ಶ್ರೀ ಶ್ರೀ ರವಿಶಂಕರ್ ಶಾಲೆಯ ಶಿಕ್ಷಕನಿಂದ ಅನುಚಿತ ವರ್ತನೆ
ಬೆಂಗಳೂರು, ಜು. 26: ವಿಬ್ಗಯಾರ್ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಬೆಂಕಿ ಆರುವ ಮುನ್ನವೇ ನಗರದ ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ದೈಹಿಕ ಶಿಕ್ಷಕನೊಬ್ಬ ಅನುಚಿತವಾಗಿ ವರ್ತಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕನಕಪುರ ರಸ್ತೆಯ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ಶಿಕ್ಷಕ ಡಿ.ಆರಿಫುಲ್ಲಾ, ವಿದ್ಯಾರ್ಥಿನಿಯರ ಜತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧವಾಗಿ ಜುಲೈ 21ರಂದು ವಿದ್ಯಾರ್ಥಿನಿಯೊಬ್ಬಳು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ. ಆ ದೂರು ಆಧರಿಸಿ ಮಾರನೇ ದಿನವೇ ಆಡಳಿತ ಮಂಡಳಿ ಆರೀಫ್ಗೆ ಎಚ್ಚರಿಕೆ ನೀಡಿ, 15 ದಿನ 'ದೀರ್ಘ ರಜೆ' ಮೇಲೆ ಕಳುಹಿಸಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರು ಪೋಷಕರೊಂದಿಗೆ ಶುಕ್ರವಾರ ಸಭೆ ನಡೆಸಿ ಚರ್ಚಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಆತ ತನ್ನ ಮೇಲೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಆದರೆ ಆತ ಯಾವುದೇ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಶಾಲೆಯ ಪ್ರಾಂಶುಪಾಲೆ ಸುಮಾ ಅತ್ರಿ ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಪ್ರಕಾರ ಮಕ್ಕಳ ಮೇಲೆ ದೈಹಿಕ ಸ್ಪರ್ಶ ಮಾಡದಿದ್ದರೂ ಕೆಟ್ಟ ದೃಷ್ಟಿಯಿಂದ ನೋಡುವುದು ಕೂಡ ಲೈಂಗಿಕ ಕಿರುಕುಳ ಎಂದೇ ಪರಿಗಣನೆಯಾಗುವುದರಿಂದ ಹಕ್ಕುಗಳ ರಕ್ಷಣಾ ಆಯೋಗ ಈ ಘಟನೆ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.[ವಿಬ್ ಗಯಾರ್ ಶಾಲೆಯ ಸಂಸ್ಥಾಪಕನ ಬಂಧನ]













Click it and Unblock the Notifications