ಯರಿಗೆ ವಿಪ್ ನೀಡುವುದು ಶಾಸಕಾಂಗ ಪಕ್ಷದ ನಾಯಕರ ಹಕ್ಕು ಎಂದು ಹೇಳಿದ್ದರು.












Click it and Unblock the Notifications